‘ಯುದ್ಧಕಾಂಡ’ ಸಿನಿಮಾದಲ್ಲಿ ಪವರ್ಫುಲ್ ಸ್ಟೋರಿ; ಟೀಸರ್ ಹೇಗಿದೆ ನೋಡಿ..
ರಾಜ್ಯಾದ್ಯಂತ ಸೌಜನ್ಯ ಪ್ರಕರಣ ಸದ್ದು ಮಾಡಿದೆ. ಇದೇ ಸಮಯಕ್ಕೆ ಸರಿಯಾಗಿ ‘ಯುದ್ಧಕಾಂಡ’ ಸಿನಿಮಾದಲ್ಲಿ ಕೂಡ ಅಂಥದ್ದೇ ಕಥೆಯ ಎಳೆ ಇದೆ. ಈ ಚಿತ್ರವನ್ನು ಅಜಯ್ ರಾವ್ ಅವರು ನಿರ್ಮಾಣ ಮಾಡಿದ್ದು, ಪ್ರಮುಖ ಪಾತ್ರವನ್ನೂ ನಿಭಾಯಿಸಿದ್ದಾರೆ. ಪವನ್ ಭಟ್ ನಿರ್ದೇಶನ ಈ ಚಿತ್ರಕ್ಕಿದೆ. ಟೀಸರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

ನಟ ಅಜಯ್ ರಾವ್ (Ajay Rao) ಅವರು ‘ಯುದ್ಧಕಾಂಡ’ (Yuddhakaanda) ಸಿನಿಮಾದಲ್ಲಿ ನಟಿಸಿದ್ದು, ನಿರ್ಮಾಣ ಕೂಡ ಮಾಡಿದ್ದಾರೆ. ಲಾಯರ್ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಈ ಸಿನಿಮಾದ ಮೇಲೆ ಅವರ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಯಾಕೆಂದರೆ, ಚಿತ್ರದ ಸ್ಟೋರಿ ಲೈನ್ ಆ ರೀತಿ ಇದೆ. ಇತ್ತೀಚೆಗೆ ‘ಯುದ್ಧಕಾಂಡ’ ಸಿನಿಮಾದ ಟೀಸರ್ (Yuddhakaanda Teaser) ಬಿಡುಗಡೆ ಆಗಿದೆ. ಅಜಯ್ ರಾವ್, ಅರ್ಚನಾ ಜೋಯಿಸ್ ಮುಂತಾದವರು ಈ ಟೀಸರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ಫುಲ್ ಡೈಲಾಗ್ ಮೂಲಕ ಅಜಯ್ ರಾವ್ ಅವರು ಅಬ್ಬರಿಸಿದ್ದಾರೆ. ಸಿನಿಮಾದ ಕಥೆಯ ಬಗ್ಗೆ ಈ ಟೀಸರ್ ಮೂಲಕ ಚಿತ್ರತಂಡ ಸುಳಿವು ನೀಡಿದೆ.
‘ಶ್ರೀಕೃಷ್ಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಅಜಯ್ ರಾವ್ ಅವರು ‘ಯುದ್ಧಕಾಂಡ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಏಪ್ರಿಲ್ 18ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಪ್ರಕಾಶ್ ಬೆಳವಾಡಿ, ಟಿ.ಎಸ್. ನಾಗಾಭರಣ, ಬೇಬಿ ರಾದ್ನಾ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಪವನ್ ಭಟ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
‘7 ವರ್ಷದ ಪುಟ್ಟ ಮಗು ಅದು. ಅವಳಿಗೆ ಮಾಡಬಾರದನ್ನು ಮಾಡಿದೋನು ಆರಾಮಾಗಿ ಓಡಾಡಿಕೊಂಡು ಇದಾನೆ ಅಂದ್ರೆ ಕಣ್ಣಾರೆ ನೋಡಿಕೊಂಡಿದ್ದು ಯಾವ ತಾಯಿ ತಾನೇ ಸುಮ್ಮನೆ ಇರುತ್ತಾಳೆ. ನಾನಾಗಿದ್ದರೆ ಅವನನ್ನು ತುಂಡುತುಂಡಾಗಿ ಕತ್ತರಿಸುತ್ತಿದ್ದೆ. ಆದರೆ ಸಮಾಜದ ದೃಷ್ಟಿಯಲ್ಲಿ ಆ ಜಾಕಿನೂ ಕ್ರಿಮಿನಲ್, ಆ ನಿವೇದಿತಾನೂ ಕ್ರಿಮಿನಲ್. ಏನೂ ವ್ಯತ್ಯಾಸ ಇಲ್ಲ. ಆ ತಾಯಿ ಜೈಲಿಗೆ ಹೋಗಬಾರದು ಅಂತ ನಾನು ವಾದ ಮಾಡಬೇಕು ಅಂತ ಇದ್ದರೆ ಎಲ್ಲರೂ ಆ ಹೆಣ್ಣಿನ ವಿರುದ್ಧವಾಗಿಯೇ ನಿಂತಿದ್ದಾರೆ. ನೀನೇ ಹೇಳು, ನಾನು ಈ ಕೇಸ್ ತಗೋಬೇಕೋ ಅಥವಾ ಬೇಡವೋ’ ಎಂದು ಅಜಯ್ ರಾವ್ ಅವರು ‘ಯುದ್ಧಕಾಂಡ’ ಟೀಸರ್ನಲ್ಲಿ ಡೈಲಾಗ್ ಹೊಡೆದಿದ್ದಾರೆ.
ಸೌಜನ್ಯಾ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದೆ. ಈ ಸಮಯಕ್ಕೆ ಸರಿಯಾಗಿ ‘ಯುದ್ಧಕಾಂಡ’ ಚಿತ್ರದಲ್ಲಿ ಸಹ ಅದೇ ರೀತಿಯ ಕಥೆ ಇದೆ. ಹಾಗಾಗಿ ಈ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ‘ಇದು ಪ್ರತಿಯೊಬ್ಬ ಮಹಿಳೆಯೂ ನೋಡಬೇಕಾದ ಸಿನಿಮಾ. ಇಂಥ ಸಿನಿಮಾಗಳು ಹೆಚ್ಚಾಗಿ ಜನರನ್ನು ತಲುಪಬೇಕು’ ಎಂದು ನಟ, ನಿರ್ಮಾಪಕ ಅಜಯ್ ರಾವ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ತುಂಬ ಸಾಲ ಮಾಡಿದ್ದೇನೆ, ಎಲ್ಲವನ್ನೂ ಅಡ ಇಟ್ಟಿದ್ದೇನೆ: ಪರಿಸ್ಥಿತಿ ತಿಳಿಸಿದ ಅಜಯ್ ರಾವ್
ಲಾಯರ್ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ, ಜಡ್ಜ್ ಪಾತ್ರದಲ್ಲಿ ಟಿ.ಎಸ್. ನಾಗಾಭರಣ ಅಭಿನಯಿಸಿದ್ದಾರೆ. ಕಾರ್ತಿಕ್ ಶರ್ಮಾ ಅವರು ಛಾಯಾಗ್ರಹಣ ಮಾಡಿದ್ದರೆ. ಹೇಮಂತ್ ಜೋಯಿಸ್ ಮತ್ತು ಕೆ.ಬಿ. ಪ್ರವೀಣ್ ನಿರ್ದೇಶನ ನೀಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಅವರು ಸಂಕಲನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.