
ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ನಡೆಯುವ ಟ್ರೋಲ್ ವಾರ್ ಹಾಗೂ ದ್ವೇಷಕೆ ಬ್ರೇಕ್ ಹಾಕಲು ನಟ ಅಲ್ಲು ಅರ್ಜುನ್ ಮುಂದಾಗಿದ್ದಾರೆ. ಹೈದರಾಬಾದ್ನಲ್ಲಿ ನಡೆದ ‘ಅಲ್ಲು ಅರ್ಜುನ್ (Allu Arjun)ಫ್ಯಾನ್ಸ್ ಅಸೋಸಿಯೇಷನ್’ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಅಭಿಮಾನಿಗಳಿಗೆ ಕಿವಿಮಾತೊಂದನ್ನು ನೀಡಿದ್ದಾರೆ. ಇಷ್ಟವಿಲ್ಲದವರನ್ನು ಟ್ರೋಲ್ ಮಾಡಿ ನಿಮ್ಮ ಅಮೂಲ್ಯವಾದ ಸಮಯ ಮತ್ತು ಶಕ್ತಿಯನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕರೆ ನೀಡಿದ್ದಾರೆ.
ವೇದಿಕೆ ಮೇಲೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅಲ್ಲು ಅರ್ಜುನ್, ‘ನಿಮಗೆ ಯಾರಾದರೂ ಇಷ್ಟವಾಗದಿದ್ದರೆ ಅವರನ್ನು ಅಲ್ಲೇ ಬಿಟ್ಟುಬಿಡಿ. ಅವರ ಬಗ್ಗೆ ತಲೆಕೆಡಿಸಿಕೊಂಡು ನಿಮ್ಮ ಸಮಯ, ಹಣ ಹಾಗೂ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಯಾರನ್ನೂ ದ್ವೇಷಿಸುವುದು ಅಥವಾ ಟೀಕಿಸುವುದು ಯಾರಿಗೂ ಒಳ್ಳೆಯದಲ್ಲ. ಬೇಕಿದ್ದರೆ ನಿಮಗೆ ಇಷ್ಟವಾದ ಹುಡುಗಿಯ ಮನೆ ಮುಂದೆ ಹೋಗಿ ಕಾಯಿರಿ, ಪರವಾಗಿಲ್ಲ. ಕನಿಷ್ಠ ಆ ಸಮಯದಲ್ಲಾದರೂ ನೀವು ಖುಷಿಯಾಗಿರುತ್ತೀರಿ. ಅದನ್ನು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಹರಡಬೇಡಿ’ ಎಂದು ತಮಾಷೆಯಾಗಿಯೇ ಜವಾಬ್ದಾರಿಯುತ ಸಂದೇಶ ರವಾನಿಸಿದರು.
ತಮ್ಮನ್ನು ದ್ವೇಷಿಸುವವರ ಬಗ್ಗೆಯೂ ಔದಾರ್ಯ ತೋರಿದ ಅಲ್ಲು ಅರ್ಜುನ್, ‘ನನ್ನ ಅಭಿಮಾನಿಗಳ ಜೊತೆಗೆ ಆ್ಯಂಟಿ-ಫ್ಯಾನ್ಸ್ ಹಾಗೂ ಹೇಟರ್ಸ್ ಎಲ್ಲರಿಗೂ ನಾನೊಂದು ಮಾತು ಹೇಳಲು ಬಯಸುತ್ತೇನೆ. ನಿಮ್ಮ ಲೈಫ್ ಒಂದು ಬ್ಯಾಟರಿ ಇದ್ದಂತೆ. ಪ್ರತಿದಿನ ಅದು 100ರಷ್ಟು ಚಾರ್ಜ್ ಆಗಿರಬೇಕು. ಆ ನೂರು ಪ್ರತಿಶತ ಎನರ್ಜಿಯನ್ನು ನಿಮ್ಮ ಸ್ವಂತ ಬೆಳವಣಿಗೆಗೆ ಬಳಸಬೇಕೇ ಹೊರತು, ಬೇರೆಯವರನ್ನು ಟ್ರೋಲ್ ಮಾಡಲು 1ರಷ್ಟು ಸಮಯವನ್ನೂ ವೇಸ್ಟ್ ಮಾಡಬಾರದು’ ಎಂದು ಬುದ್ಧಿವಾದ ಹೇಳಿದರು. ಇದೇ ವೇಳೆ ಗಂಟೆಗಟ್ಟಲೆ ನಿಂತು ಅಭಿಮಾನಿಗಳಿಗೆ ಫೋಟೋ ನೀಡಿದ ನಟ, ಸಂಘ ಸ್ಥಾಪಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: ಅಭಿಮಾನಿಗಳಿಗೆ ಆಪತ್ಬಾಂಧವನಾದ ಅಲ್ಲು ಅರ್ಜುನ್; 900 ಫ್ಯಾನ್ಸ್ಗೆ ಇನ್ಶೂರೆನ್ಸ್
ಕಾರ್ಯಕ್ರಮ ಮುಗಿದ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಲ್ಲು ಅರ್ಜುನ್, ‘ನನ್ನ ಮೇಲಿನ ಪ್ರೀತಿಯಿಂದ ದೇಶದ ವಿವಿಧ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳನ್ನು ನೋಡಿ ಮನಸ್ಸು ತುಂಬಿಬಂದಿದೆ. ನಿಮ್ಮ ಈ ಅಪಾರ ಪ್ರೀತಿಗೆ ನಾನು ಸದಾ ಋಣಿಯಾಗಿರುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ತಲೆ ಎತ್ತಿ ನಿಲ್ಲುವಂತಹ ಸಿನಿಮಾಗಳನ್ನು ಮಾಡಲು ಮತ್ತಷ್ಟು ಶ್ರಮಿಸುತ್ತೇನೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
My Dear Fansss… 🖤
Seeing all of you coming from different places for this event is really heart touching. Thank you for all the love. Humbled . Hope to make you all more mad proud. 🖤 pic.twitter.com/HV9mHSA9aW— Allu Arjun (@alluarjun) July 28, 2026
ಸದ್ಯ ಅಲ್ಲು ಅರ್ಜುನ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರಾಕಾ’ ಸಿನಿಮಾದ ಶೂಟಿಂಗ್ನಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಈ ಬಿಗ್ ಬಜೆಟ್ ಚಿತ್ರದ ಬೆನ್ನಲ್ಲೇ ಲೋಕೇಶ್ ಕನಗರಾಜ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಬನ್ನಿ ಅಬ್ಬರಿಸಲಿದ್ದಾರೆ.
ಪ್ರಶ್ನೆ: ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು?
ಉತ್ತರ: ರಾಕಾ
ಪ್ರಶ್ನೆ: ಅಲ್ಲು ಅರ್ಜುನ್ ಪತ್ನಿ ಹೆಸರೇನು?
ಉತ್ತರ: ಸ್ನೇಹಾ ರೆಡ್ಡಿ
ಪ್ರಶ್ನೆ: ಅಲ್ಲು ಅರ್ಜುನ್ ಮಕ್ಕಳ ಹೆಸರೇನು?
ಉತ್ತರ: ಅಲ್ಲು ಅಯಾನ್ ಹಾಗೂ ಅಲ್ಲ ಅರ್ಹಾ