ಬೆಂಗಳೂರು ಬಿಟ್ಟು ಈ ಊರಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಶಿವಣ್ಣ; ಮಾರ್ಚ್​​ನಿಂದ ಸಿನಿಮಾ ಕೆಲಸ  

ಶಿವರಾಜ್ ಕುಮಾರ್ ಅವರು ಅಮೆರಿಕದಿಂದ ಭಾರತಕ್ಕೆ ಮರಳಿದ್ದು, ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ. ಅವರು ಬೆಂಗಳೂರಿನಿಂದ ಹೊರಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಮತ್ತು ಮಾರ್ಚ್​ನಿಂದ ಚಲನಚಿತ್ರ ಕೆಲಸಗಳನ್ನು ಪ್ರಾರಂಭಿಸಲಿದ್ದಾರೆ. ಶಿವರಾಜ್​ ಕುಮಾರ್ ಅವರು '45' ಚಿತ್ರದ ಪ್ರಚಾರದಲ್ಲೂ ಭಾಗವಹಿಸಲಿದ್ದಾರೆ ಅನ್ನೋದು ವಿಶೇಷ.

ಬೆಂಗಳೂರು ಬಿಟ್ಟು ಈ ಊರಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಶಿವಣ್ಣ; ಮಾರ್ಚ್​​ನಿಂದ ಸಿನಿಮಾ ಕೆಲಸ  
ಶಿವರಾಜ್​​ಕುಮಾರ್

Updated on: Feb 04, 2025 | 8:20 AM

ನಟ ಶಿವರಾಜ್​ಕುಮಾರ್ ಅವರು ಜನವರಿ 26ಕ್ಕೆ ಅಮೆರಿಕದಿಂದ ಭಾರತಕ್ಕೆ ಮರಳಿದರು. ಅವರು ಬರುತ್ತಿದ್ದಂತೆ ಅನೇಕ ಸೆಲೆಬ್ರಿಟಿಗಳು ತೆರಳಿ ಶಿವಣ್ಣನ ಆರೋಗ್ಯ ವಿಚಾರಿಸಿದರು. ಈಗ ಅವರು ಸಂಪೂರ್ಣ ಕ್ಯಾನ್ಸರ್ ಮುಕ್ತ ಆಗಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈಗ ಶಿವರಾಜ್​ಕುಮಾರ್ ಅವರು ಬೆಂಗಳೂರಿನಲ್ಲಿ ಇಲ್ಲ! ಹೌದು, ಅವರು ಶಿರಸಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಾರ್ಚ್​​ನಿಂದ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಇತ್ತೀಚೆಗೆ ಶಿವರಾಜ್​ಕುಮಾರ್ ಅವರು ಯಾಣಕ್ಕೆ ತೆರಳಿದ್ದರು. ‘ನಮ್ಮೂರ ಮಂದಾರ ಹೂವೆ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಶಿವಣ್ಣ ಅಲ್ಲಿಗೆ ತೆರಳಿದ್ದರು. ಇದಾದ 29 ವರ್ಷಗಳ ಬಳಿಕ ಅವರು ಮತ್ತೆ ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಈಗ ಶಿವರಾಜ್​ಕುಮಾರ್ ತಮ್ಮ ಸಂಬಂಧಿ, ಶಾಸಕ ಭೀಮಣ್ಣ ಒಡೆತನದಲ್ಲಿ ಇರುವ ಶಿರಸಿಯ ಹೋಟೆಲ್​ನಲ್ಲಿ ಉಳಿದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇದ್ದರೆ ಒಬ್ಬರಾದ ಬಳಿಕ ಒಬ್ಬರು ಅವರ ಮನೆಗೆ ಭೇಟಿ ನೀಡುತ್ತಾ ಇರುತ್ತಾರೆ. ಹೀಗಾಗಿ, ವಿಶ್ರಾಂತಿ ಪಡೆಯಲು ಆಗೋದಿಲ್ಲ. ಈ ಕಾರಣಕ್ಕೆ ಅವರು ಶಿರಸಿಗೆ ಶಿಫ್ಟ್ ಆಗಿದ್ದಾರೆ. ಇಲ್ಲಿ ಅವರು ಗೀತಾ ಜೊತೆ ಉಳಿದುಕೊಂಡಿದ್ದಾರೆ. ಅವರು ಭೇಟಿ ಮಾಡಲು ಯಾರಿಗೂ ಅವಕಾಶ ಇಲ್ಲ.

ಸಿನಿಮಾ ಕೆಲಸ

ಶಿವರಾಜ್​ಕುಮಾರ್ ಅವರು ಸಿನಿಮಾ ಕೆಲಸ ಆರಂಭಿಸೋದು ಯಾವಾಗ ಎಂಬುದನ್ನು ‘ಬಿ. ಗಣಪತಿ’ ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ‘ಮಾರ್ಚ್ ತಿಂಗಳಿಂದ ಸಿನಿಮಾ ಕೆಲಸ ಆರಂಭಿಸುತ್ತೇನೆ. ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದೇನೆ. ತಮಿಳಿನ ನಿರ್ದೇಶಕನೋರ್ವ ಚಿತ್ರ ಮಾಡುತ್ತಿದ್ದು ಅವರ ಜೊತೆ ಮಾಡುತ್ತಿದ್ದೇನೆ. ಸದ್ಯ ಇದೆರಡು ಸಿನಿಮಾಗಳು ಇವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 29 ವರ್ಷಗಳ ಬಳಿಕ ಯಾಣಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಇಲ್ಲಿವೆ ಫೋಟೋಸ್

‘45’ ಸಿನಿಮಾ

ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್​ ಬಿ. ಶೆಟ್ಟಿ ನಟಿಸಿದ್ದಾರೆ. ಈ ಚಿತ್ರವ ಈ ವರ್ಷವೇ ತೆರೆಗೆ ಬರಲಿದೆ. ಇದರ ಪ್ರಚಾರದಲ್ಲಿ ಶಿವಣ್ಣ ಭಾಗಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:27 am, Tue, 4 February 25

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us