
ಇತ್ತೀಚೆಗೆ ನಿರೂಪಕಿ ಅನುಶ್ರೀ (Anchor Anushree) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರೋಷನ್ ಜೊತೆ ಅವರ ಮದುವೆ ನೆರವೇರಿತು. ಈ ಮದುವೆಯನ್ನು ಅಣ್ಣನ ಸ್ಥಾನದಲ್ಲಿ ನಿಂತು ಮಾಡಿಸಿದ್ದು ಪುನೀತ್ ರಾಜ್ಕುಮಾರ್ ಅಭಿಮಾನಿ ವರುಣ್ ಗೌಡ. ಈಗ ‘ಜೀ ಕನ್ನಡ’ ವೇದಿಕೆಗೆ ಆ್ಯಂಕರ್ ಅನುಶ್ರೀ ಅವರು ಮರಳಿದ್ದಾರೆ. ಈ ವೇಳೆ ಮದುವೆ ಬಗ್ಗೆ ಅವರು ಮಾತನಾಡಿದರು. ವರುಣ್ (Varun Gowda) ಕೂಡ ವೇದಿಕೆಗೆ ಬಂದರು. ಮದುವೆ ಬಗ್ಗೆ ಏನಾದರೂ ಮಾತನಾಡಿ ಎಂದರೆ, ವರುಣ್ ಅವರಿಗೆ ಮಾತೇ ಬರಲಿಲ್ಲ. ಬರೀ ಕಣ್ಣೀರು ಸುರಿಸಿದರು. ಅದಕ್ಕೆ ಕಾರಣ ಆಗಿದ್ದು ಪುನೀತ್ ರಾಜ್ಕುಮಾರ್ (Puneeth Rajkumar) ನೆನಪು!
ಹೌದು, ಅನುಶ್ರೀ ಅವರು ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಅದೇ ರೀತಿ ವರುಣ್ ಕೂಡ ದೊಡ್ಡ ಫ್ಯಾನ್. ಅನುಶ್ರೀ ಅವರ ಮದುವೆಗೆ ಪುನೀತ್ ರಾಜ್ಕುಮಾರ್ ಬರಲಾಗಲಿಲ್ಲ ಎಂಬ ಕೊರಗು ಇಬ್ಬರಿಗೂ ಇದೆ. ಅದರಿಂದಾಗಿ ವರುಣ್ ಅವರು ‘ಜೀ ಕನ್ನಡ’ ವೇದಿಕೆಯಲ್ಲಿ ಎಮೋಷನ್ ಆದರು. ಈ ವೇಳೆ ಅನುಶ್ರೀ ಅವರು ಮಾತನಾಡಿದರು.
‘ನನಗೆ ಜೀವನ ಕೊಟ್ಟಿದ್ದು ಜೀ ಕನ್ನಡ. ಆ ಜೀವನಕ್ಕೆ ಅರ್ಥ ಕೊಟ್ಟಿದ್ದು ರೋಷನ್. ನಾವು ತುಂಬ ಜನರನ್ನು ಕರೆದು ಮದುವೆ ಮಾಡೋಕೆ ಆಗಿಲ್ಲ. ಇದಕ್ಕಿಂತಲೂ ಸಿಂಪಲ್ ಆಗಿ ದುವೆ ಆಗಬೇಕಿತ್ತು. ಅಲ್ಲಿ ಬಂದವರು ಯಾರೂ ಸೆಲೆಬ್ರಿಟಿಗಳಲ್ಲ. ಅಲ್ಲಿ ಬಂದವರು ನನ್ನ ಆತ್ಮೀಯರು. ನನ್ನ ಮನೆಯವರಿಗಿಂತಲೂ ಹೆಚ್ಚು ಕೆಲಸವನ್ನು ಅಲ್ಲಿ ನಿಂತು ಮಾಡಿದ್ದು ರಾಜ್ ಬಿ. ಶೆಟ್ಟಿ. ಆದರೆ ನನ್ನ ಜೀವನದ ಈ ತುಂಬಾ ಸುಂದರವಾದ ಕ್ಷಣವನ್ನು ಜೀವನಪೂರ್ತಿ ಉಡುಗೊರೆಯಾಗಿ ನೀಡಿದ್ದು ಬೆಸ್ಟ್ ಫ್ರೆಂಡ್, ಅಣ್ಣ ವರುಣ್ ಗೌಡ’ ಎಂದು ಅನುಶ್ರೀ ಹೇಳಿದರು.
