‘ಹಣೆಬರಹ, ಏನೂ ಮಾಡೋಕೆ ಆಗಲ್ಲ’: ದರ್ಶನ್ ಕೇಸ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್​ನಲ್ಲಿ ನಟ ದರ್ಶನ್​, ನಟಿ ಪವಿತ್ರಾ ಗೌಡ ಹಾಗೂ ಅವರ ಸಹಚರರು ಜೈಲು ಸೇರಿದ್ದಾರೆ. ಈ ಘಟನೆ ಬಗ್ಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಮಾತನಾಡಿದ್ದಾರೆ. ಇಂದು (ಜೂನ್​ 30) ನಟ ಶಿವರಾಜ್​ಕುಮಾರ್​ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಂಥ ಘಟನೆ ಆಗಿದ್ದಕ್ಕೆ ಶಿವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

‘ಹಣೆಬರಹ, ಏನೂ ಮಾಡೋಕೆ ಆಗಲ್ಲ’: ದರ್ಶನ್ ಕೇಸ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ದರ್ಶನ್​, ಶಿವರಾಜ್​ಕುಮಾರ್​

Updated on: Jun 30, 2024 | 3:00 PM

ಕನ್ನಡ ಚಿತ್ರರಂಗದ ಸ್ಟಾರ್​ ನಟ ದರ್ಶನ್​ ಅವರು ಕೊಲೆ ಪ್ರಕರಣದ ಆರೋಪಿಗಾಗಿ ಜೈಲಿನಲ್ಲಿ ಇರುವುದು ಅವರ ಆಪ್ತರಿಗೆ ಬೇಸರ ಮೂಡಿಸಿದೆ. ಈ ಕೇಸ್​ಗೆ ಸಂಬಂಧಪಟ್ಟಂತೆ ಸ್ಯಾಂಡಲ್​ವುಡ್​ನ ಹಿರಿಯ ನಟ ಶಿವರಾಜ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ಚಂದನವನದಲ್ಲಿ ಎಲ್ಲರ ಜೊತೆಗೂ ಶಿವಣ್ಣ ಒಡನಾಟ ಹೊಂದಿದ್ದಾರೆ. ದರ್ಶನ್​ ಅರೆಸ್ಟ್​ ಆಗಿರುವ ಬಗ್ಗೆ ಶಿವರಾಜ್​ಕುಮಾರ್​ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನ್ಯಾಯ ಸಿಗಬೇಕು ಎಂದು ಅವರು ಹೇಳಿದ್ದಾರೆ. ನಿರ್ಮಾಪಕರ ಸಂಘದ ಹೊಸ ಕಟ್ಟಡದ ಉದ್ಘಾಟನೆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ಈ ವಿಚಾರದ ಕುರಿತು ಪ್ರತಿಕ್ರಿಯಿಸಿದರು.

‘ಇಂಥ ಘಟನೆಗಳು ಆಗುತ್ತವೆ. ಏನೂ ಮಾಡೋಕೆ ಆಗಲ್ಲ. ಹಣೆಬರಹ ಅಂತ ಒಂದು ಇರುತ್ತದೆ. ಆ ವಿಚಾರ ಬಂದಾಗ ನಾವು ಏನೂ ಮಾಡೋಕೆ ಆಗುವುದಿಲ್ಲ. ಆದರೆ, ಮಾತಾಡೋಕೆ ಹೋದರೂ, ನಾವು ಮಾಡುತ್ತಿರುವುದು ಸರಿಯಾಗಿ ಇದೆಯಾ ಎಂಬುದನ್ನು ಮೊದಲು ಯೋಚನೆ ಮಾಡಬೇಕು. ಅದನ್ನು ಹೊರತುಪಡಿಸಿ ನಾವು ಏನೂ ಹೇಳೋಕೆ ಆಗಲ್ಲ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ‘ನಾನು ದರ್ಶನ್​ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ

‘ಈ ರೀತಿ ಆದಾಗ ನೋವಾಗುತ್ತದೆ. ಯಾಕಪ್ಪಾ ಹೀಗೆಲ್ಲ ಆಯಿತು ಅಂತ ಬೇಸರ ಆಗುತ್ತದೆ. ರೇಣುಕಾ ಸ್ವಾಮಿ ಕುಟುಂಬಕ್ಕೆ, ದರ್ಶನ್​ ಅವರ ಕುಟುಂಬಕ್ಕೆ ನೋವಾಗುತ್ತದೆ. ದರ್ಶನ್​ ಮಗನ ಬಗ್ಗೆ ಬೇಸರ ಆಗುತ್ತೆ. ನಾವು ಎಲ್ಲದನ್ನೂ ಎದುರಿಸಬೇಕು. ಈಗಾಗಲೇ ತನಿಖೆ ನಡೆದಾಗಿದೆ. ಏನಾಗುತ್ತದೋ ನೋಡೋಣ. ಏನಾಗಬೇಕೋ ಅದೇ ಆಗುತ್ತದೆ. ನ್ಯಾಯ ಏನಿದೆಯೋ ಅದೇ ಆಗುತ್ತದೆ. ಇದರ ಮೇಲೆ ಇನ್ನೇನೂ ಹೇಳಲು ನಾನು ಇಷ್ಟಪಡಲ್ಲ. ಎಲ್ಲವೂ ಹಣೆಬರಹ’ ಎಂದಿದ್ದಾರೆ ಶಿವರಾಜ್​ಕುಮಾರ್​.

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಅಪಹರಣ ಮಾಡಿಕೊಂಡು ಬೆಂಗಳೂರಿಗೆ ಕರೆತಂದು ಸಾಯಿಸಿದ ಆರೋಪ ದರ್ಶನ್​ ಹಾಗೂ ಗ್ಯಾಂಗ್​ ಮೇಲಿದೆ. ತನಿಖೆ ನಡೆಯುತ್ತಿದ್ದು, ಪ್ರಮುಖ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಅನೇಕ ಸೆಲೆಬ್ರಿಟಿಗಳು ಒತ್ತಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us