ಸೌಂದರ್ಯಾ ಜಗದೀಶ್​ ಡೆತ್​ ನೋಟ್​ ಪತ್ತೆ; ಶಾಕಿಂಗ್​ ವಿಷಯ ತಿಳಿಸಿದ ಪತ್ನಿ ರೇಖಾ

‘ಯಜಮಾನರು ಹೊರಟು ಹೋಗಿದ್ದಾರೆ. ಆ ನೋವು ನಮಗೆ ಕಡೆಯ ತನಕ ಇದ್ದೇ ಇರುತ್ತದೆ. ಕೊನೇ ಪಕ್ಷ ಅವರ ಸಾವಿಗೆ ನ್ಯಾಯ ಸಿಕ್ಕರೆ ಅವರ ಮನಸ್ಸಿಗೆ ಸಮಾಧಾನ ಆಗುತ್ತೆ ಅಂತ ನಾವು ಅಂದುಕೊಂಡಿದ್ದೇವೆ. ತನಿಖೆಗೆ ಎಲ್ಲ ದಾಖಲೆಗಳನ್ನು ಕೊಟ್ಟಿದ್ದೇನೆ. ದಯವಿಟ್ಟು ನಮಗೆ ನ್ಯಾಯ ಕೊಡಿಸಿ’ ಎಂದು ಸೌಂದರ್ಯಾ ಜಗದೀಶ್​ ಅವರ ಪತ್ನಿ ರೇಖಾ ಕಣ್ಣೀರು ಹಾಕಿದ್ದಾರೆ.

ಸೌಂದರ್ಯಾ ಜಗದೀಶ್​ ಡೆತ್​ ನೋಟ್​ ಪತ್ತೆ; ಶಾಕಿಂಗ್​ ವಿಷಯ ತಿಳಿಸಿದ ಪತ್ನಿ ರೇಖಾ
ರೇಖಾ ಜಗದೀಶ್​

Updated on: May 24, 2024 | 6:29 PM

ನಿರ್ಮಾಪಕ ಸೌಂದರ್ಯಾ ಜಗದೀಶ್ (Soundarya Jagadeesh) ಅವರು ಏಪ್ರಿಲ್​ 14ರಂದು ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಈಗ ಅವರ ಸಾವಿನ ಬಗ್ಗೆ ಪತ್ನಿ ರೇಖಾ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡೆತ್​ ನೋಟ್ (Soundarya Jagadeesh Death Note)​ ಬಗ್ಗೆ ವಿಷಯ ತಿಳಿಸಿದ್ದಾರೆ. ‘ಮೊದಲು ತಾಯಿ ನಿಧನರಾದರು. ಆಮೇಲೆ 15 ದಿನಕ್ಕೆ ಯಜಮಾನರು ತೀರಿಕೊಂಡರು. ಆ ಶಾಕ್​ನಲ್ಲಿ ಏನಾಯಿತು ಎಂಬುದು ನಮಗೆ ಗೊತ್ತಿಲ್ಲ. ಈ ಮನೆಯನ್ನು ನಾನು ಮತ್ತು ಅವರು ಸೇರಿ ಕಟ್ಟಿದ್ದು. ಇಂದು ಅವರು ಇಲ್ಲ ಎಂದಾಗ ಈ ಮನೆಯಲ್ಲಿ ನಮಗೆ ಇರೋಕೆ ಆಗುತ್ತಿಲ್ಲ. ಈಗ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿ ಅವರ ಬಟ್ಟೆಗಳನ್ನು ಅಲ್ಲಿ ಬಿಡಬೇಕು ಅಂತ ಅರ್ಚಕರು ಹೇಳಿದ್ದಾರೆ. ಹಾಗಾಗಿ ಹಳೇ ಬಟ್ಟೆಗಳನ್ನು ತೆಗೆಯುವಾಗ ಡೆಟ್​ ನೋಟ್​ ಸಿಕ್ಕಿತು’ ಎಂದು ರೇಖಾ ಜಗದೀಶ್​ (Rekha Jagadeesh) ಹೇಳಿದ್ದಾರೆ.

