ವಯನಾಡ್​ ದುರಂತ: ಸೂರ್ಯ ಫ್ಯಾಮಿಲಿ 50 ಲಕ್ಷ ರೂ. ದೇಣಿಗೆ; ಬೇರೆ ಕಲಾವಿದರು ನೀಡಿದ್ದೆಷ್ಟು?

ಕೇರಳದ ವಯನಾಡಿನಲ್ಲಿ ಭೂಕುಸಿತಕ್ಕೆ ಸಿಲುಕಿದ ಸಂತ್ರಸ್ತರಿಗೆ ಅನೇಕ ಸೆಲೆಬ್ರಿಟಿಗಳು ನೆರವಾಗಿದ್ದಾರೆ. ಸೂರ್ಯ, ಜ್ಯೋತಿಕಾ, ಕಾರ್ತಿ, ಮಮ್ಮುಟಿ, ವಿಕ್ರಮ್​, ಫಹಾದ್​ ಫಾಸಿಲ್​, ದುಲ್ಖರ್​ ಸಲ್ಮಾನ್​, ರಶ್ಮಿಕಾ ಮಂದಣ್ಣ ಮುಂತಾದವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಲಕ್ಷಾಂತರ ರೂಪಾಯಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಯಾರು, ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ವಿವರ ಇಲ್ಲಿದೆ..

ವಯನಾಡ್​ ದುರಂತ: ಸೂರ್ಯ ಫ್ಯಾಮಿಲಿ 50 ಲಕ್ಷ ರೂ. ದೇಣಿಗೆ; ಬೇರೆ ಕಲಾವಿದರು ನೀಡಿದ್ದೆಷ್ಟು?
ವಯನಾಡ್​ ದುರಂತಕ್ಕೆ ಮಿಡಿದ ಸೆಲೆಬ್ರಿಟಿಗಳು

Updated on: Aug 01, 2024 | 10:24 PM

ವಯನಾಡ್​ ದುರಂತಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ 270ಕ್ಕೂ ಅಧಿಕ ಜನರು ಸಾವಿಗೆ ಈಡಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಕ್ಷಣಾ ಕಾರ್ಯ ನಡೆಯುತ್ತಿದ್ದು, ಈ ದುರಂತಕ್ಕೆ ಸೆಲೆಬ್ರಿಟಿಗಳು ಕೂಡ ಮರುಗಿದ್ದಾರೆ. ಕೇರಳ, ತಮಿಳುನಾಡು ಮುಂತಾದ ರಾಜ್ಯಗಳ ಸೆಲೆಬ್ರಿಟಿಗಳು ಲಕ್ಷಾಂತರ ರೂಪಾಯಿ ದೇಣಿಗೆ ನೀಡುವ ಮೂಲಕ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ ಅವರ ಕುಟುಂಬದವರು ವಯನಾಡು ಭೂಕುಸಿತದ ಸಂತ್ರಸ್ತರಿಗೆ ನೆರವಾಗಲಿ ಎಂದು 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಸೂರ್ಯ ಅವರ ಪತ್ನಿ ಜ್ಯೋತಿಕಾ, ಸಹೋದರ ಕಾರ್ತಿ ಅವರು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡಿದ್ದಕ್ಕಾಗಿ ಸೂರ್ಯ, ಜ್ಯೋತಿಕಾ, ಕಾರ್ತಿ ಅವರಿಗೆ ಜನರು ಭೇಷ್​ ಎಂದಿದ್ದಾರೆ. ಸಿಎಂ ಪರಿಹಾರ ನಿಧಿಗೆ ಸೂರ್ಯ ಫ್ಯಾಮಿಲಿಯವರು ಈ ಹಣವನ್ನು ನೀಡಿದ್ದಾರೆ.

ಮಲಯಾಳಂ ಚಿತ್ರರಂಗದ ಹಿರಿಯ ನಟ ಮಮ್ಮುಟ್ಟಿ ಅವರು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ನೀಡಿದ್ದಾರೆ. ಮಮ್ಮುಟ್ಟಿ ಪುತ್ರ ದುಲ್ಕರ್​ ಸಲ್ಮಾನ್​ ಅವರು 15 ಲಕ್ಷ ರೂಪಾಯಿ ನೀಡಿದ್ದಾರೆ. ಮಮ್ಮುಟ್ಟಿ ಅವರ ಚಾರಿಟೆಬಲ್​ ಟ್ರಸ್ಟ್​ನಿಂದಲೂ ಪರಿಹಾರ ಕಾರ್ಯ ಕೈಕೊಳ್ಳಲಾಗಿದೆ. ಅಗತ್ಯ ಇರುವವರ ಸಹಾಯಕ್ಕೆ ಟ್ರಸ್ಟ್​ ಧಾವಿಸಿದೆ. ಆಹಾರ, ಔಷದಿ, ಬಟ್ಟೆ ಮುಂತಾದ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ನೀಡಲಾಗುತ್ತಿದೆ.

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರು ವಯನಾಡು ಭೂಕುಸಿತದ ಸಂತ್ರಸ್ತಿಗೆ ನೆರವಾಗುವ ಉದ್ದೇಶದಿಂದ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಪುಣ್ಯದ ಕಾರ್ಯ ಮಾಡಿದ್ದಾರೆ. ಅಲ್ಲದೇ, ಕಾಲಿವುಡ್​ನ ಸ್ಟಾರ್​ ನಟ ವಿಕ್ರಮ್​ ಅವರು 20 ಲಕ್ಷ ರೂಪಾಯಿ ನೀಡಿದ್ದಾರೆ. ಸೆಲೆಬ್ರಿಟಿಗಳ ಈ ಕಾರ್ಯದಿಂದಾಗಿ ಸಾಕಷ್ಟು ಸಹಾಯ ಆಗುತ್ತಿದೆ. ಇನ್ನೂ ಅನೇಕ ನಟ-ನಟಿಯರು ಸಹಾಯ ಹಸ್ತ ಚಾಚುತ್ತಿದ್ದಾರೆ.

ಇದನ್ನೂ ಓದಿ: ಕೇರಳ ಭೂಕುಸಿತ; ದುರಂತದಿಂದ ಪಾರಾಗಿದ್ದ ಚಾಮರಾಜನಗರದ 6 ಮಂದಿ ಸ್ವಗ್ರಾಮಗಳಿಗೆ ವಾಪಾಸ್​

ಮಾಲಿವುಡ್​ನ ಫಹಾದ್ ಫಾಸಿಲ್​ ಹಾಗೂ ಅವರ ಪತ್ನಿ ನಜ್ರಿಯಾ ನಜಿಮ್​ ಅವರು 25 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಸಾವಿರಾರು ಜನರನ್ನು ರಕ್ಷಿಸಲಾಗಿದೆ. ಕೇಂದ್ರ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಯನಾಡಿಗೆ ಆಗಮಿಸಿದ್ದಾರೆ. ಅನೇಕರು ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us