ಆ ಸಿನಿಮಾದಲ್ಲಿದ್ದ ಕೊರತೆ ಬಗ್ಗೆ ಈಗಲೂ ಬೇಸರ ಇದೆ ಎಂದ ಸುದೀಪ್

ಸುದೀಪ್ ಹಾಗೂ ಶಿವರಾಜ್​ಕುಮಾರ್ ‘ದಿ ವಿಲನ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಈ ಚಿತ್ರ ಅಂದುಕೊಂಡ ರೀತಿಯಲ್ಲಿ ಬಿಸ್ನೆಸ್ ಮಾಡಿಲ್ಲ. ಈ ಚಿತ್ರ ಇನ್ನೂ ಉತ್ತಮವಾಗಿ ಮೂಡಿಬರಬಹುದಿತ್ತು ಎನ್ನುವ ಭಾವನೆ ಸುದೀಪ್​ಗೆ ಈಗಲೂ ಇದೆ.

ಆ ಸಿನಿಮಾದಲ್ಲಿದ್ದ ಕೊರತೆ ಬಗ್ಗೆ ಈಗಲೂ ಬೇಸರ ಇದೆ ಎಂದ ಸುದೀಪ್
ಶಿವಣ್ಣ-ಸುದೀಪ್
Edited By:

Updated on: Feb 29, 2024 | 8:05 AM

ಶಿವರಾಜ್​ಕುಮಾರ್ (Shivarajkumar) ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಸುದೀಪ್ ಕಾರ್ಯಕ್ರಮಗಳಿಗೆ ಶಿವಣ್ಣ ಅತಿಥಿಯಾಗಿ ಬರುತ್ತಾರೆ. ಅದೇ ರೀತಿ ಶಿವರಾಜ್​ಕುಮಾರ್ ಸಿನಿಮಾಗಳಿಗೆ ಸುದೀಪ್ ಬೆಂಬಲ ನೀಡುತ್ತಾರೆ. ಈಗ ಶಿವರಾಜ್​ಕುಮಾರ್ ಹಾಗೂ ಪ್ರಭುದೇವ ನಟನೆಯ ‘ಕರಟಕ ದಮನಕ’ ಸಿನಿಮಾದ ಕ್ಯಾರೆಕ್ಟರ್​ ಟೀಸರ್​ನ ಸುದೀಪ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ ಅವರು ಸಿನಿಮಾ ಬಗ್ಗೆ, ಶಿವರಾಜ್​ಕುಮಾರ್ ಹಾಗೂ ಪ್ರಭುದೇವ ಅವರ ಅಪರೂಪದ ಕಾಂಬಿನೇಷನ್ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ‘ಜೋಗಿ’ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ.

‘ಶಿವರಾಜ್​ಕುಮಾರ್ ಹಾಗೂ ಪ್ರಭುದೇವ ಒಂದೇ ಫ್ರೇಮ್​ನಲ್ಲಿ ಬಂದು ಡ್ಯಾನ್ಸ್ ಮಾಡೋದನ್ನು ನೋಡೋದೇ ಅದ್ಭುತ. ಇಬ್ಬರೂ ಒಳ್ಳೆಯ ಡ್ಯಾನ್ಸರ್ಸ್. ಒಬ್ಬರು ಪರ್ಫೆಕ್ಷನಿಸ್ಟ್ ಆದರೆ, ಇನ್ನೊಬ್ಬರು ಎನರ್ಜಿಯಲ್ಲಿ ಅನ್​ಲಿಮಿಟೆಡ್ ಪ್ಯಾಕೇಜ್. ಇಬ್ಬರಿಗೂ ಡ್ಯಾನ್ಸ್ ಇಷ್ಟ. ಇಬ್ಬರಿಗೂ ಒಳ್ಳೆಯ ಕಾಮಿಡಿ ಟೈಮಿಂಗ್ ಇದೆ. ಇದು ಅಪರೂಪದ ಕಾಂಬಿನೇಷನ್. ಇವರು ಈ ಮೊದಲೇ ಒಟ್ಟಾಗಿ ಕೆಲಸ ಮಾಡಬೇಕಿತ್ತು’ ಎಂದಿದ್ದಾರೆ ಸುದೀಪ್.

