
ಬಿಗ್ಬಾಸ್ ರಿಯಾಲಿಟಿ ಶೋ (Bigg Boss) ಭಾರತದಲ್ಲಿ ದೊಡ್ಡ ಯಶಸ್ಸು ಗಳಿಸಿದ ಬೆನ್ನಲ್ಲೆ ಅದನ್ನೇ ಹೋಲುವ ಹಲವು ರಿಯಾಲಿಟಿ ಶೋಗಳು ಭಾರತದ ಟಿವಿ ಮತ್ತು ಒಟಿಟಿ ಸ್ಪೇಸ್ನಲ್ಲಿ ಬಹಳ ಹೆಚ್ಚಾಗಿವೆ. ಅವುಗಳಲ್ಲಿ ತುಸು ಜನಪ್ರಿಯತೆ ಪಡೆದಿರುವುದು ‘ಲಾಕಪ್’ ಶೋ. ಈ ರಿಯಾಲಿಟಿ ಶೋ ಸಹ ಬಹುತೇಕ ಬಿಗ್ಬಾಸ್ ಅನ್ನೇ ಹೋಲುತ್ತದೆಯಾದರೂ ಕೆಲವು ಭಿನ್ನತೆಗಳು ಇದೆ. ಇದೀಗ ಈ ರಿಯಾಲಿಟಿ ಶೋನ ಎರಡನೇ ಸೀಸನ್ ಫಿನಾಲೆ ನಿನ್ನೆಯಷ್ಟೆ ಮುಗಿದಿದ್ದು, ಶ್ರೆಯಾ ಕಾಲ್ರಾ ವಿಜೇತರಾಗಿದ್ದಾರೆ.
ಶ್ರೆಯಾ ಕಾಲ್ರಾ ವಿಜೇತರಾದರೆ, ನಟಿ ಶಿವಂಗಿ ಜೋಶಿ ಪ್ರಥಮ ರನ್ನರ್-ಅಪ್ ಆದರು, ಹಾಗೆಯೇ ರಿಯಾಲಿಟಿ ಶೋ ಸ್ಟಾರ್ ಯೋಗೇಶ್ ರಾವತ್ ಎರಡನೇ ರನ್ನರ್-ಅಪ್ ಆಗಿ ಹೊರಹೊಮ್ಮಿದರು. ಈ ಫಿನಾಲೆಯಲ್ಲಿ ಮಾಜಿ ಸ್ಪರ್ಧೆಗಳು ಮಾತ್ರವಲ್ಲದೆ, ಮಾಧ್ಯಮ ವೃತ್ತಿಪರರು ಮತ್ತು ನಟರನ್ನೊಳಗೊಂಡ ತೀರ್ಪುಗಾರರ ಮಂಡಳಿಯೂ ಇತ್ತು. ಅವರು ಸ್ಪರ್ಧಿಗಳನ್ನು ಪ್ರಶ್ನಿಸಿ, ವಿಜೇತರನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದುರದೃಷ್ಟವಶಾತ್, ರಾಮ್ ಕಪೂರ್ ಮತ್ತು ಶಿಲ್ಪಾ ಶಿಂಧೆ ಟಾಪ್ ಮೂರಕ್ಕೆ ಬರಲು ಸಾಧ್ಯವಾಗಲಿಲ್ಲ.
ವಿನ್ನರ್ ಆದ ಶ್ರೇಯಾ ಕಾಲ್ರಾ ಅವರಿಗೆ ಬಹುಮಾನದ ಟ್ರೋಫಿಯೊಂದಿಗೆ 1 ಕೋಟಿ ರೂ. ನಗದು ಬಹುಮಾನ ಸಹ ಪಡೆದುಕೊಂಡರು. ಇತರರಿಗೆ ಯಾವುದೇ ಬಹುಮಾನ ದೊರೆತ ಬಗ್ಗೆ ವರದಿಯಾಗಿಲ್ಲ. ರಾಮ್ ಕಪೂರ್ ಮತ್ತು ಶಿಲ್ಪಾ ಶಿಂಧೆ ಬಹಳ ಪ್ರಬಲ ಸ್ಪರ್ಧಿಗಳಾಗಿದ್ದರು, ಆದರೆ ಅವರು ಗೆಲುವಿನ ಸಮೀಪದಲ್ಲಿದ್ದಾಗ ಎಲಿಮಿನೇಟ್ ಆದರು. ಫಿನಾಲೆ ದಿನದ ಟಾಸ್ಕ್ನಲ್ಲಿ ಸೋತ ನಂತರ ರಾಮ್ ಮತ್ತು ಶಿಲ್ಪಾ ಅವರ ಪ್ರಯಾಣ ಅಂತ್ಯವಾಯಿತು. ಟಾಪ್ 5 ಸ್ಪರ್ಧಿಗಳಾದ ರಾಮ್, ಶಿಲ್ಪಾ, ಶ್ರೇಯಾ, ಶಿವಂಗಿ ಮತ್ತು ಯೋಗೇಶ್ ಅವರು ಒಂದು ಪಜಲ್ ಅನ್ನು ಜೋಡಿಸುವ ಟಾಸ್ಕ್ ಮಾಡಬೇಕಿತ್ತು; ಯಾರಲ್ಲಿ ಹೆಚ್ಚು ತಪ್ಪು ತುಣುಕುಗಳಿರುತ್ತವೆಯೋ ಅವರನ್ನು ಹೊರಹಾಕಲಾಗುತ್ತಿತ್ತು. ರಾಮ್ ಕಪೂರ್ ಈ ಟಾಸ್ಕ್ನಲ್ಲಿ ಸೋತು ಐದನೇ ಸ್ಥಾನದಲ್ಲಿ ಹೊರನಡೆದರು.
