ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರಿಗೆ ಗೊತ್ತಿದೆಯಾ ಡ್ರಗ್ಸ್​ ಸತ್ಯ? ಎನ್​ಸಿಬಿಯಿಂದ ವಿಚಾರಣೆ

Sushant Singh Rajput: ಈ ಪ್ರಕರಣದಲ್ಲಿ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳೂ ಸೇರಿದಂತೆ ಒಟ್ಟು 35ಕ್ಕೂ ಅಧಿಕ ಜನರನ್ನು ಇಲ್ಲಿಯವರೆಗೆ ವಿಚಾರಣೆಗೆ ಒಳಪಡಿಸಲಾಗಿದೆ. ಈಗ ಮನೆ ಕೆಲಸದವರಿಂದ ಮಹತ್ವದ ಮಾಹಿತಿ ಹೊರಬೀಳಲಿದೆಯೇ ಎಂಬ ಕುತೂಹಲ ಮೂಡಿದೆ.

ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರಿಗೆ ಗೊತ್ತಿದೆಯಾ ಡ್ರಗ್ಸ್​ ಸತ್ಯ? ಎನ್​ಸಿಬಿಯಿಂದ ವಿಚಾರಣೆ
ಸುಶಾಂತ್ ಸಿಂಗ್ ರಜಪೂತ್
Edited By:

Updated on: May 31, 2021 | 4:32 PM

ಕಳೆದ ವರ್ಷ ಜೂ.14ರಂದು ಬಾಲಿವುಡ್​ ಸ್ಟಾರ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರು ನಿಧನರಾದ ಸುದ್ದಿ ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿತ್ತು. ಅವರು ಅನುಮಾನಾಸ್ಪದವಾಗಿ ಮೃತರಾಗಿ ಒಂದು ವರ್ಷ ಕಳೆಯುತ್ತಿದ್ದರೂ ಕೂಡ ಸಾವಿಗೆ ಅಸಲಿ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಸುಶಾಂತ್​ ಸಾವಿನ ಬಗ್ಗೆ ತನಿಖೆ ಕೈಗೊಂಡ ಅಧಿಕಾರಿಗಳಿಗೆ ಮಾದಕವಸ್ತು ಜಾಲದ ನಂಟಿನ ಬಗ್ಗೆ ವಾಸನೆ ಬಡಿದಿತ್ತು. ಬಳಿಕ ಮಾದಕವಸ್ತು ನಿಯಂತ್ರಣ ಬ್ಯುರೋ (ಎನ್​ಸಿಬಿ) ಕೂಡ ತನಿಖೆ ಆರಂಭಿಸಿತ್ತು. ಈಗ ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರನ್ನು ಎನ್​ಸಿಬಿ ವಿಚಾರಣೆಗೆ ಒಳಪಡಿಸಿದೆ.

ಸುಶಾಂತ್​ ಜೊತೆ ಫ್ಲಾಟ್​ಮೇಟ್​ ಆಗಿದ್ದ ಸಿದ್ಧಾರ್ಥ್​ ಪಿಠಾನಿಯನ್ನು ಇತ್ತೀಚೆಗೆ ಹೈದರಾಬಾದ್​ನಲ್ಲಿ ಬಂಧಿಸಲಾಗಿತ್ತು. ಆ ಸಂಬಂಧ ತನಿಖೆ ಮುಂದುವರಿದಿದ್ದು, ಹೆಚ್ಚಿನ ವಿಚಾರಣೆಗಾಗಿ ಸುಶಾಂತ್​ ಮನೆಕೆಲಸದವರಾಗಿದ್ದ ನೀರಜ್​ ಮತ್ತು ಕೇಶವ್​ ಎಂಬುವವರನ್ನು ಭಾನುವಾರ (ಮೇ 30) ಎನ್​ಸಿಬಿ ಕಚೇರಿಗೆ ಕರೆಸಿಕೊಂಡು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಭಾನುವಾರ ತಡರಾತ್ರಿವರೆಗೂ ವಿಚಾರಣೆ ಮುಂದುವರಿದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳೂ ಸೇರಿದಂತೆ 35ಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈಗ ಮನೆ ಕೆಲಸದವರಿಂದ ಮಹತ್ವದ ಮಾಹಿತಿ ಹೊರಬೀಳಲಿದೆಯೇ ಎಂಬ ಕುತೂಹಲ ಮೂಡಿದೆ.

