AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SPB Birth Anniversary: ಪ್ರೀತಿಯ ಎಸ್​ಪಿಬಿ ಸರ್, ಎದೆ ತುಂಬಿ ಹಾಡಲು ನೀವು ಮತ್ತೆ ಹುಟ್ಟಿಬರಬೇಕು

SP Balasubrahmanyam Birth Anniversary: ಇನ್ನೊಂದು ಜನ್ಮವಿದ್ದರೆ ನಾನು ಕರ್ನಾಟಕದಲ್ಲೇ ಹುಟ್ಟಲು ಬಯಸುವೆ ಎಂದು ಹೇಳಿದ್ದಿರಿ. ಕಳೆದ ವರ್ಷ ಕೊರೊನಾವೈರಸ್ ನಿಮ್ಮನ್ನು ಬಲಿತೆಗೆದುಕೊಂಡಾಗ ಮನಸ್ಸು ಬಯಸಿದ್ದು..ಮತ್ತೊಮ್ಮೆ ಹುಟ್ಟಿ ಬನ್ನಿ ಸರ್...ಎದೆ ತುಂಬಿ ಹಾಡಲು ನೀವು ಬೇಕು.

SPB Birth Anniversary: ಪ್ರೀತಿಯ ಎಸ್​ಪಿಬಿ ಸರ್, ಎದೆ ತುಂಬಿ ಹಾಡಲು ನೀವು ಮತ್ತೆ ಹುಟ್ಟಿಬರಬೇಕು
ಎಸ್.ಪಿ.ಬಾಲಸುಬ್ರಮಣ್ಯಂ
Follow us
ರಶ್ಮಿ ಕಲ್ಲಕಟ್ಟ
| Updated By: Skanda

Updated on: Jun 04, 2021 | 7:58 AM

ಪ್ರಿಯ ಬಾಲು ಸರ್, ನೀವಿಲ್ಲದೆ ಒಂದು ವರ್ಷವಾಯಿತು. ಸಂಗೀತಕ್ಕೆ ಏಳುಸ್ವರಗಳು, ಆದರೆ ನನ್ನ ಪಾಲಿಗೆ ಮೂರು ಅಕ್ಷರಗಳು ಎಸ್.ಪಿ.ಬಿ. ರೇಡಿಯೊದಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಕೆ.ಎಸ್.ಚಿತ್ರಾರ ಹಾಡುಗಳನ್ನು ಕೇಳಿ ಬೆಳೆದ ಬಾಲ್ಯವದು. ‘ನಗುವಾ ನಯನಾ ಮಧುರಾ ಮೌನ’ ಹಾಡಿನ ಮೂಲಕ ಪ್ರೀತಿಯ ಕಚಗುಳಿ, ‘ಗುಡಿಗೇರಿಯಾದರೇನು, ಮಡಿಕೇರಿ ಆದರೇನು, ದುಡಿಬೇಕು ನಾವು ಮೊದಲು ಧಣಿಯಾಗಲು’ ಎಂಬ  ಬಾಂಧವ್ಯದ ಹಾಡು, ಹಾವಿನ  ದ್ವೇಷ ಹನ್ನೆರಡು ವರುಷ ಹಾಡಿನ ಕಿಚ್ಚು, ನಲಿವಾ ಗುಲಾಬೀ ಹೂವೇ ಹಾಡಿನ ಭಾವ ತೀವ್ರತೆ  ಮರೆಯಲು  ಸಾಧ್ಯವುಂಟೇ.

