‘ಯಾರಲ್ಲಿ ಸೌಂಡು ಮಾಡೋದು’ ಹಾಡನ್ನು ಭಟ್ಟರು ಬರೆದಿದ್ದು ಯಶ್​ಗಾಗಿ ಅಲ್ಲ ಅಪ್ಪುಗಾಗಿ

Puneeth Rajkumar: 'ರಾಮಚಾರಿ' ಸಿನಿಮಾದ 'ಯಾರಲ್ಲಿ ಸೌಂಡು ಮಾಡೋದು' ಹಾಡು ಬರೆದಿದ್ದು ಪುನೀತ್ ರಾಜ್ ಕುಮಾರ್ ಅವರ ಸಿನಿಮಾಕ್ಕಾಗಿ. ಯಾವುದು ಆ ಸಿನಿಮಾ?

‘ಯಾರಲ್ಲಿ ಸೌಂಡು ಮಾಡೋದು’ ಹಾಡನ್ನು ಭಟ್ಟರು ಬರೆದಿದ್ದು ಯಶ್​ಗಾಗಿ ಅಲ್ಲ ಅಪ್ಪುಗಾಗಿ

Updated on: Mar 14, 2024 | 11:41 AM

ಕೆಜಿಎಫ್‘ (KGF) ಸಿನಿಮಾಕ್ಕೆ ಮುಂಚೆ ಯಶ್ (Yash) ವೃತ್ತಿ ಬದುಕಿನ ಬ್ಲಾಕ್ ಬಸ್ಟರ್ ಸಿನಿಮಾ‌ ಎಂದರೆ ಅದು ‘ರಾಮಾಚಾರಿ’. ಆ ಸಿನಿಮಾದ ಆಕ್ಷನ್, ಲವ್ ಸ್ಟೋರಿ, ಅಪ್ಪ-ಮಗನ ಸೆಂಟಿಮೆಂಟ್ ಎಲ್ಲವೂ ಜನಮನ ಗೆದ್ದಿತ್ತು. ಅದರಲ್ಲೂ ಆ ಸಿನಿಮಾದ ಹಾಡುಗಳು ಬ್ಲಾಕ್ ಬಸ್ಟರ್ ಆಗಿದ್ದವು. ಸಿನಿಮಾದ ಹೀರೋ ಎಂಟ್ರಿ ಹಾಡು, ‘ಯಾರಲ್ಲಿ ಸೌಂಡು ಮಾಡೋದು, ಸುಮ್ನಿರ್ರಿ ಚಾರಿ ಬೈಬೋದು’ ಹಾಡಂತೂ ಯಶ್ ಪಾತ್ರಕ್ಕೆ ಒಳ್ಳೆಯ ಬಿಲ್ಡಪ್ ಕೊಟ್ಟಿತ್ತು. ಆದರೆ ಈ ಹಾಡನ್ನು ಭಟ್ಟರು ಬರೆದಿದ್ದಿದ್ದು ಯಶ್​ರ ‘ರಾಮಾಚಾರಿ’ ಸಿನಿಮಾಕ್ಕಾಗಿ ಅಲ್ಲ ಬದಲಿಗೆ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಸಿನಿಮಾಕ್ಕಾಗಿ.

ಈ ವಿಷಯವನ್ನು ಇತ್ತೀಚೆಗಿನ ಸಂದರ್ಶನದಲ್ಲಿ ಯೋಗರಾಜ್ ಭಟ್ಟರು ಹೇಳಿದ್ದಾರೆ. ಅಸಲಿಗೆ ‘ಯಾರಲ್ಲಿ ಸೌಂಡು ಮಾಡೋದು ಹಾಡನ್ನು ಪುನೀತ್ ಗಾಗಿ ಬರೆದಿದ್ದೆ. ಆದರೆ ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಹಾಡನ್ನು ಪಡೆದುಕೊಂಡು, ಸಾಹಿತ್ಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಸಿ ‘ರಾಮಚಾರಿ’ ಸಿನಿಮಾಕ್ಕೆ ಬಳಸಿಕೊಂಡರು’ ಎಂದಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ‘ಅಣ್ಣಾಬಾಂಡ್’ ಸಿನಿಮಾಕ್ಕಾಗಿ ಆ ಹಾಡು ಬರೆದಿದ್ದಂತೆ ಯೋಗರಾಜ್ ಭಟ್. ಮೊದಲು ಹಾಡು ಬರೆದಾಗ, ‘ಯಾರಲ್ಲಿ ಸೌಂಡು ಮಾಡೋದು ಸುಮ್ನಿರ್ರಿ ಅಣ್ಣಾ ಬೈಬೋದು, ಅಣ್ಣಾ..ಬಾಂಡ್’ ಎಂದಿತ್ತಂತೆ ಸಾಹಿತ್ಯ. ಅಣ್ಣ ಎಂದಿದ್ದ ಕಡೆ ‘ಚಾರಿ’ ಎಂದು ಬದಲಾಯಿಸಿ, ‘ಅಣ್ಣಾ ಬಾಂಡ್’ ಎಂದಿದ್ದಕಡೆಗೆಲ್ಲ ‘ರಾಮಾಚಾರಿ’ ಎಂದು ಬದಲಾಯಿಸಿ ‘ರಾಮಾಚಾರಿ’ ಸಿನಿಮಾನಲ್ಲಿ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ:ಯೋಗರಾಜ್ ಭಟ್ ನಿರ್ಮಾಣದ ಮುಂದಿನ ಚಿತ್ರಕ್ಕೆ ‘ಉಡಾಳ’ ಶೀರ್ಷಿಕೆ; ಇದು ಪಕ್ಕಾ ಜವಾರಿ ಕಥೆ