ಇದನ್ನೂ ಓದಿ:‘ಮತ್ತೆ ಶುರು ಮಾಡೋಣ್ವ’ ಬಿಗ್ಬಾಸ್ ಬಾಗಿಲು ತೆರೆದ ಸುದೀಪ್
ಇದರ ನಂತರ, ಶಿಲ್ಪಾ, ಶ್ರೇಯಾ, ಶಿವಂಗಿ ಮತ್ತು ಯೋಗೇಶ್ ಟಾಪ್ ಮೂರರಲ್ಲಿ ತಮ್ಮ ಸ್ಥಾನಕ್ಕಾಗಿ ಸ್ಪರ್ಧಿಸಬೇಕಾಯಿತು. ಯೋಗೇಶ್ ಅವರನ್ನು ಒಂದುಪೆಟ್ಟಿಗೆಯ ಮುಂದೆ ನಿಲ್ಲಿಸಲಾಯಿತು ಮತ್ತು ‘ಟರ್ಮಿನೇಟೆಡ್’ ಎಂದು ಬರೆದಿರುವ ಪೆಟ್ಟಿಗೆಯನ್ನು ಆಯ್ಕೆ ಮಾಡಲು ಅವರು ಇತರರನ್ನು ಮನವೊಲಿಸಬೇಕಿತ್ತು. ಚುರುಕಾಗಿ ಆಡಿ, ‘ಟರ್ಮಿನೇಟೆಡ್’ ಎಂದಿರುವ ಪೆಟ್ಟಿಗೆಯನ್ನು ಆಯ್ಕೆ ಮಾಡುವಂತೆ ಅವರು ಶಿಲ್ಪಾ ಅವರನ್ನು ಪ್ರಭಾವಿಸುವಲ್ಲಿ ಯಶಸ್ವಿಯಾದರು, ಇದು ನಾಲ್ಕನೇ ಸ್ಥಾನದಲ್ಲಿ ಅವರು ಹೊರಹೋಗಲು ಕಾರಣವಾಯಿತು.
ಇದರ ತಕ್ಷಣವೇ, ಟಾಪ್ 3 ಫೈನಲಿಸ್ಟ್ಗಳು ಮಾಧ್ಯಮಗಳು ಮತ್ತು ತೀರ್ಪುಗಾರರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಯೋಗೇಶ್ ರಾವತ್ ಅವರ ಅಹಂಕಾರ ಮತ್ತು ವರ್ತನೆಗಾಗಿ ತರಾಟೆಗೆ ತೆಗೆದುಕೊಳ್ಳಲ್ಪಟ್ಟರೆ, ಹರ್ಷದ್ ಚೋಪ್ರಾ ಅವರನ್ನು ದಾರಿ ತಪ್ಪಿಸಿ ಅವರ ಫೈನಲಿಸ್ಟ್ ಸ್ಥಾನವನ್ನು ಕಸಿದುಕೊಂಡಿದ್ದಕ್ಕಾಗಿ ಶಿವಾಂಗಿಯನ್ನು ಪ್ರಶ್ನಿಸಲಾಯಿತು. ಶ್ರೇಯಾ ಅವರ ಅದ್ಭುತ ಆಟದ ಶೈಲಿಯನ್ನು ಶ್ಲಾಘಿಸಲಾಯಿತಾದರೂ, ರಾಮ್ ಕಪೂರ್ ಅವರು ತಮಗೆ ಅನಾನುಕೂಲತೆಂಟು ಮಾಡಿದರು ಎಂದು ಆರೋಪಿಸಿದ್ದಕ್ಕಾಗಿ ಅವರನ್ನು ಪ್ರಶ್ನಿಸಲಾಯಿತು. ಜೊತೆಗೆ ಶೋನಲ್ಲಿ ಅವರ ಭಾಷೆ ಮತ್ತು ಅನುಚಿತ ಕಾಮೆಂಟ್ಗಳಿಗಾಗಿಯೂ ಟೀಕೆಗೆ ಗುರಿಯಾದರು.
ಇದರ ನಂತರ, ತೀರ್ಪುಗಾರರ ಮತಗಳ ಆಧಾರದ ಮೇಲೆ ಯೋಗೇಶ್ ರಾವತ್ ಹೊರಹಾಕಲ್ಪಟ್ಟರು. ಶ್ರೇಯಾ ಮತ್ತು ಶಿವಂಗಿ ನಡುವಿನ ವಿಜೇತರನ್ನು ಮಾಜಿ ಸ್ಪರ್ಧಿಗಳು, ತೀರ್ಪುಗಾರರು ಮತ್ತು ಜೈಲರ್ಸ್ಗಳ ಮತಗಳ ಆಧಾರದ ಮೇಲೆ ನಿರ್ಧರಿಸಲಾಯಿತು. ಗರಿಷ್ಠ ಸಂಖ್ಯೆಯ ಮತಗಳನ್ನು ಗಳಿಸಿದ ನಂತರ, ಏಕ್ತಾ ಕಪೂರ್ ಅವರು ಶ್ರೇಯಾ ಕಾಲ್ರಾ ಅವರನ್ನು ವಿಜೇತರೆಂದು ಘೋಷಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:20 am, Thu, 6 August 26