ಕೊರೊನಾ 2ನೇ ಅಲೆ: ಮತ್ತೆ ಲಾಕ್​​ಡೌನ್​ ಆದರೆ ಈ ಚಿತ್ರಗಳ ಗತಿ ಏನು?

ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿವೆ. ಈಗಾಗಲೇ 'ಪೊಗರು' ಹಾಗೂ ರಾಬರ್ಟ್​ ಸಿನಿಮಾ ರಾಬರ್ಟ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿವೆ. ಆದರೆ, ಮುಂಬರುವ ಚಿತ್ರಗಳಿಗೆ ಕೊರೊನಾ ಏಟು ನೀಡುವ ಲಕ್ಷಣ ಕಾಣುತ್ತಿದೆ.

ಕೊರೊನಾ 2ನೇ ಅಲೆ: ಮತ್ತೆ ಲಾಕ್​​ಡೌನ್​ ಆದರೆ ಈ ಚಿತ್ರಗಳ ಗತಿ ಏನು?
ಪುನೀತ್​-ವಿಜಯ್​-ಸುದೀಪ್​-ಯಶ್​

Updated on: Mar 19, 2021 | 5:22 PM

ಪೊಗರು ಸಿನಿಮಾ ತೆರೆಕಾಣುವುದಕ್ಕೂ ಮೊದಲು ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 100 ಆಸನ ಭರ್ತಿಗೆ ಅವಕಾಶ ಮಾಡಿಕೊಟ್ಟಿತ್ತು. ಪರಿಣಾಮ ಧ್ರುವ ಸರ್ಜಾ ನಟನೆಯ’ಪೊಗರು’ ಹಾಗೂ ದರ್ಶನ್​ ನಟನೆಯ ‘ರಾಬರ್ಟ್’​ ಸಿನಿಮಾ ಒಳ್ಳೆಯ ಕಲೆಕ್ಷನ್​ ಮಾಡಿತ್ತು. ಆದರೆ, ಕೊರೊನಾ 2ನೇ ಅಲೆ ಕಾರಣದಿಂದ ಕರ್ನಾಟಕದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಮತ್ತೆ ಶೇ. 50ಕ್ಕೆ ಇಳಿಕೆ ಮಾಡಬೇಕು ಎನ್ನುವ ಸಲಹೆ ಕೇಳಿ ಬರುತ್ತಿದೆ. ಇದು ಮುಂಬರುವ ಸ್ಟಾರ್​ ನಟರ ಚಿತ್ರಗಳಿಗೆ ದೊಡ್ಡ ಏಟು ನೀಡುವ ಎಲ್ಲಾ ಲಕ್ಷಣ ಕಾಣುತ್ತಿದೆ.

ಬೆಂಗಳೂರು ಸೇರಿ ರಾಜ್ಯಾದ್ಯಂತ ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಇದು ಸರ್ಕಾರವನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ಕರೆದಿದ್ದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಕಡ್ಡಾಯವಾಗಿ ಮಾಸ್ಕ್​ ಧರಿಸುವಂತೆ ಕೋರಿದ್ದರು. ಈ ಮಧ್ಯೆ, ಬೃಹತ್​ ಬೆಂಗಳೂರು  ನಗರ ಪಾಲಿಕೆ ಬೆಂಗಳೂರಲ್ಲಿ ಚಿತ್ರಮಂದಿರದಲ್ಲಿ ಆಸನ ವ್ಯವಸ್ಥೆಯನ್ನು ಶೇ.50ಕ್ಕೆ ಇಳಿಸಬೇಕು ಎಂದು ಸರ್ಕಾರದ ಮುಂದೆ ಪ್ರಸ್ತಾವನೆ ಇರಿಸಿದೆ. ಒಂದೊಮ್ಮೆ ಇದು ಜಾರಿಗೆ ಬಂದರೆ ಕನ್ನಡ ಚಿತ್ರರಂಗಕ್ಕೆ ಭಾರೀ ಹೊಡೆತ ಉಂಟಾಗಲಿದೆ.

ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಚಿತ್ರಗಳು
ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿವೆ. ಈಗಾಗಲೇ ‘ಪೊಗರು’ ಹಾಗೂ ರಾಬರ್ಟ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿವೆ. ಚಿತ್ರಮಂದಿರದಲ್ಲಿ ಶೇ. 100 ಆಸನ ಭರ್ತಿಗೆ ಅವಕಾಶ ನೀಡಿದ್ದು ಪ್ರಮುಖ ಪಾತ್ರವಹಿಸಿದೆ. ಒಂದೊಮ್ಮೆ ಶೇ. 50ಕ್ಕೆ ಆಸನ ಮಿತಿ ಮಾಡಬೇಕು ಎನ್ನುವ ನಿಯಮ ತಂದರೆ ಮತ್ತೆ ಚಿತ್ರರಂಗಕ್ಕೆ ಹೊಡೆತ ಬೀಳಲಿದೆ.