ಅಂದಹಾಗೆ ‘ಅಣ್ಣಬಾಂಡ್’ ಸಿನಿಮಾಕ್ಕೂ ಯೋಗರಾಜ್ ಭಟ್ಟರು ಬಹಳ ಒಳ್ಳೆಯ ಹಾಡುಗಳನ್ನು ಬರೆದುಕೊಟ್ಟಿದ್ದಾರೆ. ಪುನೀತ್ ಅವರ ಸಿನಿಮಾಗಳಿಗೆ ಯೋಗರಾಜ್ ಭಟ್ಟರು ಬರೆಸಿರುವ ಹಾಡುಗಳೆಲ್ಲ ಬಹುತೇಕ ಸೂಪರ್-ಡೂಪರ್ ಹಿಟ್. ‘ಜಾಕಿ’, ‘ಪರಮಾತ್ಮ’, ‘ಅಣ್ಣಾಬಾಂಡ್’ ಸಿನಿಮಾದ ಹಾಡುಗಳೇ ಇದಕ್ಕೆ ಸಾಕ್ಷಿ. ಯೋಗರಾಜ್ ಭಟ್ಟರು, ಅಪ್ಪು ಜೊತೆ ಬಹು ಆತ್ಮೀಯ ಗೆಳೆತನ ಹೊಂದಿದ್ದರು. ‘ಮುಂಗಾರು ಮಳೆ’ ಸಿನಿಮಾ ಮುಗಿಯುತ್ತಲೇ ಅಪ್ಪು ಜೊತೆ ಸಿನಿಮಾ ಮಾಡಲು ಯತ್ನಿಸಿದ್ದರು. ‘ಗಾಳಿಪಟ’ ಸಿನಿಮಾದಲ್ಲಿನ ಗಣೇಶ್ ಪಾತ್ರವನ್ನು ಅಪ್ಪು ಮಾಡಬೇಕು ಎಂಬುದು ಭಟ್ಟರ ಬಯಕೆಯಾಗಿತ್ತು. ಆದರೆ ಅದು ಆಗಲಿಲ್ಲ.

ಅದಾದ ಬಳಿಕ ಇಬ್ಬರೂ ಸೇರಿ ‘ಪರಮಾತ್ಮ’ ಸಿನಿಮಾ ಮಾಡಿದರು. ‘ಪರಮಾತ್ಮ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲವಾದರೂ ಇಂದಿಗೂ ಹಲವಾರು ಮಂದಿಗೆ ‘ಪರಮಾತ್ಮ’ ಫೇವರೇಟ್ ಸಿನಿಮಾ. ಕನ್ನಡದ ಹಲವು ಕಲ್ಟ್ ಪ್ರೇಮಕಥೆಗಳಲ್ಲಿ ‘ಪರಮಾತ್ಮ’ ಸಿನಿಮಾ ಸಹ ಒಂದು. ಅಪ್ಪು ಅಗಲಿದಾಗ ಭಟ್ಟರು ಬರೆದಿದ್ದ ಹಾಡು, ಭಟ್ಟರು ಅಪ್ಪುವನ್ನು ಎಷ್ಟು ಹಚ್ಚಿಕೊಂಡಿದ್ದರು ಎಂಬುದಕ್ಕೆ ಸಾಕ್ಷಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us