‘ಏಕ್ ದೂಜೇ ಕೇ ಲಿಯೇ’  ಸಿನಿಮಾದಲ್ಲಿ ಕಮಲ್ ಹಾಸನ್​ ಗೆ ದನಿಯಾದ  ‘ತೇರೆ ಮೇರೆ ಬೀಚ್ ಮೇ’  ಹಾಡು  ಪ್ರೇಮದ ಗಲಿಬಿಲಿಯಾದರೆ,  ‘ಹಮ್ ಆಪ್ ಕೇ  ಹೈ ಕೌನ್’  ಸಿನಿಮಾದ ‘ಪೆಹಲಾ ಪೆಹಲಾ ಪ್ಯಾರ್  ಹೈ’ ಹಾಡಿನಲ್ಲಿ ಪ್ರೀತಿಯ ನವಿರು ಭಾವವನ್ನು ಹೃದಯಕ್ಕೆ ತಲುಪಿಸಿದ ದನಿಯಾಗಿತ್ತು ನಿಮ್ಮದು.  ಮಲಯಾಳಂ ಸಿನಿಮಾ ‘ಕಿಲುಕ್ಕಂ’ ನಲ್ಲಿ ‘ಊಟ್ಟಿಪಟ್ಟಣಂ’ ಹಾಡಿನ ತುಂಟತನ ಮೆರೆಯುವುದುಂಟೆ? ತಮಿಳಿನ  ‘ಕರ್ಣ’ ಸಿನಿಮಾದ  ‘ಮಲರೇ ಮೌನಮಾ’ ಹಾಡು ಅದೆಷ್ಟು  ಬಾರಿ ಕೇಳಿದರೂ  ಸಾಕೆನಿಸುವುದಿಲ್ಲ. ನನ್ನ ಪಾಲಿಗೆ  ಎಸ್ಪಿಬಿ ಎಂದರೆ ಲವಲವಿಕೆ. ದಶಕಗಳಿಂದ ಭಾರತೀಯ ಸಂಗೀತ ರಂಗದಲ್ಲಿ ಮೆರೆದ ಅಪ್ರತಿಮ ಗಾಯಕ.

ನೀವು ಒಂದೇ ದಿನದಲ್ಲಿ 21 ಹಾಡುಗಳನ್ನು ಹಾಡಿದ್ದೀರಿ ಎಂದು ಕೇಳಿದ್ದೇನೆ. ವರ್ಷಗಳಲ್ಲಿ ಸರಾಸರಿ 3 ಹಾಡು ಎಂಬ ಲೆಕ್ಕವಿರಿಸುತ್ತಿದ್ದಿರಂತೆ. ಹಾಡಿನ ರೆಕಾರ್ಡಿಂಗ್ ಗಾಗಿ ಸ್ಟುಡಿಯೊದಿಂದ ಸ್ಟುಡಿಯೊಗೆ ಓಡುತ್ತಿದ್ದರು ಸಹ ಹಾಡಿನ ಬಗ್ಗೆ ರಾಜಿ ಮಾಡಿಕೊಳ್ಳಲು ನೀವು ಇಷ್ಟ ಪಡುತ್ತಿರಲಿಲ್ಲ. ಪ್ರಸಿದ್ಧ ಹಾಡು ‘ಇಲಯಾನಿಲಾ’ ಅನ್ನು 16 ಬಾರಿ ಬದಲಾಯಿಸಲಾಗಿತ್ತಂತೆ. ಹಾಡು ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತಿದ್ದ ನೀವು ಪ್ರತಿಯೊಂದು ಹಾಡಿನಲ್ಲಿಯೂ ಅದನ್ನೇ ಪಾಲಿಸಿದಿರಿ.

ಯೇಸುದಾಸ್ ಅವರಿಗೆ ನೀವು ಮಾನಸ ಗುರು ಆಗಿದ್ದಿರಿ. ಹಾಡಿನ ಸಾಲೊಂದರಲ್ಲಿ ಅಶ್ಲೀಲತೆ ಇದೆ ಎಂದು ಹಾಡಲು ನಿರಾಕರಿಸಿದ್ದ ಕೆ.ಎಸ್.ಚಿತ್ರಾ ಅವರಲ್ಲಿ ಹಾಡುವುದಷ್ಟೇ ನಮ್ಮ ಕೆಲಸ. ಬಾಕಿ ಉಳಿದದ್ದು ಸಿನಿಮಾದವರಿಗೆ ಬಿಟ್ಟಿದ್ದು ಎಂದು ಹೇಳಿ ಅವರಿಗೆ ಸಲಹೆ ನೀಡಿದವರು ನೀವು.

