AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈಗ ನಾನೇಕೆ ಮಾಧ್ಯಮದ ಮುಂದೆ ಬಂದೆ ಅಂದ್ರೆ..’; ಎಳೆಎಳೆಯಾಗಿ ವಿವರಿಸಿದ ನಟಿ ರಮ್ಯಾ

Ramya: ‘ಚಿಕ್ಕ ವಯಸ್ಸಿನಿಂದಲೂ ನನಗೆ ನಾಯಿಗಳೆಂದರೆ ತುಂಬ ಪ್ರೀತಿ. ನಾನು ಒಬ್ಬಳೇ ಮಗಳು. ಸಹೋದರ, ಸಹೋದರಿಯರು ಯಾರೂ ಇರಲಿಲ್ಲ. ಪ್ರಾಣಿಗಳ ಜೊತೆ ಇರೋದು ನನಗೆ ಇಷ್ಟ ಆಗುತ್ತಿತ್ತು’ ಎಂದು ರಮ್ಯಾ ಹೇಳಿದ್ದಾರೆ.

‘ಈಗ ನಾನೇಕೆ ಮಾಧ್ಯಮದ ಮುಂದೆ ಬಂದೆ ಅಂದ್ರೆ..’; ಎಳೆಎಳೆಯಾಗಿ ವಿವರಿಸಿದ ನಟಿ ರಮ್ಯಾ
ರಮ್ಯಾ
Follow us
TV9 Web
| Updated By: ಮದನ್​ ಕುಮಾರ್​

Updated on: Feb 02, 2022 | 8:02 AM

ನಟಿ ರಮ್ಯಾ (Sandalwood Queen Ramya) ಅವರು ಇತ್ತೀಚೆಗೆ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಮಾಧ್ಯಮದ ಜೊತೆಗೂ ಅವರು ಹೆಚ್ಚು ಸಂಪರ್ಕದಲ್ಲಿ ಇರುತ್ತ ಇರಲಿಲ್ಲ. ಆದರೆ ಈಗ ಏಕಾಏಕಿ ಬಂದು ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಲಾರಾ (Lara Dog) ಎಂಬ ನಾಯಿಯ ಮೇಲೆ ಕಾರು ಹತ್ತಿಸಿ ಸಾಯಿಸಿದ ಅಮಾನವೀಯ ಘಟನೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಶ್ವಾನದ ಅಂತಿಮ ಸಂಸ್ಕಾರದಲ್ಲೂ ಅವರು ಭಾಗಿ ಆಗಿದ್ದಾರೆ. ಶ್ವಾನಗಳ ಬಗ್ಗೆ ತಮಗಿರುವ ಪ್ರೀತಿ ಎಂಥದ್ದು ಎಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ರಮ್ಯಾ (Ramya Divya Spandana) ಅವರು ಆದಷ್ಟು ಬೇಗ ಸಿನಿಮಾ ಜಗತ್ತಿಗೆ ಮರಳಲಿ ಎಂಬುದು ಅಭಿಮಾನಿಗಳ ಆಸೆ. ಆದರೆ ಅದಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ. ಸದ್ಯಕ್ಕೆ ಒಂದಷ್ಟು ಪ್ಲ್ಯಾನ್​ಗಳು ಸಿದ್ಧ ಆಗುತ್ತಿವೆ. ಅವರನ್ನು ಮತ್ತೆ ಬಿಗ್​ ಸ್ಕ್ರೀನ್​ನಲ್ಲಿ ನೋಡಬೇಕು ಎಂದು ಕಾದಿರುವ ಅಭಿಮಾನಿಗಳಿಗಾಗಿ ತಮ್ಮ ಮುಂದಿನ ಪ್ಲ್ಯಾನ್​ ಏನು ಎಂಬುದನ್ನು ರಮ್ಯಾ ಹೇಳಿದ್ದಾರೆ. ಆ ಎಲ್ಲ ವಿಚಾರಗಳನ್ನು ಟಿವಿ9 ಜೊತೆ ‘ಸ್ಯಾಂಡಲ್​ವುಡ್​ ಕ್ವೀನ್’ ರಮ್ಯಾ ಹಂಚಿಕೊಂಡಿದ್ದಾರೆ.

