ಕೊರೊನಾ ವಾರಿಯರ್​ ಆಗಿದ್ದ ಸಂಗೀತ ನಿರ್ದೇಶಕ, ವೈದ್ಯ ಕಿರಣ್​ ಸ್ಟುಡಿಯೋಗೆ ಕನ್ನ! 35 ಲಕ್ಷ ರೂ. ಮೌಲ್ಯದ ವಸ್ತು ಕಳವು

ಲಾಕ್​ಡೌನ್​ ಸಂದರ್ಭದಲ್ಲಿ ಕೊರೊನಾ ವೈರಸ್​ ಹಾವಳಿ ಮಿತಿ ಮೀರಿದಾಗ ಕಿರಣ್​ ಅವರು ಕೊರೊನಾ ವಾರಿಯರ್​ ಆಗಿ ಕೆಲಸ ಮಾಡಿದ್ದರು. ಆದರೆ ಈಗ ಅವರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಳ್ಳುವಂತಾಗಿರುವುದು ವಿಪರ್ಯಾಸ.

ಕೊರೊನಾ ವಾರಿಯರ್​ ಆಗಿದ್ದ ಸಂಗೀತ ನಿರ್ದೇಶಕ, ವೈದ್ಯ ಕಿರಣ್​ ಸ್ಟುಡಿಯೋಗೆ ಕನ್ನ! 35 ಲಕ್ಷ ರೂ. ಮೌಲ್ಯದ ವಸ್ತು ಕಳವು
(ಸಂಗೀತ ನಿರ್ದೇಶಕ ಕಿರಣ್​ ತೋಟಂಬೈಲ್​)

Updated on: Apr 16, 2021 | 1:04 PM

ಒಂದೆಡೆ ಕೊರೊನಾ ವೈರಸ್​ ಹರಡುವ ಭೀತಿ, ಇನ್ನೊಂದೆಡೆ ಲಾಕ್​ಡೌನ್ ಆದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕ. ಈ ಎಲ್ಲದರ ನಡುವೆ ಕಳ್ಳರ ಕಾಟ ! ಹೌದು, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಕಿರಣ್​ ತೊಟಂಬೈಲು ಅವರ ಸ್ಟುಡಿಯೋದಲ್ಲಿ ಕಳ್ಳತನ ಆಗಿದೆ. ಅಂದಾಜು 35 ಲಕ್ಷ ರೂ. ಮೌಲ್ಯದ ಸಂಗೀತ ಉಪಕರಣಗಳನ್ನು ಖದೀಮರು ಹೊತ್ತುಕೊಂಡು ಹೋಗಿದ್ದಾರೆ.

ಉಪೇಂದ್ರ ನಟನೆಯ ‘ಐ ಲವ್​ ಯೂ’ ಸಿನಿಮಾ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಕಿರಣ್​ ತೊಟಂಬೈಲ್​ ಅವರು ಜನಪ್ರಿಯರಾದರು. ಮೂಲತಃ ಅವರು ವೈದ್ಯರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಲಾಕ್​ಡೌನ್​ ಸಂದರ್ಭದಲ್ಲಿ ಕೊರೊನಾ ವೈರಸ್​ ಹಾವಳಿ ಮಿತಿ ಮೀರಿದಾಗ ಕಿರಣ್​ ಅವರು ಕೊರೊನಾ ವಾರಿಯರ್​ ಆಗಿ ಕೆಲಸ ಮಾಡಿದ್ದರು. ಆದರೆ ಈಗ ಅವರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಳ್ಳುವಂತಾಗಿರುವುದು ವಿಪರ್ಯಾಸ.

ತಲಘಟ್ಟಪುರ ಠಾಣಾ ವ್ಯಾಪ್ತಿ ಕರಿಯಣ್ಣನ ಪಾಳ್ಯದಲ್ಲಿ ಘಟನೆ ನಡೆದಿದೆ. ‘ಐ ಲವ್ ಯೂ’ ಸಿನಿಮಾದ ಯಶಸ್ಸಿನ ನಂತರ ಸ್ವಂತ ಸ್ಡುಡಿಯೋ ನಿರ್ಮಾಣಕ್ಕೆ ಕಿರಣ್​ ಕೈ ಹಾಕಿದ್ದರು. ಇನ್ನೇನು ಕೊನೇ ಹಂತದ ಕೆಲಸಗಳು ನಡೆಯುತ್ತಿದ್ದವು. ಸಿಸಿಟಿವಿ ಅಳವಡಿಸುವ ಕಾರ್ಯ ಬಾಕಿ ಇತ್ತು. ಅಷ್ಟರಲ್ಲಾಗಲೇ ಕಳ್ಳರು ಕರಾಮತ್ತು ತೋರಿಸಿದ್ದಾರೆ.

ಆರ್​. ಚಂದ್ರು ನಿರ್ದೇಶನದ, ಉಪೇಂದ್ರ-ರಚಿತಾ ರಾಮ್​ ನಟನೆಯ ‘ಐ ಲವ್​ ಯೂ’ ಸಿನಿಮಾದಲ್ಲಿನ ‘ಮಾತನಾಡಿ ಮಾಯವಾದೆ…’ ಹಾಡು ಸಖತ್​ ವೈರಲ್​ ಆಗಿತ್ತು. ಆ ಸಿನಿಮಾದಲ್ಲಿ ಸಿಕ್ಕ ಜನಪ್ರಿಯತೆಯಿಂದಾಗಿ ಕಿರಣ್​ಗೆ ಇನ್ನಷ್ಟು ಅವಕಾಶಗಳು ಹರಿದುಬಂದವು. ‘ಒಲವೇ ಮಂದಾರ 2’, ‘ಮೊದಲ ಮಿಡಿತ’ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಕಿರಣ್​ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಸ್ಟುಡಿಯೋಗೆ ಕಳ್ಳರು ಕನ್ನ ಆಗಿರುವುದು ಬೇಸರದ ಸಂಗತಿ.

ಇದನ್ನೂ ಓದಿ: ಮಂಡ್ಯ: ಕಾಶಿವಿಶ್ವನಾಥ ದೇವಾಲಯದ ಬೀಗ ಮುರಿದು ಶಿವಲಿಂಗ ಕಳ್ಳತನ

ಕಟ್ಟಡ ನಿರ್ಮಾಣ ವಸ್ತುಗಳ ಕಳವು: ನಾಲ್ವರ ಬಂಧನ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us