‘ಮೊದಲು ಮಣ್ಣು ಹೊರುವುದು ಕಲಿಯಲಿ’: ಚಿತ್ರರಂಗಕ್ಕೆ ಮಗನ ಎಂಟ್ರಿ ಬಗ್ಗೆ ದರ್ಶನ್​ ಮಾತು

ನಟ ದರ್ಶನ್​ ಅವರ ಪುತ್ರ ವಿನೀಶ್​ಗೆ ಚಿತ್ರರಂಗದಲ್ಲಿ ಆಸಕ್ತಿ ಇದೆ. ಸ್ಯಾಂಡಲ್​ವುಡ್​ಗೆ ಪುತ್ರ ಎಂಟ್ರಿ ನೀಡುವುದು ಯಾವಾಗ ಎಂಬ ಪ್ರಶ್ನೆಗೆ ದರ್ಶನ್​ ಅವರು ಉತ್ತರ ನೀಡಿದ್ದಾರೆ. ಇಂದು (ಫೆ.16) ಹುಟ್ಟುಹಬ್ಬದ ಪ್ರಯುಕ್ತ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್​ ಅವರು ಈ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಒಂದಷ್ಟು ಇಂಟರೆಸ್ಟಿಂಗ್​ ವಿಷಯಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಮೊದಲು ಮಣ್ಣು ಹೊರುವುದು ಕಲಿಯಲಿ’: ಚಿತ್ರರಂಗಕ್ಕೆ ಮಗನ ಎಂಟ್ರಿ ಬಗ್ಗೆ ದರ್ಶನ್​ ಮಾತು
ವಿನೀಶ್​, ದರ್ಶನ್​

Updated on: Feb 16, 2024 | 12:29 PM

ಸ್ಟಾರ್​ ನಟರ ಮಕ್ಕಳು ಚಿತ್ರರಂಗಕ್ಕೆ ಬರುವುದು ವಾಡಿಕೆ. ‘ಚಾಲೆಂಜಿಂಗ್ ಸ್ಟಾರ್​’ ದರ್ಶನ್​ ಅವರ ಮಗ ವಿನೀಶ್​ ತೂಗುದೀಪ (Darshan son Vineesh) ಕೂಡ ಸ್ಯಾಂಡಲ್​ವುಡ್​ಗೆ ಕಾಲಿಡುವುದು ಖಚಿತ. ಆದರೆ ಅದಕ್ಕೆ ಸಮಯ ಕೂಡಿಬರಬೇಕು. ದರ್ಶನ್​ ನಟನೆಯ ‘ಮಿ. ಐರಾವತ’ ಹಾಗೂ ‘ಯಜಮಾನ’ ಸಿನಿಮಾಗಳಲ್ಲಿ ವಿನೀಶ್​ಗೆ (Vineesh) ಅತಿಥಿ ಪಾತ್ರವಿತ್ತು. ಪೂರ್ಣಪ್ರಮಾಣದಲ್ಲಿ ದರ್ಶನ್​ (Darshan) ಪುತ್ರ ಚಿತ್ರರಂಗಕ್ಕೆ ಕಾಲಿಡುವುದು ಯಾವಾಗ ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ದರ್ಶನ್​ ಅವರು ನೇರ ಉತ್ತರ ನೀಡಿದ್ದಾರೆ. ‘ಮೊದಲು ಮಣ್ಣು ಹೊರುವುದು ಕಲಿಯಲಿ. ಆಮೇಲೆ ನೋಡಿಕೊಳ್ಳೋಣ’ ಎಂದು ಅವರು ಹೇಳಿದ್ದಾರೆ.

ಇಂದು (ಫೆಬ್ರವರಿ 16) ದರ್ಶನ್​ ಜನ್ಮದಿನ. ಆ ಪ್ರಯುಕ್ತ ಆರ್​ಆರ್​ ನಗರದ ಅವರ ನಿವಾಸದ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದಾರೆ. ದೂರದ ಊರುಗಳಿಂದ ಬಂದಿರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ಕಂಡು ಖುಷಿಪಟ್ಟಿದ್ದಾರೆ. ಕೆಲವರು ಆರತಿ ಬೆಳಗಿದ್ದಾರೆ. ಆ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಈ ನಡುವೆ ಮಾಧ್ಯಮಗಳ ಜೊತೆ ದರ್ಶನ್​ ಮಾತನಾಡಿದ್ದಾರೆ.

