
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದ ಮೂಲಕ ಬಹುದೊಡ್ಡ ಯಶಸ್ಸು ಕಂಡಿದ್ದಾರೆ. ಈ ಸಿನಿಮಾದಿಂದ ಅವರಿಗೆ ಸಖತ್ ಖ್ಯಾತಿ ಸಿಕ್ಕಿದೆ. ಸಿನಿಮಾ ನಿರ್ಮಾಣ ಮಾಡುವಾಗ ಸಾಕಷ್ಟು ಅಡೆತಡೆಗಳು ಉಂಟಾಗಿದ್ದವು. ಆ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಅವರು ಸಿನಿಮಾ ಮಾಡಿದ್ದರು. ಅದಕ್ಕೆ ಸೂಕ್ತ ಪ್ರತಿ ಫಲ ಸಿಕ್ಕಿತು. ಈಗ ರಿಷಬ್ ಶೆಟ್ಟಿ (Rishab Shetty) ಅವರು ಕುಟುಂಬ ಸಮೇತರಾಗಿ ಹರಿಕೆ ತೀರಿಸಲು ದೈವಸ್ಥಾನಕ್ಕೆ ಬಂದಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕೂಡ ಸಾತ್ ನೀಡಿದ್ದಾರೆ.
‘ಕಾಂತಾರ ಚಾಪ್ಟರ್ 1’ ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡದವರು ಹರಕೆ ತೀರಿಸಲು ಬಂದಿದ್ದಾರೆ. ಮಂಗಳೂರಿನಲ್ಲಿ ‘ಕಾಂತಾರ’ ತಂಡದಿಂದ ಹರಕೆ ನೇಮೋತ್ಸವ ಮಾಡಲಾಗಿದೆ. ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನಡೆದಿದೆ. ರಿಷಬ್ ಶೆಟ್ಟಿ ಹಾಗೂ ‘ಹೊಂಬಾಳೆ ಫಿಲ್ಮ್ಸ್’ ವತಿಯಿಂದ ಹರಕೆ ನೇಮೋತ್ಸವ ಮಾಡಲಾಗಿದೆ.
ವಾರಾಹಿ ಪಂಜುರ್ಲಿ ದೈವದ ನೇಮದಲ್ಲಿ ಚಿತ್ರತಂಡ ಭಾಗಿಯಾಗಿದೆ. ರಿಷಬ್ ಶೆಟ್ಟಿ ಅವರು ಪತ್ನಿ ಹಾಗೂ ಮಕ್ಕಳ ಜೊತೆ ನೇಮೋತ್ಸವಕ್ಕೆ ಆಗಮಿಸಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಇದರಲ್ಲಿ ಭಾಗಿ ಆಗಿದ್ದಾರೆ. ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಕೂಡ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡ ಭಾಗಿಯಾಗಿದೆ.
ಕಳೆದ ಎಪ್ರಿಲ್ ತಿಂಗಳಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬದವರು ಭಾಗಿಯಾಗಿದ್ದರು. ಮಗನ ಹುಟ್ಟುಹಬ್ಬದ ದಿನ ಬಾರೆಬೈಲು ದೇವಸ್ಥಾನಕ್ಕೆ ರಿಷಬ್ ಆಗಮಿಸಿದ್ದರು. ಇಂದು ಅದೇ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಅವರ ಕುಟುಂಬದಿಂದ ಹರಕೆ ನೇಮೋತ್ಸವ ಸಲ್ಲಿಕೆ ಮಾಡಲಾಗಿದೆ. ಈ ಸಂದರ್ಭದ ವಿಡಿಯೋ ಕೂಡ ಲಭ್ಯವಾಗಿದೆ.
ಇದನ್ನೂ ಓದಿ: ದೈವ ಅವಮಾನಿಸಿದ ರಣವೀರ್ಗೆ ರಿಷಬ್ ಕೊಟ್ಟ ಉತ್ತರ ಹೇಗಿತ್ತು ನೋಡಿ
ಈ ಮೊದಲು ಬಂದಾಗ ಸಿನಿಮಾ ‘ಸಂಸಾರ’ದಲ್ಲಿ ಜಾಗರೂಕತೆಯಿಂದ ಇರುವಂತೆ ದೈವ ಎಚ್ಚರಿಕೆ ನೀಡಿತ್ತು. ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ಗಳು ಇರ್ತಾರೆ, ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ ಸೂಚನೆ ಕೊಟ್ಟಿತ್ತು. ಹರಕೆ ಕಟ್ಟಿಕೊಂಡಿದ್ದರೆ ಅದನ್ನು ಕೊಟ್ಟು ಬಿಡು ಎಂದು ರಿಷಬ್ ಶೆಟ್ಟಿಗೆ ದೈವ ಸೂಚಿಸಿತ್ತು. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಅದಕ್ಕಾಗಿ ರಿಷಬ್ ಶೆಟ್ಟಿ ಅವರು ಹರಕೆ ರಿಷಬ್ ಹರಕೆ ಸಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:52 pm, Thu, 4 December 25