ಈ ಬಾರಿ ಪ್ರಚಾರಕ್ಕೆ ಬರ್ತಾರಾ ಸುದೀಪ್: ಅವರೇ ಕೊಟ್ಟರು ಉತ್ತರ

Kichcha Sudeep: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಸುದೀಪ್, ಲೋಕಸಭೆ ಚುನಾವಣೆಯಲ್ಲಿ ಯಾರ ಪರ ಪ್ರಚಾರ ಮಾಡಲಿದ್ದಾರೆ? ಅವರೇ ಉತ್ತರ ನೀಡಿದ್ದಾರೆ.

ಈ ಬಾರಿ ಪ್ರಚಾರಕ್ಕೆ ಬರ್ತಾರಾ ಸುದೀಪ್: ಅವರೇ ಕೊಟ್ಟರು ಉತ್ತರ

Updated on: Mar 23, 2024 | 2:42 PM

ಕಿಚ್ಚ ಸುದೀಪ್ (Kichcha Sudeep) ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಅಬ್ಬರದ ಪ್ರಚಾರ ಮಾಡಿದ್ದರು. ಸುದೀಪ್, ಬಿಜೆಪಿ ಪರವಾಗಿ ಅಖಾಡಕ್ಕೆ ಇಳಿದಿದ್ದು ರಾಷ್ಟ್ರೀಯ ಸುದ್ದಿಯಾಗಿತ್ತು. ಆದರೆ ಆಡಳಿತ ವಿರೋಧಿ ಅಲೆ ಎದುರಿಸಿದ್ದ ಬಿಜೆಪಿಗೆ ಕಿಚ್ಚ ಸುದೀಪ್ ಪ್ರಚಾರ ಹೆಚ್ಚಿನ ಸಹಾಯ ಮಾಡಲಿಲ್ಲ. ಇದೀಗ ಲೋಕಸಭೆ ಚುನಾವಣೆ ಬಂದಿದ್ದು, ಈ ಬಾರಿ ಸುದೀಪ್ ಯಾವ ಅಭ್ಯರ್ಥಿ ಪರ ಅಥವಾ ಪಕ್ಷದ ಪರವಾಗಿ ಚುನಾವಣೆ ಪ್ರಚಾರ ಮಾಡಲಿದ್ದಾರೆ ಎಂಬ ಕುತೂಹಲ ಇದೆ. ಕ್ರಿಕೆಟ್ ಟೀಂ ಮೇಟ್, ನಟ, ಕಿರಿಯ ಮಿತ್ರ ಚಂದನ್​ರ ಹೊಸ ಹೋಟೆಲ್ ಉದ್ಘಾಟನೆಗೆ ಆಗಮಿಸಿದ್ದ ಸುದೀಪ್, ಈ ಬಗ್ಗೆ ಮಾತನಾಡಿದ್ದಾರೆ.

‘ಕಳೆದ ಬಾರಿ ಯಾರಿಗಾಗಿ, ಯಾವ ಕಾರಣಕ್ಕಾಗಿ ಪ್ರಚಾರಕ್ಕೆ ಹೋಗಿದ್ದೆ ಎಂಬುದನ್ನು ನಾನು ಸ್ಪಷ್ಟಪಡಿಸಿದ್ದೆ. ಈ ಬಾರಿ ಇನ್ನೂ ಸಹ ಯಾರೂ ನನ್ನನ್ನು ಪ್ರಚಾರಕ್ಕಾಗಿ ಕೇಳಿಲ್ಲ. ಕೇಳಿದಾಗ ಆ ಬಗ್ಗೆ ನಿರ್ಣಯ ಮಾಡುತ್ತೇನೆ’ ಎಂದಿದ್ದಾರೆ. ಮುಂದುವರೆದು, ‘ಸಿನಿಮಾ ಬಿಟ್ಟು ಕ್ರಿಕೆಟ್​ನಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಈಗಾಗಲೇ ಅಭಿಮಾನಿಗಳು, ಗೆಳೆಯರು ಗಲಾಟೆ ಮಾಡುತ್ತಿದ್ದಾರೆ. ಇಂಥಹಾ ಹೊತ್ತಿನಲ್ಲಿ. ಶೂಟಿಂಗ್ ಬಿಟ್ಟು ರಾಜಕೀಯ ಪ್ರಚಾರಕ್ಕೆ ಹೋದರೆ ಇನ್ನಷ್ಟು ಗಲಾಟೆಗಳಾಗುತ್ತವೆಯೋ ಏನೋ’ ಎಂದು ತಮಾಷೆ ಮಾಡಿದರು.

ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ? ಎಂಬ ಪ್ರಶ್ನೆಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ ಸುದೀಪ್, ‘ನೋಡಿ ಈಗ ನಾನು ಹೋಟೆಲ್​ ಉದ್ಘಾಟನೆಗೆ ಬರಲ್ಲ ಅಂದುಕೊಂಡಿದ್ದರು ಆದರೆ ಬಂದಿದ್ದೇನೆ. ಹಾಗೆಯೇ ರಾಜಕೀಯದ್ದು ಏನಾಗುತ್ತದೆಯೋ ನೋಡೋಣ. ಎಲ್ಲರೂ ಬರೊಲ್ಲ ಅಂದುಕೊಂಡಿದ್ದಾರೆ, ಬಂದಾಗ ಗೊತ್ತಾಗುತ್ತದೆ. ಒಂದೊಮ್ಮೆ ಬರಲಿಲ್ಲ ಎಂದರೆ ಬರಲಿಲ್ಲ ಅಷ್ಟೆ’ ಎಂದರು ಸುದೀಪ್.

ಇದನ್ನೂ ಓದಿ:‘ಕೆರೆ ಬೇಟೆ’ ಚಿತ್ರತಂಡಕ್ಕೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

ಹೋಟೆಲ್​ ಕುರಿತು ಮಾತನಾಡಿದ ಸುದೀಪ್, ‘ನಮ್ಮ ತಂದೆಯವರು ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಅವರಿಗೆ ಆ ಬಗ್ಗೆ ಬಹಳ ಆಸಕ್ತಿಯಿತ್ತು, ಜವಾಬ್ದಾರಿಯಿಂದ ಆ ಕೆಲಸ ಮಾಡುತ್ತಿದ್ದರು. ನನ್ನ ಗೆಳೆಯರು ಕೆಲವರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು. ‘ನೀವು ಯಾವಾಗ ಹೋಟೆಲ್ ಆರಂಭಿಸುತ್ತೀರಿ?’ ಎಂಬ ಪ್ರಶ್ನೆಗೆ, ‘ನಮ್ಮ ತಂದೆಯವರು ಬಹಳ ಚೆನ್ನಾಗಿ ಆ ಉದ್ಯಮ ಮಾಡಿದ್ದರು. ಆ ಉದ್ಯಮವನ್ನು ಮುಂದುವರೆಸಲು ಅದಕ್ಕೆ ಒಂದು ಅರ್ಹತೆ, ಯೋಗ್ಯತೆ ಬೇಕು. ನಮ್ಮ ತಂದೆಯವರು ಹೋಟೆಲ್ ಉದ್ಯಮ ಮಾಡಿ ಹೊಟ್ಟೆ ತುಂಬ ಊಟ ಹಾಕಿದರು. ಆ ಕೆಲಸವನ್ನು ನಾನು ಮನೆಯಲ್ಲಿದ್ದುಕೊಂಡು ಮಾಡುತ್ತಿದ್ದೇನೆ’ ಎಂದರು.

ಚಂದನ್ ಬಗ್ಗೆ ಮಾತನಾಡಿ, ‘ಚಂದನ್ ನಮ್ಮ ಕುಟುಂಬದ ಸದಸ್ಯ ಇದ್ದಂತೆ, ಅವರಿಗೆ ಈ ಉದ್ಯಮದ ಬಗ್ಗೆ ಅತೀವ ಆಸಕ್ತಿ ಇದೆ. ಚಂದನ್ ಚೆನ್ನಾಗಿ ಸಹ ಮಾಡುತ್ತಾರೆ. ಚೆನ್ನಾಗಿ ಬ್ಯುಸಿನೆಸ್ ಮಾಡುತ್ತಿದ್ದಾರೆ. ಅವರ ಹೋಟೆಲ್​ಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ’ ಎಂದು ಹಾರೈಸಿದರು. ಚಂದನ್​ರ ಕೆಲವು ಚಿತ್ರರಂಗದ ಗೆಳೆಯರು, ಕಿರುತೆರೆ ಗೆಳೆಯರು ಹೋಟೆಲ್ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಚಂದನ್ ಈಗಾಗಲೇ ಕೆಲವು ಹೋಟೆಲ್​ಗಳನ್ನು ತೆರೆದಿದ್ದಾರೆ. ಇದೀಗ ಹೊಸ ಹೋಟೆಲ್ ಅನ್ನು ಚಂದನ್ ಪ್ರಾರಂಭಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us