ಹಳೆಯ ಕಥೆ: ಯಶ್ ಕಾಣಲಿಲ್ಲ ಎಂದು ಮನೆ ಎದುರೇ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದ ಅಭಿಮಾನಿ  

| Updated By: ರಾಜೇಶ್ ದುಗ್ಗುಮನೆ

Updated on: Jan 09, 2024 | 12:11 PM

ಯಶ್ ಮನೆಯ ಹೊರಗೆ ಇದ್ದ ಭದ್ರತಾ ಸಿಬ್ಬಂದಿ ಬೆಂಕಿ ಆರಿಸಲು ಪ್ರಯತ್ನಿಸಿದ್ದರು. ಆದರೆ, ಸಾಧ್ಯವಾಗಲೇ ಇಲ್ಲ. ನಂತರ ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಗಲೇ ರವಿ ಅವರ ದೇಹ ಶೇ. 80 ಸುಟ್ಟು ಹೋಗಿತ್ತು.

ಹಳೆಯ ಕಥೆ: ಯಶ್ ಕಾಣಲಿಲ್ಲ ಎಂದು ಮನೆ ಎದುರೇ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದ ಅಭಿಮಾನಿ  
ಯಶ್ ಹಾಗೂ ಅಭಿಮಾನಿ
Follow us on

ಯಶ್ ಬರ್ತ್​ಡೇ ದಿನ (ಜನವರಿ) ಒಂದಾದ ಮೇಲೆ ಒಂದರಂತೆ ದುರ್ಘಟನೆಗಳು ನಡೆದವು. ಯಶ್ ಬ್ಯಾನರ್ ಕಟ್ಟಲು ಹೋದ ಗದಗ ಜಿಲ್ಲೆಯು ಸೊರಣಗಿ ಗ್ರಾಮದ ಹನುಮಂತ ಹರಿಜನ, ಮುರಳಿ ನಡವಿನಮನಿ ಮತ್ತು ನವೀನ್ ವಿದ್ಯುತ್ ತಂತಿ ತಗುಲಿ ನಿಧನ ಹೊಂದಿದರು. ಇದಾದ ಬೆನ್ನಲ್ಲೇ ಯಶ್ (Yash) ಅವರು ಕುಟುಂಬಕ್ಕೆ ಬಂದು ಸಾಂತ್ವನ ಹೇಳಿದ್ದರು. ಯಶ್ ವಾಹನವನ್ನು ಬೆನ್ನತ್ತಿ ಹೊರಟ ನವೀನ್ ಎಂಬ ಯುವಕ ಪೊಲೀಸ್ ಜೀಪ್​ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಈ ಮೂಲಕ ನಾಲ್ವರು ಯಶ್ ಅಭಿಮಾನಿಗಳು ಒಂದೇ ದಿನ ಮೃತಪಟ್ಟಿದ್ದಾರೆ. 2019ರಲ್ಲಿ ಒಂದು ದುರ್ಘಟನೆ ನಡೆದಿತ್ತು. ಯಶ್​​ನ ಭೇಟಿ ಮಾಡೋಕೆ ಆಗಿಲ್ಲ ಎಂದು ಅಭಿಮಾನಿಯೋರ್ವ ಬೆಂಕಿ ಹಚ್ಚಿಕೊಂಡು ಸತ್ತು ಹೋಗಿದ್ದ.

2019ರ ಜನವರಿ 8ರಂದು ಆದ ಘಟನೆ ಇದು. ದಾಸರಹಳ್ಳಿಯಲ್ಲಿ ವಾಸವಾಗಿದ್ದ ರವಿ ರಘುರಾಮ್ ಹೆಸರಿನ ಯುವಕ ಯಶ್ ಅವರ ಕಟ್ಟಾಭಿಮಾನಿ ಆಗಿದ್ದ. ಯಶ್ ಅವರು ಆಗ ವಾಸವಾಗಿದ್ದ ಹೊಸಕೆರೆಹಳ್ಳಿ ಮನೆ ಬಳಿ ವಿಶ್ ಮಾಡಲು ಬಂದಿದ್ದ. ಆದರೆ, ಯಶ್ ಕಾಣಲೇ ಇಲ್ಲ. ಯಶ್ ನಗರದಲ್ಲಿ ಇಲ್ಲ ಎಂದು ತಿಳಿದ ಯುವಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ.

ಯಶ್ ಮನೆಯ ಹೊರಗೆ ಇದ್ದ ಭದ್ರತಾ ಸಿಬ್ಬಂದಿ ಬೆಂಕಿ ಆರಿಸಲು ಪ್ರಯತ್ನಿಸಿದ್ದರು. ಆದರೆ, ಸಾಧ್ಯವಾಗಲೇ ಇಲ್ಲ. ನಂತರ ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಗಲೇ ರವಿ ಅವರ ದೇಹ ಶೇ. 80 ಸುಟ್ಟು ಹೋಗಿತ್ತು. ಆ ಬಳಿಕ ಯಶ್ ಅವರು ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದರು. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದರು. ಆದರೂ ಆತ ಬದುಕುಳಿಯಲೇ ಇಲ್ಲ.

‘ಪ್ರತಿ ವರ್ಷ ಯಶ್​ನ ಭೇಟಿ ಮಾಡಲು ನನ್ನ ಮಗ ಹೋಗುತ್ತಿದ್ದ. ಕಳೆದ ವರ್ಷ (2018) ನಮ್ಮನ್ನೂ ಕರೆದುಕೊಂಡು ಹೋಗಿದ್ದ. ಈ ವರ್ಷ ಹೋಗದಂತೆ ಹೇಳಿದ್ದೆವು. ಆದರೂ ಆತ ಹೋಗಿದ್ದ. ರವಿಗೆ ಅಷ್ಟೊಂದು ಪೆಟ್ರೋಲ್ ಎಲ್ಲಿ ಸಿಕ್ಕಿತೋ ತಿಳಿದಿಲ್ಲ’ ಎಂದು ಅವರ ತಂದೆ ಹೇಳಿದ್ದರು.

ಇದನ್ನೂ ಓದಿ: ಅಭಿಮಾನಿ ಬೈಕ್​ಗೆ ನಟ ಯಶ್​ ಬೆಂಗಾವಲು ವಾಹನ ಡಿಕ್ಕಿ; ಚಿಕಿತ್ಸೆ ಫಲಿಸದೆ ಯುವಕ ಸಾವು

ಆಸ್ಪತ್ರೆಯಿಂದ ಹೊರ ಬಿದ್ದ ಬಳಿಕ ಮಾತನಾಡಿದ್ದ ಯಶ್, ‘ನನಗೆ ಈ ರೀತಿಯ ಅಭಿಮಾನಿಗಳು ಬೇಡ. ಇದು ಪ್ರೀತಿ ಅಲ್ಲ. ಇದು ನನಗೆ ಖುಷಿ ನೀಡುವುದಿಲ್ಲ. ಇನ್ನುಮುಂದೆ ಈ ರೀತಿ ಆದರೆ ಅವರನ್ನು ನೋಡೋಕೆ ನಾನು ಬರುವುದೂ ಇಲ್ಲ. ಏನಾದರೂ ಮಾಡಿಕೊಂಡರೆ ಯಶ್ ಬಂದು ನೋಡುತ್ತಾರೆ ಎಂಬ ತಪ್ಪು ಸಂದೇಶವನ್ನು ಇದು ನೀಡಬಹುದು’ ಎಂದಿದ್ದರು ಯಶ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