
‘ಯುವ’ ಮೂಲಕ ಎಂಟ್ರಿ ಕೊಟ್ಟ ಯುವರಾಜ್ ಕುಮಾರ್ ಮೊದಲ ಸಿನಿಮಾನಲ್ಲೇ ಯಶಸ್ಸು ಪಡೆದರು. ಬಳಿಕ ಬಿಡುಗಡೆ ಆದ ‘ಎಕ್ಕ’ ಸಿನಿಮಾ ಸಹ ಒಳ್ಳೆಯ ಯಶಸ್ಸು ಗಳಿಸಿತು. ಇದೀಗ ಯುವ ರಾಜ್ಕುಮಾರ್ ತಮ್ಮ ಮೂರನೇ ಸಿನಿಮಾಕ್ಕೆ ತಯಾರಾಗಿದ್ದಾರೆ. ಈ ಬಾರಿ ತುಸು ಭಿನ್ನ ಕತೆಯನ್ನು ಯುವ ರಾಜ್ಕುಮಾರ್ ಆಯ್ಕೆ ಮಾಡಿಕೊಂಡಿದ್ದಾರೆ. ಯುವ ರಾಜ್ಕುಮಾರ್ ಅವರ ಮೂರನೇ ಸಿನಿಮಾವನ್ನು ‘ಲ್ಯಾಂಡ್ ಲಾರ್ಡ್’ ಸಿನಿಮಾ ಮೂಲಕ ಹಿಟ್ ಕೊಟ್ಟಿರುವ ಜಡೇಶ್ ಹಂಪಿ ನಿರ್ದೇಶನ ಮಾಡಲಿದ್ದು, ಜಡೇಶ್ ಅವರು ತಮ್ಮ ಈ ಹಿಂದಿನ ಸಿನಿಮಾಕ್ಕಿಂತಲೂ ಭಿನ್ನವಾದ ಕತೆಯನ್ನು ಯುವ ರಾಜ್ಕುಮಾರ್ ಅವರಿಗಾಗಿ ರೆಡಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ಯುವ ರಾಜ್ಕುಮಾರ್ ಹಾಗೂ ಜಡೇಶ್ ಅವರ ಈ ಸಿನಿಮಾಕ್ಕೆ ತರುಣ್ ಅವರು ಬಂಡವಾಳ ಹೂಡಲಿದ್ದಾರೆ. ತರುಣ್ ಅವರ ಜೊತೆಗೆ ‘ಭೀಮ’ ಸಿನಿಮಾದ ನಿರ್ಮಾಪಕ ಜಗದೀಶ್ ಗೌಡ ಸಹ ಜೊತೆಗಿರಲಿದ್ದಾರೆ. ಸಿನಿಮಾದ ಅಧಿಕೃತ ಘೋಷಣೆ ಆಗಿದ್ದು, ಸಿನಿಮಾದ ಮುಹೂರ್ತ ನಾಳೆ (ಸೆಪ್ಟೆಂಬರ್ 14) ನಡೆಯಲಿದೆ. ಜಡೇಶ್ ಅವರು ಈ ಹಿಂದೆ ‘ಜಂಟಲ್ ಮ್ಯಾನ್’, ‘ಗುರು ಶಿಷ್ಯರು’ ಮತ್ತು ‘ಲ್ಯಾಂಡ್ ಲಾರ್ಡ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಸೂಪರ್ ಹಿಟ್ ‘ಕಾಟೇರ’ ಸಿನಿಮಾಕ್ಕೆ ಕತೆಯನ್ನು ಸಹ ಬರೆದಿದ್ದಾರೆ. ಈಗ ಅವರು ತಮ್ಮ ನಾಲ್ಕನೇ ಸಿನಿಮಾ ಅನ್ನು ಯುವ ರಾಜ್ಕುಮಾರ್ ಅವರೊಟ್ಟಿಗೆ ಮಾಡಲು ರೆಡಿಯಾಗಿದ್ದಾರೆ.
ಜಡೇಶ್ ಅವರ ಈ ಹಿಂದಿನ ‘ಗುರು ಶಿಷ್ಯರು’ ಸಿನಿಮಾದ ಛಾಯೆ ಈ ಹೊಸ ಸಿನಿಮಾನಲ್ಲಿ ಇರಲಿದೆಯಂತೆ. ಆದರೆ ಈ ಬಾರಿ ಎಚ್ಚು ಫ್ಯಾಮಿಲಿ ಓರಿಯೆಂಟೆಡ್ ಕತೆಯನ್ನು ರೆಡಿ ಮಾಡಿಕೊಂಡಿರುವುದಾಗಿ ಜಡೇಶ್ ಹೇಳಿದ್ದಾರೆ. ಮನರಂಜನೆ ಜೊತೆಗೆ ಕೌಟುಂಬಿಕ ಮೌಲ್ಯಗಳು ಹಾಗೂ ಕತೆಯಲ್ಲಿ ಮೋಟಿವೇಷನ್ ಸಹ ಇರಲಿದೆ ಎಂದು ಜಡೇಶ್ ಹೇಳಿದ್ದಾರೆ. ಸಿನಿಮಾದ ಕುರಿತು ಇನ್ನಷ್ಟು ಮಾಹಿತಿ ಮುಹೂರ್ತದಂದು ಬಹಿರಂಗವಾಗಲಿದೆ. ಸೆಪ್ಟೆಂಬರ್ 14 ರಂದು ಸಿನಿಮಾದ ಮುಹೂರ್ತ ನಡೆಯಲಿದೆ.
ಇದನ್ನೂ ಓದಿ:ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ಯುವ ರಾಜ್ಕುಮಾರ್ ಅವರು ದುನಿಯಾ ಸೂರಿ ನಿರ್ದೇಶನ ಮಾಡಲಿರುವ ‘ಕಾಗೆ ಬಂಗಾರ’ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ‘ಕಾಗೆ ಬಂಗಾರ’ ಸಿನಿಮಾದ ಬಗ್ಗೆ ಬೇರೆ ಸುದ್ದಿಗಳು ಹರಿದಾಡುತ್ತಿವೆ. ಅಷ್ಟರಲ್ಲೇ ಯುವ ಅವರು ಜಡೇಶ್ ಅವರ ಸಿನಿಮಾಕ್ಕೆ ಎಸ್ ಹೇಳಿದ್ದಾರೆ. ಸಿನಿಮಾದ ನಾಯಕಿ, ಸಂಗೀತ ನಿರ್ದೇಶಕ ಇನ್ನಿತರೆ ಮಾಹಿತಿಗಳು ಇನ್ನಷ್ಟೆ ಬಹಿರಂಗಗೊಳ್ಳಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