
ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದಿವೆ. ಈ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಹಾಗೂ ನಟ ದರ್ಶನ್ (Darshan) ಪರ ಹಿರಿಯ ವಕೀಲ ಹಷ್ಮತ್ ಪಾಷಾ ತಮ್ಮ ಸುದೀರ್ಘ ವಾದ ಮಂಡಿಸಿದರು. ಅದರ ವಿವರ ಇಲ್ಲಿದೆ.
ಸಿಆರ್ಪಿಸಿ ಸೆಕ್ಷನ್ 306 ಮತ್ತು 307ರ ಅಡಿಯಲ್ಲಿ ಮಾಫಿ ಸಾಕ್ಷಿ ಮಾಡಲು ಅವಕಾಶವಿದೆ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ವಾದಿಸಿದರು. ಕ್ಷಮಾದಾನ ನೀಡುವಾಗ ನ್ಯಾಯಾಧೀಶರು ನಿರ್ದಿಷ್ಟ ಕಾರಣಗಳನ್ನು ನಮೂದಿಸಬೇಕಾಗುತ್ತದೆ ಹಾಗೂ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಮಾಫಿ ಸಾಕ್ಷಿಯಾಗಬಯಸುವ ಆರೋಪಿಯು ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ವಿನಯ್ ಕುಲಕರ್ಣಿ ಪ್ರಕರಣದ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು. ಈ ಹಂತದಲ್ಲಿ ಇತರೆ ಸಹ ಆರೋಪಿಗಳ ವಾದವನ್ನು ಕೇಳುವ ಅಗತ್ಯವಿಲ್ಲ ಹಾಗೂ ಪ್ರಕ್ರಿಯೆಯಲ್ಲಿ ಲೋಪಗಳಿದ್ದರೆ ಅದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸಿದರು.
ಎಸ್ಪಿಪಿ ವಾದಕ್ಕೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಮತ್ತು ವಾದ ಮಂಡಿಸುವ ಮೂಲಭೂತ ಹಕ್ಕು ಆರೋಪಿಗೆ ಇದೆ ಎಂದು ಪ್ರತಿಪಾದಿಸಿದರು. ಮಾಫಿ ಸಾಕ್ಷಿ ಕೋರಿದ ಅರ್ಜಿಯ ಪ್ರತಿಯನ್ನು ನಮಗೆ ನೀಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಸಾಕ್ಷಿ ಹೇಳುತ್ತೇನೆ ಎಂದ ತಕ್ಷಣ ಕ್ಷಮಾದಾನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ: ದರ್ಶನ್ಗೆ ಶಾಕ್ ಮೇಲೆ ಶಾಕ್; ಪ್ರದೋಷ್ ಬಳಿಕ ಮತ್ತಿಬ್ಬರು ಮಾಫಿ ಸಾಕ್ಷಿ ಅರ್ಜಿ
ಪ್ರದೋಷ್ ಪ್ರಕರಣದ ಮುಖ್ಯ ಸಂಚುಕೋರರಲ್ಲಿ ಒಬ್ಬನಾಗಿದ್ದು, ಕೊಲೆ ಮತ್ತು ಸಾಕ್ಷ್ಯ ನಾಶದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾನೆ. ಸಾಕ್ಷ್ಯ ಮುಚ್ಚಿಹಾಕಲು ದರ್ಶನ್ ಕಡೆಯಿಂದ ₹30 ಲಕ್ಷ ಹಣ ಸ್ವೀಕರಿಸಿದ್ದ ಹಾಗೂ ಬೇರೆ ವ್ಯಕ್ತಿಗಳನ್ನು ಶರಣಾಗಿಸಲು ಸೂತ್ರಧಾರಿಯಾಗಿದ್ದ ಎಂಬ ಆರೋಪವಿದೆ. ಘಟನಾ ಸ್ಥಳದಲ್ಲಿ ಹಾಜರಿದ್ದು ರೇಣುಕಾಸ್ವಾಮಿ ಸಾವಿನ ವಿಚಾರವನ್ನು ದರ್ಶನ್ಗೆ ತಿಳಿಸಿದ್ದಲ್ಲದೆ, ಪಟ್ಟಣಗೆರೆ ಶೆಡ್ಗೆ ಪವಿತ್ರಾ ಗೌಡ ಅವರನ್ನು ಕರೆತಂದಿದ್ದ ಆರೋಪವೂ ಆತನ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:36 pm, Thu, 6 August 26