‘ಲಾರಾ ನಾಯಿ ಹತ್ಯೆಯ ಬಗ್ಗೆ ನನಗೆ ಟ್ವಿಟರ್​ನಲ್ಲಿ ತಿಳಿಯಿತು. ಅದು ಆಕಸ್ಮಿಕವಾಗಿ ನಡೆದಿದ್ದಲ್ಲ. ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ನಾಯಿಯನ್ನು ಸಾಯಿಸಲಾಗಿದೆ. ಈ ಭೂಮಿ ಮೇಲೆ ನಮಗೆ ಇರುವಷ್ಟೇ ಹಕ್ಕು ಬೇರೆ ಪ್ರಾಣಿ-ಪಕ್ಷಿ, ಮರ-ಗಿಡಗಳಿಗೂ ಇದೆ. ಆದರೆ ನಾವು ಅವುಗಳಿಗೆ ಬೆಲೆ ಕೊಡುತ್ತಿಲ್ಲ. ಈಗ ನಾನು ಒರ್ವ ಸೆಲೆಬ್ರಿಟಿಯಾಗಿ ನನ್ನ ಸ್ಥಾನವನ್ನು ಒಳ್ಳೆಯದಕ್ಕೆ ಬಳಕೆ ಮಾಡದಿದ್ದರೆ ಜೀವನವೇ ವ್ಯರ್ಥ ಆದಂತೆ. ಸ್ವಾರ್ಥಿಯಾಗಿ ಅದನ್ನು ನಾನು ನಿರ್ಲಕ್ಷ್ಯ ಮಾಡಬಹುದು. ಆದರೆ ಕೆಲವೊಂದು ವಿಚಾರಗಳು ನನಗೆ ತುಂಬ ಹತ್ತಿರವಾದಂಥವು. ಅವುಗಳ ಬಗ್ಗೆ ನಾನು ಮಾತನಾಡದೇ ಇದ್ದರೆ ನನಗೆ ಪಾಪಪ್ರಜ್ಞೆ ಕಾಡುತ್ತದೆ’ ಎಂದಿದ್ದಾರೆ ರಮ್ಯಾ.

‘ಲಾರಾಗೆ ಆದಂತೆ ಬೇರೆ ಯಾರಿಗೂ ಆಗಬಾರದು. ಅಷ್ಟೊಂದು ಕ್ರೂರತನ ಮನುಷ್ಯನಲ್ಲಿ ಇದೆ ಎಂಬುದನ್ನು ನನಗೆ ಅರ್ಥ ಮಾಡಿಕೊಳ್ಳೋಕೆ ಆಗುತ್ತಿಲ್ಲ. ತುಂಬ ಬೇಸರ ಆಗುತ್ತಿದೆ. ಇವತ್ತಿನ ಕಾಲದಲ್ಲಿ ಮಾಧ್ಯಮದವರು ಕೇವಲ ಟಿಆರ್​ಪಿಗಾಗಿ ಸಿನಿಮಾ ಮತ್ತು ರಾಜಕೀಯವನ್ನು ಮಾತ್ರ ತೋರಿಸುತ್ತಾರೆ. ಆದರೆ ಇಂದು ನಾಯಿಯ ಸಲುವಾಗಿ ತುಂಬ ಮಾಧ್ಯಮಗಳು ಬಂದಿವೆ. ಮಾನವೀಯತೆ ಇಂದಿಗೂ ಇದೆ ಅಂತ ತಿಳಿಯಿತು’ ಎಂದು ರಮ್ಯಾ ಹೇಳಿದ್ದಾರೆ.