‘ಜಗದೀಶ್​ ಬರೆದ ಡೆತ್​ ನೋಟ್​ ನೋಡಿ ತುಂಬ ನೋವಾಯಿತು ಮತ್ತು ಶಾಕ್​ ಆಯ್ತು. ಬಿಸ್ನೆಸ್​ ಪಾರ್ಟ್ನರ್​ಗಳ ಬಗ್ಗೆ ಅವರು ಬರೆದಿದ್ದಾರೆ. ಅನ್ಯಾಯ ಆಗಿದೆ ಅಂತ ಬರೆದಿದ್ದಾರೆ. ತಮಗೆ ತುಂಬ ಕಾಟ, ಕಿರುಕುಳು ಕೊಡುತ್ತಾರೆ ಅಂತ ಈ ಮೊದಲು ಒಮ್ಮೆ ನನ್ನ ಬಳಿ ಹೇಳಿದ್ದರು. ಆದರೆ ಈ ಮಟ್ಟಕ್ಕೆ ಆಗುತ್ತೆ ಅಂತ ನಮಗೆ ಗೊತ್ತಿರಲಿಲ್ಲ. ಏನೇ ಇದ್ದರೂ ನಮ್ಮ ಜೊತೆ ಹಂಚಿಕೊಳ್ಳಿ ಅಂತ ಧೈರ್ಯ ತುಂಬಿದ್ದೆವು. ಪಾರ್ಟ್ನರ್​ ಸುರೇಶ್​ ಅವರಿಂದ ತುಂಬ ಕಿರುಕುಳ ಆಗಿದೆ’ ಎಂದಿದ್ದಾರೆ ರೇಖಾ ಜಗದೀಶ್​.

ಇದನ್ನೂ ಓದಿ: ಜೆಟ್​ಲ್ಯಾಗ್ ಮಾರಲು ಮುಂದಾಗಿದ್ದ ಸೌಂದರ್ಯ ಜಗದೀಶ್? ಮಾಡಿಕೊಂಡ ಲಾಸ್ ಅಷ್ಟಿಷ್ಟಲ್ಲ

‘ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಇದೆ. ಅಷ್ಟು ಗಟ್ಟಿಯಾಗಿ ಹುಲಿ ರೀತಿ ಇದ್ದ ಅವರನ್ನು ಕೊನೆಕೊನೆಗೆ ಇಷ್ಟು ಸೈಲೆಂಟ್​ ಆಗುವಂತೆ ಮಾಡಿ ಈ ಹಂತಕ್ಕೆ ತೆಗೆದುಕೊಂಡು ಬಂದವನು ನಾಳೆ ನನಗೆ ಮತ್ತು ನನ್ನ ಮಗನಿಗೆ ಏನು ಮಾಡುತ್ತಾನೋ ಗೊತ್ತಿಲ್ಲ. ನನಗೆ ಆ ಭಯ ಇದೆ. ಅವರು ಬರೆದಿದ್ದನ್ನೆಲ್ಲ ನಾನು ವೀಕ್ಷಿಸಿದ ಮೇಲೆ ಪಾರ್ಟ್ನರ್​ಗಳಿಂದ ನನ್ನ ಗಂಡನಿಗೆ ತುಂಬಾ ಕಿರುಕುಳ ಆಗಿದೆ. ಫೋರ್ಚರಿ ಕೂಡ ಮಾಡಿದ್ದಾರೆ’ ಎಂದು ರೇಖಾ ಜಗದೀಶ್​ ಅಳಲು ತೋಡಿಕೊಂಡಿದ್ದಾರೆ.

‘ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಚೆಕ್​ಗಳಿಗೆ ಸೈನ್​ ಹಾಕಿಸಿಕೊಂಡಿದ್ದಾರೆ. ಹೀಗೆಲ್ಲ ಬ್ಲ್ಯಾಕ್​ ಮೇಲ್​ ಮಾಡಿದ್ದಕ್ಕೆ ನಮ್ಮ ಯಜಮಾನರು ಹೋಗಿದ್ದಾರೆ. ನಾವು ನಾಲ್ಕು ಜನ ಒಂದೇ ಗೋಡಿನ ಹಕ್ಕಿಗಳ ರೀತಿ ಇದ್ದೆವು. ನಮ್ಮನ್ನು ಬಿಟ್ಟು ಅವರು ಹೋಗುತ್ತಿರಲಿಲ್ಲ. ಸುರೇಶ್​ ಇದೆಲ್ಲವನ್ನೂ ಮಾಡಿದ್ದಾರೆ. ಅಕೌಂಟ್​ ಪಾಸ್​ವರ್ಡ್​ ಕೂಡ ಅವರೇ ಇಟ್ಟುಕೊಂಡು ಹೀಗೆಲ್ಲ ಮಾಡಿದರು. ನಮ್ಮ ಮನೆಯನ್ನು ಈ ಸ್ಥಿತಿಗೆ ತಂದು ಬಿಟ್ಟಿದ್ದಾರೆ. ಲಾಸ್ಟ್​ ಕಾಲ್​, ಮೆಸೇಜ್​ ಅವರದ್ದೇ ಇದೆ. ಫೋರ್ಜರಿ ಮಾಡಿದ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ. ತನಿಖೆ ಬಳಿಕ ಎಲ್ಲವೂ ನಿಮಗೆ ಗೊತ್ತಾಗುತ್ತದೆ’ ಎಂದು ರೇಖಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us