AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರೂ ಒಟ್ಟಾಗಿ, ಪ್ರೀತಿಯಿಂದ ಇರೋಣ’; ಸ್ಯಾಂಡಲ್​ವುಡ್​ ಮಂದಿಗೆ ಯಶ್​ ನೀಡಿದ್ರು ಕರೆ

ಮಂಗಳವಾರ (ಅಕ್ಟೋಬರ್​ 26) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಶಿವರಾಜ್​ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ಪ್ರೀ-ರಿಲೀಸ್​ ಇವೆಂಟ್​ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ದಂಡೇ ನೆರೆದಿತ್ತು.

‘ಎಲ್ಲರೂ ಒಟ್ಟಾಗಿ, ಪ್ರೀತಿಯಿಂದ ಇರೋಣ’; ಸ್ಯಾಂಡಲ್​ವುಡ್​ ಮಂದಿಗೆ ಯಶ್​ ನೀಡಿದ್ರು ಕರೆ
ಯಶ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 27, 2021 | 1:50 PM

Share

ಯಶ್​ ಈಗ ಪ್ಯಾನ್​ ಇಂಡಿಯಾ ಸ್ಟಾರ್​​. ಸ್ಯಾಂಡಲ್​ವುಡ್​ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗೂ ಬಾಲಿವುಡ್​ನಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಅವರನ್ನು ಬೆಳೆಸಿದ ಸ್ಯಾಂಡಲ್​ವುಡ್​ ಬಗ್ಗೆ ಅವರಿಗೆ ಅಪಾರ ಗೌರವವಿದೆ. ಸ್ಯಾಂಡಲ್​ವುಡ್​ನಲ್ಲಿ ಒಗ್ಗಟ್ಟು ಇರಬೇಕು ಎನ್ನುವುದು ಅವರ ಆಶಯ. ಈ ವಿಚಾರಕ್ಕೆ ಸಂಬಂಧಿಸಿ ಅವರು ಈಗ ಕರೆಯೊಂದನ್ನು ನೀಡಿದ್ದಾರೆ.

ಮಂಗಳವಾರ (ಅಕ್ಟೋಬರ್​ 26) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಶಿವರಾಜ್​ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ಪ್ರೀ-ರಿಲೀಸ್​ ಇವೆಂಟ್​ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ದಂಡೇ ನೆರೆದಿತ್ತು. ಶಿವರಾಜ್​ಕುಮಾರ್​, ಅವರ ಸಹೋದರ, ನಟ ಪುನೀತ್​ ರಾಜ್​ಕುಮಾರ್​, ರಾಕಿಂಗ್​ ಸ್ಟಾರ್​ ಯಶ್​, ನಿರ್ದೇಶಕ, ನಟ, ನಿರ್ಮಾಪಕ ರಿಷಬ್​ ಶೆಟ್ಟಿ, ನಿರ್ದೇಶಕ ಸಂತೋಷ್​ ಆನಂದ್​ ರಾಮ್​, ‘ಭಜರಂಗಿ 2’ ನಿರ್ದೇಶಕ ಎ. ಹರ್ಷ, ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ, ನಟಿ ಭಾವನಾ ಮೆನನ್​, ಹಿರಿಯ ನಟಿ ಶ್ರುತಿ ಆಗಮಿಸಿದ್ದರು.

ಈ ವೇಳೆ ಪುನೀತ್​, ಯಶ್​ ಹಾಗೂ ಶಿವರಾಜ್​ಕುಮಾರ್​ ಒಟ್ಟಿಗೇ ವೇದಿಕೆ ಏರಿದ್ದು ವಿಶೇಷವಾಗಿತ್ತು. ಮೊದಲು ಮಾತನಾಡಿದ ಪುನೀತ್​ ರಾಜ್​ಕುಮಾರ್​ ಅವರು ಯಶ್​ ಹಾಗೂ ಶಿವಣ್ಣ ಅವರನ್ನು ಹೊಗಳಿದರು. ನಂತರ ವೇದಿಕೆ ಏರಿದ್ದು ಯಶ್​. ಈ ವೇಳೆ ಯಶ್​ ಸ್ಯಾಂಡಲ್​ವುಡ್​ ಏಳ್ಗೆಯ ಕುರಿತು ಮಹತ್ವದ ಕರೆ ನೀಡಿದ್ದಾರೆ.

‘ಸಿನಿಮಾ ಅನ್ನೋದು ಯುದ್ಧಭೂಮಿ ಅಲ್ಲ. ಇಲ್ಲಿ ಮುಖ್ಯವಾಗಿ ಬೇಕಾಗಿದ್ದು ಪ್ರತಿಭೆ. ನಿನಗೆ ತಾಕತ್ತು ಇದ್ರೆ ಈಜಬಹುದು. ಬಾವಿಯಲ್ಲಿ ಜಾಗ ಸಣ್ಣ ಇರುತ್ತದೆ. ಈಜೋಕೆ ಆಗಲ್ಲ. ಆದ್ರೆ ಸಮುದ್ರದಲ್ಲಿ ಹಾಗೆ ಆಗಲ್ಲ. ನಿನ್ನ ಸಾಮರ್ಥ್ಯ ಎಷ್ಟಿದೆಯೋ ಅಷ್ಟು ಈಜಬಹುದು. ಒಟ್ಟಾಗಿರೋಣ, ಚೆನ್ನಾಗಿರೋಣ. ಇಂಡಸ್ಟ್ರಿಗೆ ಒಳ್ಳೆದಾಗೋ ಹಾಗೆ ಮಾಡೋಣ’ ಎಂದರು ಯಶ್​.

ಹಲವು ಕಾರಣಗಳಿಗಾಗಿ ‘ಭಜರಂಗಿ 2’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿರುವ ಟ್ರೇಲರ್​ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಸೂಪರ್​ ನ್ಯಾಚುರಲ್​ ಕಥೆ, ಬೃಹತ್​ ಸೆಟ್​ಗಳು, ಕಲಾವಿದರ ಭಿನ್ನ ವಿಭಿನ್ನ ಗೆಟಪ್​ಗಳು ಗಮನ ಸೆಳೆಯುತ್ತಿವೆ. ಶಿವರಾಜ್​ಕುಮಾರ್​ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಮೂರನೇ ಸಿನಿಮಾ ಇದಾಗಿದ್ದು, ಸಾಕಷ್ಟು ಹೈಪ್​ ಸೃಷ್ಟಿ ಮಾಡಿದೆ.

ಈ ಸಿನಿಮಾದಲ್ಲಿ ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಭಾವನಾ ಮೆನನ್​, ಶಿವರಾಜ್​ ಕೆ.ಆರ್​. ಪೇಟೆ, ಚೆಲುವ ರಾಜು ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇದನ್ನೂ ಓದಿ: ‘ಭಜರಂಗಿ 2’ಗೆ ಗೆಲುವು ಸಿಗಲಿ ಎಂದು ಫ್ಯಾನ್ಸ್​ ಹರಕೆ; ವಿಡಿಯೋ ಕಾಲ್​ ಮಾಡಿ ಮಾತನಾಡಿದ ಶಿವರಾಜ್​ಕುಮಾರ್

‘ಶಿವರಾಜ್​ಕುಮಾರ್​ ಮತ್ತು ಹರ್ಷ ಕಾಂಬಿನೇಷನ್​ ಹ್ಯಾಟ್ರಿಕ್​ ಬಾರಿಸುತ್ತೆ’