‘ಈ ಮದುವೆ ಅವನ ಕನಸಾಗಿತ್ತು. ನನಗೆ ಯಾವುದೋ ದೇವಸ್ಥಾನದಲ್ಲಿ ಮದುವೆ ಆಗಬೇಕು ಎಂಬ ಆಸೆ ಇತ್ತು. ನನ್ನ ತಂಗಿ ಮದುವೆಯನ್ನು ಹಿಂಗೇ ಮಾಡಿಸಬೇಕು ಅಂತ ನನಗೆ ಈ ಮದುವೆ ಮಾಡಿಸಿದ್ದು ಅವನು. ಧನ್ಯವಾದಗಳು ವರುಣ. ಆ ಕ್ಷಣದಲ್ಲಿ ನಾವೆಲ್ಲರೂ ಅಪ್ಪು ಸರ್ನ ಮಿಸ್ ಮಾಡಿಕೊಂಡೆವು. ಅವರೇ ವರಣ್ನ ಕಳಿಸಿ ನನಗೆ ಈ ಮದುವೆ ಮಾಡಿಸಿದ್ದಾರೆ ಅಂತ ನಾನು ಅಂದುಕೊಂಡಿದ್ದೇನೆ’ ಎಂದು ವರುಣ್ ಗೌಡ ಬಗ್ಗೆ ಮಾತನಾಡುತ್ತಾ ಅನುಶ್ರೀ ಅವರು ಕಣ್ಣೀರು ಹಾಕಲು ಆರಂಭಿಸಿದರು.
ಇದನ್ನೂ ಓದಿ: ಮದುವೆ ಬಳಿಕ ಗುಡ್ ನ್ಯೂಸ್ ನೀಡಿದ ನಿರೂಪಕಿ ಅನುಶ್ರೀ: ಒಂದಲ್ಲ ಎರಡು
ಆಗ ವರುಣ್ ಗೌಡ ಅವರು ವೇದಿಕೆಗೆ ಬಂದರು. ‘ಯಾರಿಗೆ ಏನೇ ತೊಂದರೆ ಆದರೂ ಹೋಗಿ ಸಹಾಯಕ್ಕೆ ನಿಲ್ಲುವ ಜೀವ ಇದು’ ಎಂದು ಅನುಶ್ರೀ ಅವರು ವರುಣ್ ಬಗ್ಗೆ ಹೇಳಿದರು. ಬಳಿಕ ಮಾತನಾಡಿ ಎಂದು ಮೈಕ್ ನೀಡಿದರೆ ವರುಣ್ ಅವರಿಗೆ ಮಾತುಗಳೇ ಬರಲಿಲ್ಲ. ಕಣ್ಣೀರು ಹಾಕುತ್ತಲೇ ಒಂದೆರಡು ಮಾತನಾಡಿದರು. ‘ನೀವೆಲ್ಲ ಹೇಳೋ ಥರ ನಾನು ಏನೂ ಮಾಡಿಲ್ಲ. ನಿಮ್ಮ ಕೈಯಲ್ಲಿ ಆದರೆ ಒಳ್ಳೆಯದು ಮಾಡಿ, ದಯವಿಟ್ಟು ಯಾರಿಗೂ ಕೆಟ್ಟದ್ದು ಬಯಸಬೇಡಿ ಅಂತ ನಮಗೆ ಅಪ್ಪು ಬಾಸ್ ಹೇಳಿಕೊಟ್ಟಿದ್ದರು. ಅವರ ಮಾತನ್ನು ನಾನು ಪಾಲಿಸಿಕೊಂಡು ಹೋಗುತ್ತಿದ್ದೇನೆ. ನನ್ನ ಮದುವೆಯಲ್ಲೂ ಅವರನ್ನು ಮಿಸ್ ಮಾಡಿಕೊಂಡೆ. ನನ್ನ ತಂಗಿ ಮದುವೆಯಲ್ಲೂ ಅವರನ್ನು ಮಿಸ್ ಮಾಡಿಕೊಂಡೆ’ ಎಂದು ವರುಣ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.