‘ಎಡಗೈ ಅಪಘಾತಕ್ಕೆ ಕಾರಣ’ ಬಿಡುಗಡೆಗೆ ‘ಶಾಖಾಹಾರಿ’ , ‘ಬ್ಲಿಂಕ್’ ನಿರ್ಮಾಪಕರ ನೆರವು
Edagai Apaghatakke Karana: ದಿಗಂತ್ ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಭಿನ್ನ ಹೆಸರು, ಟೀಸರ್ನಿಂದ ಗಮನ ಸೆಳೆದಿದೆ. ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಇದೀಗ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ಸಿನಿಮಾದ ನಿರ್ಮಾಪಕರು ಒಟ್ಟಾಗಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ.

ದಿಗಂತ್ (Diganth) ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ, ಭಿನ್ನ ಹೆಸರು, ಕತೆಯ ಆಯ್ಕೆಯಿಂದ ಸದ್ದು ಮಾಡಿದೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಸಾಗುತ್ತಿದೆ. ಆದರೆ ಇದೀಗ ಇನ್ನಿಬ್ಬರು ಸಿನಿಮಾ ನಿರ್ಮಾಪಕರು ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದ ಜೊತೆಗೆ ಕೈ ಜೋಡಿಸಿದ್ದು, ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಆ ಮೂಲಕ ಒಳ್ಳೆಯ ಸಿನಿಮಾವನ್ನು ಜನರ ಮುಂದೆ ತರುವ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.
ಹೊಸ ರೀತಿಯ ಸಿನಿಮಾ ಮಾಡಿ ಗೆದ್ದಿದ್ದ ಇಬ್ಬರು ನಿರ್ಮಾಪಕರು ಈಗ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾಕ್ಕಾಗಿ ಒಂದಾಗಿದ್ದಾರೆ. ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ಸಿನಿಮಾಗಳ ನಿರ್ಮಾಪಕರಾದ ರವಿಚಂದ್ರನ್ ಎಜೆ ಮತ್ತು ರಾಜೇಶ್ ಕೀಳಂಬಿ ಅವರುಗಳು ಒಟ್ಟಿಗೆ ಸೇರಿ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಅನ್ನು ಬಿಡುಗಡೆ ಮಾಡುತ್ತಿದ್ದಾರೆ. ಆ ಮೂಲಕ ಬಹುತೇಕ ನಿಂತೇ ಹೋಗಿದ್ದ ಸಿನಿಮಾಕ್ಕೆ ಮರು ಜೀವ ನೀಡಿದ್ದಾರೆ.
‘ಬ್ಲಿಂಕ್’ ಸಿನಿಮಾದ ನಿರ್ಮಾಪಕರಾದ ರವಿಚಂದ್ರ ಅವರು ಎಡಗೈ ಸಿನಿಮಾಗೆ ವಿತರಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ‘ಶಾಖಹಾರಿ’ ನಿರ್ಮಾಪಕ ರಾಜೇಶ್ ಕೀಳಂಬಿ ಸಹ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ. ‘ಶಾಖಹಾರಿ’ ಸಿನಿಮಾದ ರಾಜೇಶ್ ಅವರು ಯಾವುದೇ ಸಿನಿಮಾವನ್ನು ಕೈಗೆತ್ತಿಕೊಂಡಿರಲಿಲ್ಲ. ಆದರೆ ‘ಎಡಗೈ..’ ಸಿನಿಮಾದ ಕತೆ, ಮೇಕಿಂಗ್ ಇಷ್ಟವಾಗಿ ಆ ಸಿನಿಮಾಕ್ಕೆ ಕೈ ಹಾಕಿದ್ದಾರೆ.
