ಹಂಸಲೇಖ ನಿರ್ದೇಶನದ ‘ಓಕೆ’ ಚಿತ್ರಕ್ಕೆ ರವಿಚಂದ್ರನ್ ಹಾರೈಕೆ; ಮನಸಾರೆ ಮಾತಾಡಿದ ಕ್ರೇಜಿ ಸ್ಟಾರ್

‘ಓಕೆ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ರವಿಚಂದ್ರನ್ ಅವರು ಹಂಸಲೇಖ ಬಗ್ಗೆ ಮಾತನಾಡಿದರು. ‘ನಾವು ದೂರ ಆಗಿರಬಹುದು. ಆದರೆ ಸ್ನೇಹ ಕಡಿಮೆ ಆಗಿಲ್ಲ. ಆ ಸ್ನೇಹ ಗಟ್ಟಿಯಾಗಿಯೇ ಇದೆ. ಒಟ್ಟಿಗೆ ಸಿನಿಮಾ ಮಾಡೋಕೆ ಆಗಿಲ್ಲದೇ ಇರಹುದು. ಮತ್ತೆ ಸಿನಿಮಾ ಮಾಡೋಕೆ ಸಮಯ ಬರಬೇಕು’ ಎಂದು ರವಿಚಂದ್ರನ್ ಅವರು ಹೇಳಿದರು.

ಹಂಸಲೇಖ ನಿರ್ದೇಶನದ ‘ಓಕೆ’ ಚಿತ್ರಕ್ಕೆ ರವಿಚಂದ್ರನ್ ಹಾರೈಕೆ; ಮನಸಾರೆ ಮಾತಾಡಿದ ಕ್ರೇಜಿ ಸ್ಟಾರ್
Hamsalekha, Ravichandran

Updated on: Jun 23, 2025 | 9:56 PM

ಹಂಸಲೇಖ ಅವರು ‘ಓಕೆ’ (OK Movie) ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿ ಇಂದು (ಜೂನ್ 23) ನಡೆಯಿತು. ನಿರ್ದೇಶಕನಾಗಬೇಕು ಎಂಬುದು ಹಂಸಲೇಖ (Hamsalekha) ಅವರ ಆಸೆ ಆಗಿತ್ತು. ಆದರೆ ಇಷ್ಟು ವರ್ಷಗಳ ಕಾಲ ಅದು ಈಡೇರಿರಲಿಲ್ಲ. ಆ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ನಾನು ನಿರ್ದೇಶಕನಾಗಬೇಕು ಅಂತಲೇ ಉದ್ಯಮಕ್ಕೆ ಬಂದೆ. ಆದರೆ ನಿರ್ದೇಶಕ ಆಗುವ ಬದಲು ಬೇರೆಯವರಿಗೆ ಬೆಂಬಲ ನೀಡುತ್ತಾ, ಅವರನ್ನು ಮೇಲೆ ತರುವ ಪ್ರಯತ್ನದಲ್ಲಿ ಮುಳುಗಿದೆ. ನಿರ್ದೇಶಕನಾಗುವ ಕನಸು ಈಡೇರದೆಯೇ ನನ್ನ ಬದುಕು ಮುಗಿಯಿತೇನೋ ಎಂದುಕೊಂಡಿದ್ದೆ. ಆದರೆ ಈ ಚಂದನವನ ಆ ನನ್ನ ಕನಸನ್ನು ಇಂದು ನನಸಾಗಿಸುತ್ತಿದೆ’ ಎಂದು ಹಂಸಲೇಖ ಹೇಳಿದರು. ಈ ಸುದ್ದಿಗೋಷ್ಠಿಗೆ ನಟ ರವಿಚಂದ್ರನ್ (Ravichandran) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

‘ಇಂದು ಶೂಟಿಂಗ್ ಕ್ಯಾನ್ಸಲ್ ಮಾಡಿ ಕನಕಪುರದಿಂದ ನಾನು ಈ ಕಾರ್ಯಕ್ರಮಕ್ಕೆ ಓಡಿಬಂದೆ. ಎಲ್ಲಿಂದ ಮಾತು ಶುರು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ನೀವು ರಾಜು (ಹಂಸಲೇಖ). ಆದರೆ ನನ್ನನ್ನು ಪರದೆ ಮೇಲೆ ರಾಜನಾಗಿ ಮೆರವಣಿಗೆ ಮಾಡಿಸಿದ್ದು ನೀವೇ. ನಾನು ಪರದೆಯಲ್ಲಿ ಮೆರೆದಿದ್ದರೆ ಅದಕ್ಕೆ ನೀವು ಮತ್ತು ನಿಮ್ಮ ಹಾಡುಗಳು ಕಾರಣ’ ಎಂದರು ರವಿಚಂದ್ರನ್.