ಸುಶಾಂತ್​ ಸಿಂಗ್​ ರಜಪೂತ್​ಗೆ ಮಾದಕವಸ್ತು ಪೂರೈಕೆ ಮಾಡುತ್ತಿದ್ದ ಜಾಲದಲ್ಲಿ ಸಿದ್ಧಾರ್ಥ್​ ಪಿಠಾನಿ ಕೂಡ ಭಾಗಿಯಾಗಿದ್ದ ಎಂಬ ಆರೋಪ ಇದೆ. ಹಾಗಾಗಿ ಹೈದರಾಬಾದ್​ನಲ್ಲಿ ಆತನನ್ನು ಬಂಧಿಸಿ, ಮುಂಬೈಗೆ ಕರೆತರಲಾಯಿತು. ಕೋರ್ಟ್​ಗೆ ಹಾಜರುಪಡಿಸಿ, ಜೂನ್​ 1ರವರೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಂದು ವರ್ಷದಿಂದ ಈಚೆಗೆ ಹಲವು ಬಾಲಿವುಡ್​ ಕಲಾವಿದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಸಿಬಿ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದಾರೆ. ರಿಯಾ ಚಕ್ರವರ್ತಿ, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್​, ಶ್ರದ್ಧಾ ಕಪೂರ್​, ರಾಕುಲ್​ ಪ್ರೀತ್​ ಸಿಂಗ್​ ಮುಂತಾದವರು ಎನ್​ಸಿಬಿ ಕಚೇರಿಯ ಮೆಟ್ಟಿಲು ಹತ್ತಿಬಂದಿದ್ದಾರೆ.

ಸುಶಾಂತ್​ ಸಾವಿನ ತನಿಖೆಯನ್ನು ಮೂರು ಆಯಾಮದಿಂದ ಮಾಡಲಾಗುತ್ತಿದೆ. ಕೊಲೆಗೆ ಕಾರಣ ಏನು ಎಂಬುದನ್ನು ಸಿಬಿಐ ತನಿಖಾ ತಂಡ ಕಂಡುಹಿಡಿಯುತ್ತಿದೆ. ಸುಶಾಂತ್​ಗೆ ಇದ್ದ ಡ್ರಗ್ಸ್​ ಜಾಲದ ನಂಟಿನ ಬಗ್ಗೆ ಎನ್​ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸುಶಾಂತ್​ ಹಣಕಾಸು ವ್ಯವಹಾರದಲ್ಲಿ ಅನುಮಾನ ಕಂಡುಬಂದಿರುವ ಕಾರಣ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುತ್ತಿದೆ. ಒಟ್ಟಾರೆ ಪ್ರಕರಣದ ಅಂತಿಮ ವರದಿಗಾಗಿ ಸುಶಾಂತ್​ ಅಭಿಮಾನಿಗಳು ಕಾದಿದ್ದಾರೆ. ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಸೋಶಿಯಲ್​ ಮೀಡಿಯಾದಲ್ಲಿ ಇಂದಿಗೂ ಕೂಗು ಕೇಳಿಬರುತ್ತಿದೆ.

ಇದನ್ನೂ ಓದಿ:

ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣ ಮತ್ತೆ ಜೀವಂತ; ಹೈದರಾಬಾದ್​​ನಲ್ಲಿ ನಟ ಸುಶಾಂತ್​ ಅಪಾರ್ಟ್​ಮೆಂಟ್​ ವಾಸಿ ಅರೆಸ್ಟ್

ಸುಶಾಂತ್​ ಸಿಂಗ್​ ರಜಪೂತ್ ರೀತಿಯೇ ಕಾರ್ತಿಕ್​ ಆರ್ಯನ್​ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us