‘ನಾನು ಶಾಲಾ ದಿನಗಳಲ್ಲಿ ಇದ್ದಾಗಲೇ ಶಿವಣ್ಣ ಯೂತ್ ಐಕಾನ್ ಆಗಿದ್ದರು. ಆಗ ನಾನು ಸಿನಿಮಾಗೆ ಬರುತ್ತೇನೆ ಎಂದುಕೊಂಡಿರಲಿಲ್ಲ. ಅವರ ನಟನೆಯ ಓಂ ಸಿನಿಮಾ ನೋಡಿ ಫ್ಯಾನ್ ಆದೆ. ಆ ಚಿತ್ರವನ್ನು ಥಿಯೇಟರ್​ನಲ್ಲೇ 10-12 ಬಾರಿ ನೋಡಿದ್ದೇನೆ. ಆ ಚಿತ್ರ ನೋಡದವರೇ ಇಲ್ಲ. ಅದು ಗೇಮ್ ಚೇಂಜರ್ ಸಿನಿಮಾ. ನನ್ನ ಸ್ಪರ್ಷ ಸಿನಿಮಾದ ಆಡಿಯೋ ಲಾಂಚ್​ನ ಶಿವಣ್ಣ ಲಾಂಚ್ ಮಾಡಿಕೊಟ್ಟರು’ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

ಶಿವರಾಜ್​ಕುಮಾರ್ ಹಾಗೂ ಸುದೀಪ್ ಅವರು ‘ದಿ ವಿಲನ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಚಿತ್ರ ಅಂದುಕೊಂಡ ರೀತಿಯಲ್ಲಿ ಬಿಸ್ನೆಸ್ ಮಾಡಿಲ್ಲ. ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಈ ಚಿತ್ರ ಇನ್ನೂ ಉತ್ತಮವಾಗಿ ಮೂಡಿಬರಬಹುದಿತ್ತು ಎನ್ನುವ ಭಾವನೆ ಸುದೀಪ್​ಗೆ ಈಗಲೂ ಇದೆ. ‘ವಿಲನ್ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಜೊತೆ ನಟಿಸೋಕೆ ಅವಕಾಶ ಸಿಕ್ಕಿದ್ದು ಬ್ರಿಲಿಯಂಟ್ ವಿಚಾರ. ನಮ್ಮಿಬ್ಬರ ಬ್ಯಾಲೆನ್ಸ್ ಇನ್ನೂ ಚೆನ್ನಾಗಿ ಆಗಬಹುದಿತ್ತು ಎಂದು ಈಗಲೂ ಅನಿಸುತ್ತದೆ. ಆ ಕೊರತೆ ಈಗಲೂ ಇದೆ. ಇದೊಂದು ಅಪರೂಪದ ಕಾಂಬಿನೇಷನ್. ಆದಾಗ್ಯೂ ಆ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ಆಯಿತು ಎನ್ನುವ ಖುಷಿ ಇದೆ’ ಎಂದಿದ್ದಾರೆ ಕಿಚ್ಚ ಸುದೀಪ್.

‘ಶಿವರಾಜ್​ಕುಮಾರ್ ಅವರು ಗೌರವ ಸಂಪಾದಿಸಿದ್ದಾರೆ. ಇದನ್ನು ಕೆಲವೇ ಕೆಲವು ಮಂದಿ ಮಾಡಲು ಸಾಧ್ಯ. ನಮ್ಮ ಮಧ್ಯೆ ಗೀತಕ್ಕ ಇದ್ದಾರೆ. ಅವರ ಮೇಲೂ ಸಾಕಷ್ಟು ಗೌರವ ಇದೆ. ನನ್ನ ಹಾಗೂ ಶಿವಣ್ಣ ಮಧ್ಯೆ ಒಳ್ಳೆಯ ಬಾಂಧವ್ಯ ಇರಲು ಅವರೂ ಕಾರಣ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ಪ್ರಭುದೇವ ಪರ್ಫೆಕ್ಷನಿಸ್ಟ್ ಎಂದ ಸುದೀಪ್; ನಟನ ಪ್ರತಿಕ್ರಿಯೆ ಏನು?

‘ಕರಟಕ ದಮನಕ’ ಸಿನಿಮಾ ಮಾರ್ಚ್ 8ರಂದು ರಿಲೀಸ್ ಆಗಲಿದೆ. ಯೋಗರಾಜ್ ಭಟ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಾಕ್​ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಸುದೀಪ್ ಅವರ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ‘ಮ್ಯಾಕ್ಸ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಈ ವರ್ಷವೇ ರಿಲೀಸ್ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us