ಏಪ್ರಿಲ್​ 1ರಂದು ಯುವರತ್ನ ಸಿನಿಮಾ ತೆರೆಗೆ ಬರುತ್ತಿದೆ. ಪುನೀತ್​ ರಾಜ್​ಕುಮಾರ್​ ಅಭಿನಯದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. 2019ರಲ್ಲಿ ತೆರೆಕಂಡ ನಟಸಾರ್ವಭೌಮ ಚಿತ್ರವೇ ಕೊನೆ. ಇದಾದ ನಂತರ ಪುನೀತ್​ ದೊಡ್ಡ ಗ್ಯಾಪ್​ ಬಳಿಕ ತೆರೆ ಮೇಲೆ ಬರುತ್ತಿರುವುದರಿಂದ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದೊಮ್ಮೆ ಹೊಸ ನೀತಿ ಜಾರಿಗೆ ಬಂದರೆ, ಸಿನಿಮಾದ ಕಲೆಕ್ಷನ್​ ದೊಡ್ಡ ಮಟ್ಟದಲ್ಲಿ ಕುಗ್ಗಲಿದೆ.

ಇನ್ನು, ಸುದೀಪ್​ ನಟನೆಯ ಕೋಟಿಗೊಬ್ಬ 3 ಚಿತ್ರ ಏಪ್ರಿಲ್​ 29ರಂದು ರಿಲೀಸ್​ ಆಗುತ್ತಿದೆ. ಶೇ. 50 ಆಸನ ವ್ಯವಸ್ಥೆ ನಿಯಮ ಜಾರಿಗೆ ಬಂದರೆ, ಈ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ತೀವ್ರವಾಗಿ ಕುಸಿಯಲಿದೆ. ಇನ್ನು, ಸಲಗ ಸಿನಿಮಾ ಕೂಡ ಸ್ಯಾಂಡಲ್​ವುಡ್​ನ ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇಷ್ಟು ದಿನ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ದುನಿಯಾ ವಿಜಯ್​ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್​ ತೊಟ್ಟಿದ್ದಾರೆ. ಈ ಚಿತ್ರ ಏಪ್ರಿಲ್​ 15ಕ್ಕೆ ಎಂಟ್ರಿ ಕೊಡುತ್ತಿದೆ. ಮೇ 14ಕ್ಕೆ ಶಿವರಾಜ್​ಕುಮಾರ್ ನಟನೆಯ ಭಜರಂಗಿ 2 ಸಿನಿಮಾ ತೆರೆಗೆ ಬರುತ್ತಿದೆ. ಈ ಎಲ್ಲಾ ಚಿತ್ರಗಳ ಬಾಕ್ಸ್​ ಆಫೀಸ್​ ಕಲೆಕ್ಷನ್​ ಹೊಸ ನಿಯಮವನ್ನು ಆಧರಿಸಿ ನಿರ್ಧಾರವಾಗಲಿದೆ.

ಬಹುನಿರೀಕ್ಷಿತ ಕೆಜಿಎಫ್​-2 ಸಿನಿಮಾ ಜುಲೈ 16ರಂದು ತೆರೆಗೆ ಬರುತ್ತಿದೆ. ಈ ಚಿತ್ರ ಕನ್ನಡದ ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಶೇ.50 ಆಸನ ಮಿತಿ ಹೇರಿದರೆ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟರೂ ಅಚ್ಚರಿ ಇಲ್ಲ.

ನೀತಿ ಜಾರಿಗೆ ತರದಂತೆ ಮನವಿ
ಇತ್ತೀಚೆಗೆ ಕಿಚ್ಚ ಸುದೀಪ್​ ಹಾಗೂ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಒಂದೇ ವೇದಿಕೆ ಮೇಲೆ ಇದ್ದರು. ಆಗ ಸುದೀಪ್​ ಶೇ. 100 ಆಸನ ಭರ್ತಿಗೆ ನೀಡಿರುವ ಅವಕಾಶವನ್ನು ಹಿಂಪಡೆಯಬೇಡಿ ಎಂದು ಸರ್ಕಾರದ ಮುಂದೆ ಮನವಿ ಇರಿಸಿದ್ದರು. ಇಂದು ನಟ ಪುನೀತ್​ ರಾಜ್​ಕುಮಾರ್​ ಕೂಡ ಇದೇ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹಾಸನ ರೈತರೊಂದಿಗಿನ ವಿವಾದವನ್ನ ಮಾತುಕತೆ ಮೂಲಕ ಬಗೆಹರಿಸಿಕೊಂಡ ನಟ ಯಶ್‌

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us