ಮೈಸೂರು ಸ್ಯಾಂಡಲ್ ವಿವಾದ: ತಮನ್ನಾ ಭಾಟಿಯಾ ಆಯ್ಕೆ ಬಗ್ಗೆ ರಮ್ಯಾ ಅಭಿಪ್ರಾಯ ಏನು?
ಪರಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಿದ್ದರ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರಮ್ಯಾ ದಿವ್ಯ ಸ್ಪಂದನಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅನಿಸಿಕೆ ತಿಳಿಸಿದ್ದಾರೆ.

ನಟಿ ತಮನ್ನಾ ಭಾಟಿಯಾ ಅವರಿಗೆ ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap) ಪ್ರಚಾರಕ್ಕಾಗಿ 6.2 ಕೋಟಿ ರೂಪಾಯಿ ಸಂಭಾವನೆ ನೀಡಿದ್ದನ್ನು ಜನರು ಖಂಡಿಸುತ್ತಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಪರಭಾಷಾ ನಟಿಯಿಂದ ಪ್ರಚಾರ ಮಾಡಿಸುವ ಅವಶ್ಯಕತೆ ಇರಲಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ತಮನ್ನಾ ಭಾಟಿಯಾ (Tamannaah Bhatia) ಬದಲು ಕನ್ನಡದ ಸೆಲೆಬ್ರಿಟಿಗಳ ಪೈಕಿ ಯಾರನ್ನಾದರೂ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಬಹುದಿತ್ತು ಎಂದು ಕೂಡ ಜನರು ಅನಿಸಿಕೆ ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ (Ramya Divya Spandana) ಕೂಡ ತಮ್ಮ ನಿಲುವು ಏನು ಎಂಬುದನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
‘ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವನ್ನು (KSDL) ಅಭಿವೃದ್ಧಿಪಡಿಸಲು ಉದ್ದೇಶಿಸಿರುವುದು ಪ್ರಶಂಸಾರ್ಹ. ಆದರೆ ಅದನ್ನು ಕಾರ್ಯರೂಪಕ್ಕೆ ತಂದಿರುವ ರೀತಿ ಸೂಕ್ತವಾಗಿಲ್ಲ. ಬಿಸ್ನೆಸ್ ದೃಷ್ಟಿಯಿಂದ ನೋಡಿದರೂ ಕೂಡ, ಮೈಸೂರು ಸ್ಯಾಂಡಲ್ ಸೋಪ್ ಬಲ ಕಡಿಮೆ ಆಗುತ್ತಿರುವ ಈ ಸಂದರ್ಭದಲ್ಲಿ ಯಾವುದೇ ಪ್ರಚಾರ ರಾಯಭಾರಿಯ ಅಗತ್ಯವಿಲ್ಲ. ಅಮೂಲ್, ಆ್ಯಪಲ್, ಡವ್, ಅಮೇಜಾನ್ ರೀತಿ ಮೈಸೂರು ಸ್ಯಾಂಡಲ್ ಸೋಪ್ಗೂ ಒಂದು ಪರಂಪರೆ ಇದೆ’ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.
‘ಉತ್ತರ ಭಾರತದ ಗ್ರಾಹಕರನ್ನು ಸೆಳೆಯಲು ಕನ್ನಡೇತರ ನಟಿಯನ್ನು ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದ್ದರಿಂದ ಕನ್ನಡಿಗರನ್ನೇ ಹೊರಗೆ ಇಟ್ಟಂತೆ ಆಗದೆ. ಕನ್ನಡಿಗರೇ ಈ ಸೋಪಿನ ಅಪ್ಪಟ ಗ್ರಾಯಕರು. ನಾವು ನಮ್ಮ ಕನ್ನಡದ ಹೆಮ್ಮೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಈ ಸಮಯದಲ್ಲಿ ಇದು ನಮ್ಮನ್ನು ವಿಫಲಗೊಳಿಸುತ್ತದೆ’ ಎಂದಿದ್ದಾರೆ ರಮ್ಯಾ.
View this post on Instagram
‘ಮತದಾನದ ಹಕ್ಕಿಗಾಗಿ, ಅಸಹಜವಾದ ಸೌಂದರ್ಯ ಮಾನದಂಡಗಳನ್ನು ತೆಗೆದುಹಾಕಲು, ಸಮಾನ ವೇತನ ಪಡೆಯಲು ಮಹಿಳೆಯರು ಶತಮಾನಗಳಿಂದ ಹೋರಾಟ ಮಾಡಿದ್ದಾರೆ. ಆದರೆ ಇಲ್ಲಿ ನಾವು ಬಿಳಿ ಚರ್ಮವೇ ಮಹತ್ವಾಕಾಂಕ್ಷೆಯ ವಿಷಯ ಅಂತ ಹೇಳುತ್ತಿದ್ದೇವೆ. ಮೈಸೂರ್ ಸ್ಯಾಂಡಲ್ ಸೋಪಿನ ಶಕ್ತಿ ಇರುವುದು ಜನರಿಗೆ ಹತ್ತಿರ ಆಗುವುದರಲ್ಲಿ’ ಎಂದು ರಮ್ಯಾ ಹೇಳಿದ್ದಾರೆ.
ಇದನ್ನೂ ಓದಿ: ರಶ್ಮಿಕಾ, ದೀಪಿಕಾಗೆ ಮೈಸೂರು ಸ್ಯಾಂಡಲ್ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
‘ಇದರಲ್ಲಿ ಭಾಗಿ ಆಗಿರುವವರಿಗೆ ಇದೆಲ್ಲ ತಿಳಿದಿಲ್ಲ ಎಂಬುದು ಸಷ್ಟವಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಬೇರೆ ಯಾವುದೋ ಸೋಪ್ ರೀತಿ ಅಲ್ಲ. ಇದನ್ನು ಕರ್ನಾಟಕದ ಜನರಿಗೆ ಸೂಕ್ಷ್ಮತೆಯಿಂದ ನಿಭಾಯಿಸಬೇಕು’ ಎಂದು ರಮ್ಯಾ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಷಯದ ಕುರಿತು ಪತ್ರಿಕೆಯಲ್ಲಿ ತಾವು ಬರೆದ ಲೇಖನವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