‘ಚಿಕ್ಕ ವಯಸ್ಸಿನಿಂದಲೂ ನನಗೆ ನಾಯಿಗಳೆಂದರೆ ತುಂಬ ಪ್ರೀತಿ. ನಾನು ಒಬ್ಬಳೇ ಮಗಳು. ಸಹೋದರ, ಸಹೋದರಿಯರು ಯಾರೂ ಇರಲಿಲ್ಲ. ಪ್ರಾಣಿಗಳ ಜೊತೆ ಇರೋದು ನನಗೆ ಇಷ್ಟ ಆಗುತ್ತಿತ್ತು. ಅವುಗಳ ಜೊತೆಗೆ ಆಟ ಆಡುತ್ತಿದ್ದೆ. ಅವುಗಳೇ ನನಗೆ ಸ್ನೇಹಿತರಾಗಿದ್ದರು. ಪ್ರಾಣಿಗಳಿಂದ ಹೆಚ್ಚು ಕಲಿತಿದ್ದೇನೆ. ಅವುಗಳಲ್ಲಿ ಇರುವ ಪ್ರೀತಿಯಲ್ಲಿ ಕೇವಲ ಶೇ.5ರಷ್ಟಾದರೂ ನಮ್ಮಲ್ಲಿ ಇದ್ದಿದ್ದರೆ ಪ್ರಪಂಚ ಚೆನ್ನಾಗಿ ಇರುತ್ತಿತ್ತು. ಅಷ್ಟೊಂದು ನಿಯತ್ತು ಮತ್ತು ತಾಳ್ಮೆ ನಾಯಿಗಳಿಗೆ ಇದೆ. ಅವುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು’ ಎಂದು ರಮ್ಯಾ ಹೇಳಿದ್ದಾರೆ.

‘ನಾನು ಮೀಡಿಯಾದಲ್ಲಿ ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತ ಇರಲಿಲ್ಲ. ಇಂದೂ ಕೂಡ ನಾನು ಬರುತ್ತಿರಲಿಲ್ಲ. ಆದರೆ ಇಂದು ನಾನು ಮಾಧ್ಯಮಗಳ ಎದುರು ಬಾರದೇ ಇದ್ದರೆ ನ್ಯಾಯ ಆಗುವುದಿಲ್ಲ ಅಂತ ಅನಿಸಿತು. ಹಾಗಾಗಿ ನಾನು ಹೊರಗಡೆ ಬಂದೆ. ಸಿನಿಮಾಗೆ ಕಮ್​ಬ್ಯಾಕ್​ ಮಾಡುವ ಬಗ್ಗೆ ನಾನು ಮಾರ್ಚ್​ನಲ್ಲಿ ನಿಮಗೆ ಸುದ್ದಿ ಹೇಳುತ್ತೇನೆ. ಯಾಕೆಂದರೆ, ಈಗ ನಾನು ಸ್ಕ್ರಿಪ್ಟ್ಸ್​ ಓದುತ್ತಿದ್ದೇನೆ. ಸರ್ಜರಿ ಆದ ಬಳಿಕ ನನ್ನ ದೇಹದ ತೂಕ ಸ್ವಲ್ಪ ಹೆಚ್ಚಿದೆ. ಹಾಗಾಗಿ ಮತ್ತೆ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಆ ಎಲ್ಲ ತಯಾರಿಗಳು ಪೂರ್ಣಗೊಂಡ ಬಳಿಕ ನಿಮಗೆ ಹೇಳುತ್ತೇನೆ’ ಎಂದು ರಮ್ಯಾ ಅವರು ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ.

ಇದನ್ನೂ ಓದಿ:

ನಾಯಿ ಮೇಲೆ ಕಾರು ಹತ್ತಿಸಿದ ಪ್ರಕರಣ: ಮೃತ ಶ್ವಾನ ಲಾರಾ ಅಂತ್ಯಕ್ರಿಯೆಯಲ್ಲಿ ಕಣ್ಣೀರಿಟ್ಟ ನಟಿ ರಮ್ಯಾ

ಬಿದಿ ನಾಯಿ ಮೇಲೆ ಕಾರು ಚಲಾಯಿಸಿದ ಆದಿಕೇಶವಲು ಮೊಮ್ಮಗ; ನರಳಾಡಿ ಪ್ರಾಣ ಬಿಟ್ಟ ಶ್ವಾನ