‘ಸಂಘಿ’ ಎಂದು ಟ್ರೋಲ್ ಮಾಡಿದವರಿಗೆ ‘ಧುರಂಧರ್’ ನಟ ಆರ್. ಮಾಧವನ್ ತಿರುಗೇಟು
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪೋಸ್ಟ್ಗಳಿಗೆ ‘ಸಂಘಿ’ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡಿದವರಿಗೆ ಖ್ಯಾತ ನಟ ಆರ್. ಮಾಧವನ್ ಅವರು ಉತ್ತರ ನೀಡಿದ್ದಾರೆ. ‘ಧುರಂಧರ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಕೂಡ ಮಾಧವನ್ ಅವರನ್ನು ಕೆಲವರು ಟೀಕಿಸಿದ್ದರು. ಆ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಚಿತ್ರರಂಗದ ಜನಪ್ರಿಯ ನಟ ಆರ್. ಮಾಧವನ್ (R. Madhavan) ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಅವರನ್ನು ‘ಸಂಘಿ’ ಎಂದು ಕರೆಯಲಾಗಿತ್ತು. ಅವರು ನಟಿಸಿದ ‘ಧುರಂಧರ್’ (Dhurandhar) ಮತ್ತು ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾಗಳನ್ನು ‘ಪ್ರೊಪಗಾಂಡಾ’ ಎಂದು ಟೀಕಿಸಲಾಗಿತ್ತು. ಆ ಎಲ್ಲ ಆರೋಪಗಳಿಗೆ ಆರ್. ಮಾಧವನ್ ಅವರು ತಿರುಗೇಟು ನೀಡಿದ್ದಾರೆ.
ಭಾರತದ ಶ್ರೇಷ್ಠ ಸಂಶೋಧಕ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (ಜಿಡಿ ನಾಯ್ಡು) ಅವರ ಬಯೋಪಿಕ್ ‘ಜಿಡಿಎನ್’ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾವು ಯಾವುದೇ ರಾಜಕೀಯ ಪಕ್ಷದ ಬೆಂಬಲಿತರಲ್ಲ ಮತ್ತು ಬಾಲ್ಯದಿಂದಲೂ ದೇಶವನ್ನು ಪ್ರೀತಿಸುವುದನ್ನು ಕಲಿತಿದ್ದೇನೆ ಎಂದು ಆರ್. ಮಾಧವನ್ ಅವರು ಸ್ಪಷ್ಟಪಡಿಸಿದ್ದಾರೆ.
‘ಬಾಲ್ಯದಿಂದಲೇ ದೇಶ ಪ್ರೇಮ ರಕ್ತಗತವಾಗಿದೆ’
ಮಾಧ್ಯಮವೊಂದರ ಸಂದರ್ಶನದಲ್ಲಿ ಆರ್. ಮಾಧವನ್ ಅವರು ಮಾತನಾಡಿದ್ದಾರೆ. ‘ಆನ್ಲೈನ್ನಲ್ಲಿ ಯಾರು ನಿಜವಾದ ಬಳಕೆದಾರರು ಮತ್ತು ಯಾರು ದುಡ್ಡು ಪಡೆದು ಕಮೆಂಟ್ ಮಾಡುವವರು ಎಂಬುದು ಸುಲಭವಾಗಿ ತಿಳಿಯುತ್ತದೆ. ಪ್ರತಿಯೊಬ್ಬರೂ ತಾವು ಬೆಳೆದು ಬಂದ ವಾತಾವರಣದ ಪ್ರತಿಫಲವಾಗಿರುತ್ತಾರೆ. ಬಾಲ್ಯದಿಂದಲೂ ನನ್ನ ದೇಶವನ್ನು ನಂಬಲು ಮತ್ತು ಪ್ರೀತಿಸಲು ನನಗೆ ಕಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ಕಮೆಂಟ್ಗಳಿಗೆ ತಲೆ ಕೆಡಿಸಿಕೊಳ್ಳಲ್ಲ’
‘ನಾನು ಎಂದಿಗೂ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ವಿರುದ್ಧ ಪೋಸ್ಟ್ ಮಾಡಿಲ್ಲ. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅದನ್ನು ಮೆಚ್ಚಿ ಪೋಸ್ಟ್ ಮಾಡಿದ್ದೇನೆ. ಒಬ್ಬ ವ್ಯಕ್ತಿ ದೇಶದ ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗಿ ಆಯ್ಕೆಯಾದಾಗ ಅವರಿಗೆ ಬೆಂಬಲ ನೀಡುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ನಾನು ಕಾಮೆಂಟ್ಗಳನ್ನು ಓದುತ್ತೇನೆ, ಆದರೆ ಅದು ನನ್ನ ನಿರ್ಧಾರಗಳ ಮೇಲೆ ಪ್ರಭಾವ ಬೀರಲ್ಲ. ಯಾರಾದರೂ ಇದರ ಬಗ್ಗೆ ನನಗೆ ಅಪರಾಧಿ ಭಾವನೆ ಮೂಡಿಸಲು ಯತ್ನಿಸಿದರೆ, ಅವರ ಉದ್ದೇಶವನ್ನೇ ನಾನು ಪ್ರಶ್ನಿಸುತ್ತೇನೆ’ ಎಂದಿದ್ದಾರೆ ಆರ್. ಮಾಧವನ್.
ಇದನ್ನೂ ಓದಿ: ರಜನಿಕಾಂತ್ ಸ್ಟೈಲ್ ಕಾಪಿ ಮಾಡಲು ಹೋಗಿ ಹೀನಾಯ ಸೋಲು ಕಂಡಿದ್ದ ಆರ್. ಮಾಧವನ್
‘ಧುರಂಧರ್’ ಪ್ರೊಪಗಾಂಡಾ ಚಿತ್ರ ಎಂದವರಿಗೆ ತಿರುಗೇಟು:
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಚಿತ್ರವು ಸರ್ಕಾರಿ ಪರ ಪ್ರೊಪಗಾಂಡಾ ಸಿನಿಮಾ ಎಂಬ ಟೀಕೆಗೆ ಗುರಿ ಆಗಿತ್ತು. ಅದಕ್ಕೂ ಮಾಧವನ್ ಉತ್ತರ ನೀಡಿದ್ದಾರೆ. ‘ಧುರಂಧರ್ ಸಿನಿಮಾದ ಕಥೆ ಪಾಕಿಸ್ತಾನದ ಹಿನ್ನೆಲೆಯಲ್ಲಿ ನಡೆಯುತ್ತದೆ. ಅಲ್ಲಿ ಏನೇ ನಡೆದರೂ ಅದು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಲಾಗಿದೆ. ಇದರಲ್ಲಿ ಪ್ರೊಪಗಾಂಡಾ ಎಲ್ಲಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದು ಆರ್. ಮಾಧವನ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