‘ಸಿನಿಮಾ ಓಡುತ್ತಿಲ್ಲ ಅಂತ ಜನ ಹೇಳ್ತಾರೆ. ಆದರೆ ಪ್ರತಿ ವಾರ ಎಲ್ಲರೂ ಸಕ್ಸಸ್ ಮೀಟ್ ಮಾಡುತ್ತಿದ್ದಾರೆ. ಅದು ಸಮಸ್ಯೆ ಆಗಿದೆ. 1986ರಲ್ಲಿ ನಾವು ಕೊಡಲು ಶುರು ಮಾಡಿದೆವಲ್ಲ ಅದು ಸಕ್ಸಸ್. ಒಂದು ದಿನವೂ ನಾವು ಸಕ್ಸಸ್ ಅನ್ನು ಹೆಗಲಮೇಲೆ ಹಾಕಿಕೊಳ್ಳಲಿಲ್ಲ. ಯಾಕೆಂದರೆ ಒಂದು ಸಿನಿಮಾ ಆಗುತ್ತಿದ್ದಂತೆಯೇ ಇನ್ನೊಂದು ಸಿನಿಮಾ ಶುರು ಮಾಡುತ್ತಿದ್ದೆವು. ಹಂಸಲೇಖ ನನಗೆ ಸಿಕ್ಕಿದ್ದು ವಿಧಿ ಬರಹದಿಂದ. ನನ್ನ ಮತ್ತು ಹಂಸಲೇಖ ಸ್ನೇಹದಲ್ಲಿ ಲೆಕ್ಕಾಚಾರ ಇರಲಿಲ್ಲ’ ಎಂದು ರವಿಚಂದ್ರನ್ ಹೇಳಿದರು.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

‘ನನಗೆ ಲೆಕ್ಕಾಚಾರ ಗೊತ್ತಿಲ್ಲ. ಸಿನಿಮಾ ಮಾಡುವುದು ಮಾತ್ರ ನನಗೆ ಗೊತ್ತು. ಇಂದಿಗೂ ಯಾರಾದರೂ ಪ್ರೇಮಲೋಕ, ರಣಧೀರ ಸಿನಿಮಾಗಳ ಲಾಭ ಎಷ್ಟು ಅಂತ ಕೇಳಿದರೆ ನನಗೆ ಗೊತ್ತಿಲ್ಲ. ಎನ್​.ಎಸ್​. ರಾವ್ ಅವರು ನನಗೆ ಹಂಸಲೇಖ ಅವರ ಪರಿಚಯ ಮಾಡಿಕೊಟ್ಟರು. ನನ್ನ ಮತ್ತು ಹಂಸಲೇಖ ಸ್ನೇಹ ಕಲ್ಮಶ ಇಲ್ಲದ್ದು. ಹೆಗಲ ಮೇಲೆ ಕೈ ಹಾಕಿಕೊಂಡು ಹೋಗಿಲ್ಲ. ಬಾರಲ್ಲಿ ಕುಳಿತಿಲ್ಲ. ಒಟ್ಟಿಗೆ ಸಿನಿಮಾ ಮಾಡಿದೆವು ಅಷ್ಟೇ’ ಎಂದರು ರವಿಚಂದ್ರನ್.

ಇದನ್ನೂ ಓದಿ: ‘ತಮಿಳಿಗೆ ಲಿಪಿ ನೀಡಿದ್ದು ಕನ್ನಡ’: ಕಮಲ್ ಹಾಸನ್​ಗೆ ಹಂಸಲೇಖ ಖಡಕ್ ತಿರುಗೇಟು

‘ನಮ್ಮಿಬ್ಬರ ಸ್ನೇಹ ದೂರ ಆಯಿತು. ಅದಕ್ಕೆ ಕಾರಣ ಗೊತ್ತಿಲ್ಲ. ನಾವು ಎಂದಿಗೂ ಜಳಗ ಆಡಿಲ್ಲ. ಆ ಸಮಯ ಆ ರೀತಿ ಇತ್ತು ಎನಿಸುತ್ತದೆ. ಈಗ ಅವರೇ ನಿರ್ದೇಶನ ಮಾಡಲು ಬಂದಿದ್ದಾರೆ. ಎಲ್ಲರೂ ಕಾಯುತ್ತಿದ್ದಾರೆ. ಏನೇ ಮಾಡಿದರೂ ಹಂಸಲೇಖ ಅವರೇ ನನ್ನ ಹೃದಯಬಡಿತ. ನನ್ನ ಹಾರ್ಟ್​ಬೀಟ್ ನೀವು. ನಿಮ್ಮ ನಿರ್ದೇಶನದ ಪ್ರಯತ್ನಕ್ಕೆ ಗೆಲುವು ಸಿಗಲಿ. ನಾನು ಮಾತ್ರವಲ್ಲ, ಇಡೀ ಕರ್ನಾಟಕದ ಜನತೆ ನಿಮ್ಮ ಜೊತೆಗೆ ಇರುತ್ತದೆ’ ಎಂದು ರವಿಚಂದ್ರನ್ ಅವರು ಹಾರೈಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.