
ಸಿನಿಮಾ (Cinema) ಹಾಗೂ ರಾಜಕೀಯಗಳ ನಂಟು ಅರ್ಧ ಶತಮಾನಕ್ಕೂ ಹಳೆಯದು. ಸ್ವಾತಂತ್ರ್ಯ ಪೂರ್ವದಿಂದಲೂ ಸಿನಿಮಾ ಮತ್ತು ರಾಜಕೀಯಗಳು ಜೊತೆ-ಜೊತೆಯಾಗಿ ಸಾಗುತ್ತಿವೆ. ಸಿನಿಮಾ ರಂಗದಲ್ಲಿ ಹೆಸರು ಮಾಡಿದವರ ನಿವೃತ್ತಿ ಯೋಜನೆ ರಾಜಕೀಯವೇ ಆಗಿರುತ್ತದೆ. ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಬಹಳ ಸಾಮಾನ್ಯ. ಇತ್ತೀಚೆಗೆ ತಾನೆ, ಸ್ಟಾರ್ ನಟ ವಿಜಯ್ ಅವರು ತಮಿಳುನಾಡಿನ ಸಿಎಂ ಆಗುವ ಮೂಲಕ ದಕ್ಷಿಣದ ಕೆಲವು ಸ್ಟಾರ್ ನಟರುಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದಾರೆ. ಇದಕ್ಕೆ ನಟ ಯಶ್ ಸಹ ಹೊರತಲ್ಲ.
‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ ಯಶ್ ಅವರನ್ನು ಪ್ರೇಕ್ಷಕರೊಬ್ಬರು, ‘ವಿಜಯ್ ಸಿಎಂ ಆಗಿದ್ದಾರೆ. ಅವರಂಥೆ ದೊಡ್ಡ ಅಭಿಮಾನಿ ವರ್ಗ ನಿಮಗೂ ಇದೆ. ನೀವೂ ರಾಜಕೀಯಕ್ಕೆ ಬರುತ್ತೀರ? ಸಿಎಂ ಆಗುವ ಆಸೆ ಇದೆಯಾ?’ ಎಂದು ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿರುವ ಯಶ್, ರಾಜಕೀಯ ಪ್ರವೇಶವನ್ನು ಸಂಪೂರ್ಣವಾಗಿ ನಿರಾಕರಿಸಿಲ್ಲ. ಬದಲಿಗೆ ಅಭಿಮಾನಿಗಳು ನಿರೀಕ್ಷೆ ಇರಿಸಿಕೊಳ್ಳಬಹುದಾದ ಉತ್ತರವನ್ನೇ ನೀಡಿದ್ದಾರೆ.
‘ನಾನು ಸದ್ಯಕ್ಕೆ ನಟನಾಗಿ ಹೆಚ್ಚು ಕೆಲಸ ಮಾಡಬೇಕಿದೆ, ನಟನಾಗಿ ಸಾಧಿಸುವುದು ಹೆಚ್ಚಿದೆ. ನಮ್ಮ ಚಿತ್ರರಂಗವನ್ನು ಇನ್ನೂ ಒಳ್ಳೆಯ ಸ್ಟೇಜ್ಗೆ ಹೇಗೆ ತರಬಹುದು ಎಂಬ ಗುರಿಯನ್ನಿರಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಆದರೆ ನನಗೆ ರಾಜಕೀಯದ ಬಗ್ಗೆ ಯಾವುದೇ ಪೂರ್ವಾಗ್ರಹ ಇಲ್ಲ. ನಾನು ಅರ್ಥ ಮಾಡಿಕೊಂಡಿರುವಂತೆ ರಾಜಕೀಯ ಎಂದರೆ ಪ್ರಜೆಗಳ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಜನಪರವಾಗಿ ಕೆಲಸ ಮಾಡುವುದೇ ಆಗಿದೆ. ಮುಂದೆ ಭವಿಷ್ಯದಲ್ಲಿ ಅವಶ್ಯಕತೆ ಇದೆ ಎನಿಸಿದರೆ, ಅವಕಾಶ ಇದೆ ಎನಿಸಿದರೆ ರಾಜಕೀಯಕ್ಕೆ ಬರಬಹುದೇನೋ, ಆದರೆ ಈಗ ಖಂಡಿತ ಅದರ ಅವಶ್ಯಕತೆ ಇಲ್ಲ ಎನಿಸುತ್ತದೆ. ಹಾಗೂ ನಟನಾಗಿ ನಾನು ಮಾಡಬೇಕಾದ ಕೆಲಸಗಳು ಇನ್ನೂ ಹೆಚ್ಚಿವೆ’ ಎಂದಿದ್ದಾರೆ ನಟ ಯಶ್.
ಇದನ್ನೂ ಓದಿ:ಚೀನಾದಲ್ಲೂ ‘ರಾಮಾಯಣ’ ಸಿನಿಮಾದ ಟ್ರೇಲರ್ ನೋಡಿ ಫಿದಾ ಆದ ಪ್ರೇಕ್ಷಕರು
ಮುಂದೆ ಅವಶ್ಯಕತೆ ಇದ್ದರೆ, ಅನಿವಾರ್ಯತೆ ಇದ್ದರೆ ರಾಜಕೀಯಕ್ಕೆ ಬರುತ್ತೇನೆ ಎಂದಿದ್ದಾರೆ ಯಶ್. ಇದು ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. 40 ವರ್ಷ ವಯಸ್ಸಿನ ಯಶ್ ಅವರಿಗೆ ಕನಿಷ್ಟ ಇನ್ನೂ 10-15 ವರ್ಷ ಚಿತ್ರರಂಗದಲ್ಲಿ ಒಳ್ಳೆಯ ಮಾರುಕಟ್ಟೆ ಇದ್ದೇ ಇರಲಿದೆ. ಬಹುಷಃ 15 ವರ್ಷಗಳ ಬಳಿಕ ಚಿತ್ರರಂಗದಲ್ಲಿ ನಿವೃತ್ತಿ ಪಡೆಯುವ ವೇಳೆಗೆ ರಾಜಕೀಯಕ್ಕೆ ಬರಬಹುದೇನೋ ನೋಡಬೇಕಿದೆ.
ಕರ್ನಾಟಕದಲ್ಲಿ ಸಿನಿಮಾ ಮಂದಿ ರಾಜಕೀಯಕ್ಕೆ ಬಂದು ದೊಡ್ಡ ಯಶಸ್ಸು ಕಂಡಿದ್ದಿಲ್ಲ. ಅಂಬರೀಶ್, ಜಗ್ಗೇಶ್, ಉಮಾಶ್ರೀ ಅಂಥಹಾ ಕೆಲವರು ಸಚಿವರಾಗಿದ್ದಾರೆ ಬಿಟ್ಟರೆ ದೊಡ್ಡ ಮಟ್ಟದಲ್ಲಿ ಪ್ರಭಾವಿ ರಾಜಕಾರಣಿಗಳಾಗಿದ್ದು ಯಾರೂ ಇಲ್ಲ. ಯಶ್ ಅವರು ರಾಜಕೀಯಕ್ಕೆ ಬರುವ ಕಾಲಕ್ಕೆ ಪರಿಸ್ಥಿತಿ ಹೇಗಿರಲಿದೆ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