ಅಂದು ರೆಕಾರ್ಡಿಂಗ್ ಸ್ಟುಡಿಯೊವೊಂದರಲ್ಲಿ ನಿಮ್ಮ ದನಿ ಕೇಳಿ ಆ ಹುಡುಗ ಯಾರು ಎಂದು ಕೇಳಿದ್ದರಂತೆ ಎಂಜಿಆರ್. ತನಗಾಗಿ ಹೊಸ ದನಿಯೊಂದನ್ನು ಹುಡುಕುತ್ತಿದ್ದ ಕಾಲದಲ್ಲಿ ಅವರಿಗೆ  ನೀವು ಸಿಕ್ಕಿದಿರಿ. ‘ಅಡಿಮಪ್ಪೆಣ್ಣ್’ ಚಿತ್ರದಲ್ಲಿ ‘ಆಯಿರಮ್ ನಿಲವೇ ವಾ..ಒರಾಯಿರಂ ನಿಲವೇ ವಾ’ ಎಂಬ ಹಾಡಿಗೆ ನೀವು ದನಿಯಾಗಿ  ಬೆಳದಿಂಗಳನ್ನೇ ತಂದಿರಿ. ಆಮೇಲೆ ತಮಿಳು ಚಿತ್ರರಂಗ ದಿಗ್ಗಜರಾದ ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ರಜನೀಕಾಂತ್,ಎಂಜಿಆರ್,ಕಮಲ್ ಹಾಸನ್ ಎಲ್ಲರ ಹಾಡಿಗೂ ನೀವು ದನಿಯಾದಿರಿ. ಪ್ರೇಮ, ಹಾತೊರೆಯುವಿಕೆ, ಸಹಾನುಭೂತಿ, ಪ್ರೀತಿ, ತುಂಟಾಟ ಎಲ್ಲದಕ್ಕೂ ಹೊಂದುವ ದನಿ ನಿಮ್ಮದಾಗಿತ್ತು.

ಹಾಗೆ ತೊಡಗಿದ ಸಿನಿಮಾ ಸಂಗೀತ ಪಯಣದಲ್ಲಿ 5 ದಶಕಗಳಲ್ಲಿ ನೀವು ಹಾಡಿದ್ದು ಸುಮಾರು 40,000 ಹಾಡುಗಳನ್ನು. ಕನ್ನಡ ,ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು, ಕೊಂಕಣಿ, ಒರಿಯಾ, ಬಂಗಾಲಿ, ಮರಾಠಿ, ಪಂಜಾಬಿ ಸೇರಿದಂತೆ ಹದಿನೈದು ಭಾಷೆಗಳಲ್ಲಿ ಹಾಡಿರುವ ಏಕೈಕ ಗಾಯಕ! ಚಿತ್ರ ಗೀತೆ ಮಾತ್ರವಲ್ಲ ದೇವರ ನಾಮ, ಆಲ್ಬಂ ಹಾಡುಗಳು ,ಭಾವ ಗೀತೆ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಗೀತೆಗಳನ್ನ ಹಾಡಿ ಸಂಗೀತಲೋಕಕ್ಕೆ ಅನನ್ಯ ಕೊಡುಗೆ ನೀಡಿದವರು.

ಇನ್ನೊಂದು ಜನ್ಮವಿದ್ದರೆ ನಾನು ಕರ್ನಾಟಕದಲ್ಲೇ ಹುಟ್ಟಲು ಬಯಸುವೆ ಎಂದು ಹೇಳಿದ್ದಿರಿ. ಕಳೆದ ವರ್ಷ ಕೊರೊನಾ ವೈರಸ್ ನಿಮ್ಮನ್ನು ಬಲಿ ತೆಗೆದುಕೊಂಡಾಗ ಮನಸ್ಸು ಬಯಸಿದ್ದು.. ಮತ್ತೊಮ್ಮೆ ಹುಟ್ಟಿ ಬನ್ನಿ ಸರ್… ಎದೆ ತುಂಬಿ ಹಾಡಲು ನೀವು ಬೇಕು. Happy Birthday

ಇಂತಿ, ನಿಮ್ಮ ಅಭಿಮಾನಿ 

ಇದನ್ನೂ ಓದಿ:  ಗಾಯನ-ರಿಯಾಲಿಟಿ ಶೋ-ನಟನೆ-ಸಂಗೀತ ನಿರ್ದೇಶನ.. ಗಾನ ಗಾರುಡಿಗ SPB ಸದಾ ಬ್ಯುಸಿ!

(Remembering legendary Singer SP Balasubrahmanyam on his Birthday )

ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಭಾಗಿಯಾಗಿರಲಿಲ್ಲ: ಅಧಿಕಾರಿಗಳು
ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಭಾಗಿಯಾಗಿರಲಿಲ್ಲ: ಅಧಿಕಾರಿಗಳು