ಇದನ್ನೂ ಓದಿ:ಮಂಗಳೂರು ವಿದ್ಯಾರ್ಥಿ ನಾಪತ್ತೆ ಕೇಸ್: ಮನೆಗೆ ಹೋಗಲು ಒಪ್ಪದ ದಿಗಂತ್, ಪೊಲೀಸ್ ವರದಿ
ಇಬ್ಬರೂ ನಿರ್ಮಾಪಕರು ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ವೀಕ್ಷಿಸಿ ಇಷ್ಟಪಟ್ಟು ಸಿನಿಮಾದ ಬಿಡುಗಡೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ‘ಶಾಖಹಾರಿ’ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ, ‘ಎಡಗೈ ಸಿನಿಮಾದ ಕಂಟೆಂಟ್ ಕ್ವಾಲಿಟಿ ಅದ್ಭುತವಾಗಿದೆ ಹಾಗೂ ಈ ಸಿನಿಮಾದಿಂದ ನನ್ನ ಪ್ರೊಡಕ್ಷನ್ ವ್ಯಾಲ್ಯೂ ಕೂಡ ಜಾಸ್ತಿ ಆಗುತ್ತೆ ಹಾಗಾಗಿ ಈ ಸಿನಿಮಾ ರಿಲೀಸ್ ಮಾಡಲು ಕೈಜೋಡಿಸಿದ್ದೇನೆ. ಶಾಖಹಾರಿ ಮತ್ತು ಬ್ಲಿಂಕ್ ಸಿನಿಮಾ ಮಾಡುವಾಗ ನಾವಿಬ್ಬರು ಹೊಸ ನಿರ್ಮಾಪಕರು ಆದರೀಗ ಇಬ್ಬರ ಅನುಭವ ಈ ಸಿನಿಮಾಗೆ ಸಹಾಯವಾಗಲಿದೆ’ ಎಂದು ಹೇಳಿದ್ದಾರೆ.
‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದ ನಿರ್ದೇಶಕ ಸಮರ್ಥ್ ಈ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅನುಭವಿ ನಿರ್ಮಾಪಕರ ಸೇರ್ಪಡೆಯಿಂದ ತಂಡಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ, ಯಶಸ್ವಿ ಸಿನಿಮಾಗಳನ್ನು ನೀಡಿದ ನಿರ್ಮಾಪಕರು ನಮ್ಮ ಸಿನಿಮಾಕ್ಕೆ ಬೆಂಬಲ ನೀಡುತ್ತಿರುವುದು ಖುಷಿ ನೀಡಿದೆ’ ಎಂದಿದ್ದಾರೆ.
ರವಿಚಂದ್ರ ಎಜೆ ಮಾತನಾಡಿ, ‘ಕಳೆದ ಆರು ತಿಂಗಳುಗಳಲ್ಲಿ ಹಲವಾರು ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ. ಅವುಗಳಲ್ಲಿ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ನಿಜವಾಗಿಯೂ ಚೆನ್ನಾಗಿದೆ. ನಮ್ಮ ಜನನಿ ಪಿಕ್ಚರ್ಸ್ ಅಡಿಯಲ್ಲಿ, ‘BTS’, ‘ನೋಡಿದವರು ಏನಂತರೆ’, ‘ಅನಾಮಧೇಯ ಅಶೋಕ್ ಕುಮಾರ್’ ಮತ್ತು ‘ಭಾವ ತೀರ ಯಾನ’ ಇನ್ನೂ ಕೆಲವು ಸಿನಿಮಾಗಳನ್ನು ವಿತರಣೆ ಮಾಡಿದ್ದೇವೆ. ಅವೆಲ್ಲ ಬಹಳ ಜನ ಮೆಚ್ಚುಗೆ ಗಳಿಸಿವೆ. ಈಗ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ವಿತರಣೆ ಮಾಡುತ್ತಿದ್ದೇವೆ, ಈ ಸಿನಿಮಾ ಸಹ ಜನ ಮೆಚ್ಚುಗೆ ಗಳಿಸುವ ವಿಶ್ವಾಸವಿದೆ’ ಎಂದಿದ್ದಾರೆ.
ಲವರ್ ಬಾಯ್ ಆಗಿ ಪ್ರೇಕ್ಷಕರಿಗೆ ಪರಿಚಯವಾಗಿರುವ ದಿಗಂತ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ದಿಗಂತ್ಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಶೀಘ್ರವೇ ಘೋಷಣೆ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Fri, 18 April 25