ರಾಜಮೌಳಿ ಸಿನಿಮಾ ಮಾಡಲ್ಲ ಎಂದು ಹೊರನಡೆದಿದ್ದ ಈ ಸ್ಟಾರ್ ನಟ

SS Rajamouli: ರಾಜಮೌಳಿ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೆ ಸಾಕೆಂದು ಕಾದಿರುವ ಸ್ಟಾರ್ ನಟ-ನಟಿಯರ ದಂಡೇ ಇದೆ. ಆದರೆ ಇಲ್ಲೊಬ್ಬ ಸ್ಟಾರ್ ನಟ ರಾಜಮೌಳಿ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ರಿಜೆಕ್ಟ್ ಮಾಡಿದ್ದರಂತೆ.

ರಾಜಮೌಳಿ ಸಿನಿಮಾ ಮಾಡಲ್ಲ ಎಂದು ಹೊರನಡೆದಿದ್ದ ಈ ಸ್ಟಾರ್ ನಟ
ಎಸ್​ಎಸ್ ರಾಜಮೌಳಿ

Updated on: Aug 02, 2024 | 3:19 PM

ರಾಜಮೌಳಿ ಸಿನಿಮಾದಲ್ಲಿ ನಟಿಸಲು ಯಾವ ನಟನಿಗೆ ತಾನೇ ಆಸೆ ಇರುವುದಿಲ್ಲ. ದೊಡ್ಡ-ದೊಡ್ಡ ಸ್ಟಾರ್ ನಟರೇ ರಾಜಮೌಳಿ ಸಿನಿಮಾದಲ್ಲಿ ನಟಿಸಲು ತುದಿ ಗಾಲಲ್ಲಿ ನಿಂತಿದ್ದಾರೆ. ಸಂಭಾವನೆ ಪಡೆಯದೆಯೂ ನಟಿಸಲು ಸಿದ್ಧರಿದ್ದಾರೆ ಎಷ್ಟೋ ಮಂದಿ ನಟ-ನಟಿಯರು. ರಾಜಮೌಳಿ ಸಿನಿಮಾದಲ್ಲಿ ನಟಿಸಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬ ಆಸೆ ಎಲ್ಲರಿಗೂ ಆದರೆ ಒಬ್ಬ ನಟ, ರಾಜಮೌಳಿ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೂ ಬೇಡ ಎಂದು ಹೇಳಿದ್ದರಂತೆ. ಅವರೇ ತಮಿಳು ನಟ ಸೂರ್ಯ.

‘ಬಾಹುಬಲಿ’ ಸಿನಿಮಾ ಬಿಡುಗಡೆ ಆಗುವ ಮುನ್ನ ಸೂರ್ಯ ನಟನೆಯ ‘ಅಂಜಾನ್’ ಸಿನಿಮಾ ತೆಲುಗಿನಲ್ಲಿ
‘ಸಿಖಂಧರ್’ ಹೆಸರಿನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗುವ ಮುನ್ನ ಹೈದರಾಬಾದ್​ನಲ್ಲಿ ನಡೆದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ರಾಜಮೌಳಿಯನ್ನು ಅತಿಥಿಯನ್ನಾಗಿ ಕರೆಯಲಾಗಿದ್ದು, ವೇದಿಕೆ ಮೇಲೆ ಮಾತನಾಡಿದ್ದ ನಟ ಸೂರ್ಯ, ‘ಎಲ್ಲರೂ ಜೀವನದಲ್ಲಿ ತಪ್ಪು ಮಾಡುತ್ತಾರೆ, ನಾನೂ ಸಹ ಒಂದು ತಪ್ಪು ಮಾಡಿದ್ದೇನೆ. ನಾನು ರಾಜಮೌಳಿ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ತಪ್ಪಿಸಿಕೊಂಡಿದ್ದೇನೆ’ ಎಂದಿದ್ದರು.

ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾ ಪ್ರಾರಂಭ ಮಾಡುವ ಮುನ್ನ ಅದೇ ಸಿನಿಮಾದ ಪಾತ್ರವೊಂದಕ್ಕೆ ಸೂರ್ಯ ಅವರನ್ನು ರಾಜಮೌಳಿ ಕೇಳಿದ್ದರಂತೆ. ಆದರೆ ಪಾತ್ರದ ಔಟ್​ಲೈನ್ ಕೇಳಿದ ಬಳಿಕ ಇಷ್ಟವಾಗದ ಕಾರಣ ಸೂರ್ಯ ಅದನ್ನು ರಿಜೆಕ್ಟ್ ಮಾಡಿದ್ದರಂತೆ. ಕೆಲವು ಮೂಲಗಳ ಪ್ರಕಾರ, ಸೂರ್ಯ ಅವರನ್ನು ‘ಬಾಹುಬಲಿ’ ಸಿನಿಮಾದ ವಿಲನ್ ಬಲ್ಲಾಳದೇವನ ಪಾತ್ರಕ್ಕೆ ಕೇಳಲಾಗಿತ್ತು ಎನ್ನಲಾಗುತ್ತದೆ.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿಸೋಕೆ ರಾಜಮೌಳಿ ಒಪ್ಪಿಸಿದ್ದು ಹೇಗೆ? ನಿರ್ದೇಶಕ ಹೇಳಿದ್ದು ಇಷ್ಟು  

‘ಸಿಖಂಧರ್’ ಸಿನಿಮಾದ ಕಾರ್ಯಕ್ರಮದಲ್ಲಿಯೇ ಮಾತನಾಡಿದ್ದ ಸೂರ್ಯ, ‘ನಾನು ಈಗಾಗಲೇ ಒಂದು ಅವಕಾಶ ಕಳೆದುಕೊಂಡಿದ್ದೇನೆ. ಮತ್ತೊಂದು ಕಳೆದುಕೊಳ್ಳಲು ಇಷ್ಟವಿಲ್ಲ. ದಯವಿಟ್ಟು ನಿಮ್ಮ ಯಾವುದೇ ಸಿನಿಮಾದಲ್ಲಿಯೂ ಸಣ್ಣ ಪಾತ್ರವಾದರೂ ಸರಿ ನನ್ನನ್ನು ಕರೆಯಿರಿ. ಸುಮ್ಮನೆ ಹೀಗೆ ಬಂದು ಹಾಗೆ ಹೋಗುವ ಪಾತ್ರವಾದರೂ ಸರಿ’ ಎಂದಿದ್ದರು ಸೂರ್ಯ. ಅದೇ ಕಾರ್ಯಕ್ರಮದಲ್ಲಿದ್ದ ನಟಿ ಸಮಂತಾ ಸಹ ತಮಗೂ ಅವಕಾಶ ಕೊಡಬೇಕು ಎಂದು ಹೇಳಿದ್ದರು.

ಸೂರ್ಯ ಈಗ ‘ಕನಗುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಸೂರ್ಯ ಪಾಲಿಗೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಸಿನಿಮಾ ಶಿಲಾಯುಗದ ಕಾಲದ ಕತೆ ಹಾಗೂ ಆಧುನಿಕ ಕಾಲದ ಕತೆಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ದಿಶಾ ಪಟಾನಿ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us