ಮಾಧ್ಯಮಗಳ ಜೊತೆ ದರ್ಶನ್​ ಮಾತು:

ಸಿನಿಮಾಗಳು ಯಾಕೆ ತಡವಾಗುತ್ತವೆ ಎಂಬುದನ್ನು ದರ್ಶನ್​ ವಿವರಿಸಿದ್ದಾರೆ. ‘ಮೊದಲು ನಮಗೆ ಮಾನಿಟರ್​ ಇರಲಿಲ್ಲ. 30 ಅಥವಾ 40 ದಿನದಲ್ಲಿ ಶೂಟಿಂಗ್​ ಮಾಡುತ್ತಿದ್ದೆವು. ಕ್ಯಾಮೆರಾಮ್ಯಾನ್​ ಮತ್ತು ಡೈರೆಕ್ಟರ್​ ನೋಡಿ ಫೈನಲ್​ ಎಂದು ಹೇಳಿದರೆ ಮುಗಿದು ಹೋಗುತ್ತಿತ್ತು. ಆದರೆ ಈಗ ಮಾನಿಟರ್​ ಬಂದಿದೆ. ಯಾವನೋ ಫ್ರೆಂಡ್​ ಬಂದು, ಮಾನಿಟರ್​ ನೋಡಿ ಅವನು ಏನಾದರೂ ಸಲಹೆ ನೀಡಿ ಒನ್​ ಮೋರ್​ ಎಂದರೂ ಕೂಡ ನಾವು ಒನ್​ ಮೋರ್​ ಮಾಡುತ್ತೇವೆ. ತಾಂತ್ರಿಕವಾಗಿ ಮಾನಿಟರ್​ನಿಂದ ಸಾಕಷ್ಟು ಬದಲಾವಣೆ ಆಗಿದೆ. ಮುಂದಕ್ಕೆ ಹೋಗುತ್ತಿದ್ದೇವೆ. ಆದರೂ ಕಷ್ಟ ಆಗುತ್ತಿದೆ’ ಎಂದು ದರ್ಶನ್​ ಹೇಳಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಚಿತ್ರಕ್ಕಾಗಿ ಕೈ ಜೋಡಿಸಿದ ದರ್ಶನ್​-ತರುಣ್; ‘ಕಾಟೇರ’ ಬಳಿಕ ಸಿಂಧೂರ ಲಕ್ಷ್ಮಣನ ಕಥೆ

‘ನಾವು ಚಿತ್ರರಂಗಕ್ಕೆ ಬಂದು ಇಷ್ಟು ವರ್ಷವಾದರೂ ಇನ್ನೂ ಜೀರೋದಲ್ಲಿ ಇದ್ದೇವೆ. ಏನಾದರೂ ಮಾಡಬೇಕು. ಕಳೆದ ವರ್ಷ ಎರಡು ಸಿನಿಮಾ ಮಾಡಿದ್ದೇನೆ. ಪ್ರತಿ ವರ್ಷ ಎರಡು ಸಿನಿಮಾ ಮಾಡಲು ನಾನು ಪ್ರಯತ್ನಿಸುತ್ತೇನೆ. ಆದರೆ ಸೆಟ್​ಗಳು ಹಾಕಬೇಕು. ಅದಕ್ಕೆಲ್ಲ ಸ್ವಲ್ಪ ತಡವಾಗುತ್ತದೆ’ ಎಂದು ದರ್ಶನ್​ ಹೇಳಿದ್ದಾರೆ. ಸದ್ಯ ಅವರು ‘ಡೆವಿಲ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಆ ಸಿನಿಮಾದಿಂದ ಫಸ್ಟ್​ಲುಕ್​ ಟೀಸರ್​ ಬಿಡುಗಡೆ ಆಗಿದೆ. ಅದನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಜೊತೆಗೆ 59ನೇ ಸಿನಿಮಾ ಕೂಡ ಘೋಷಣೆ ಆಗಿದೆ. ‘D59’ ಸಿನಿಮಾಗೆ ತರುಣ್​ ಸುಧೀರ್​ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ಐತಿಹಾಸಿಕ ಕಥೆ ಇರಲಿದ್ದು, ಈಗಾಗಲೇ ಸ್ಕ್ರಿಪ್ಟ್​ ಕೆಲಸಗಳಿಗೆ ಚಾಲನೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us