ಬಿಗ್ ಬಾಸ್ ಮನೆಯಿಂದ ಅನುಷಾ ರೈ ಎಲಿಮಿನೇಟ್; ಬಚಾವ್ ಆದ ಧರ್ಮ

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋಗೆ ಕಾಲಿಡುವಾಗ ಧರ್ಮ ಕೀರ್ತಿರಾಜ್​ ಮತ್ತು ಅನುಷಾ ರೈ ಅವರು ಜೋಡಿಯಾಗಿ ಬಂದಿದ್ದರು. 50ನೇ ದಿನದಲ್ಲಿ ಅವರು ಎಲಿಮಿನೇಷನ್​ನ ಕೊನೆಯ ಹಂತಕ್ಕೂ ಜೋಡಿಯಾಗಿಯೇ ಬಂದರು. ಅಂತಿಮವಾಗಿ ಅನುಷಾ ರೈ ಅವರ ಆಟ ಅಂತ್ಯವಾಗಿದೆ. ಈ ವಾರ ಅವರು ಎಲಿಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಿಂದ ಅನುಷಾ ರೈ ಎಲಿಮಿನೇಟ್; ಬಚಾವ್ ಆದ ಧರ್ಮ
ಅನುಷಾ ರೈ

Updated on: Nov 17, 2024 | 11:02 PM

ನಟಿ ಅನುಷಾ ರೈ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಿಂದ ಎಲಿಮಿನೇಟ್​ ಆಗಿದ್ದಾರೆ. ಅವರು ಔಟ್ ಆಗಿದ್ದಕ್ಕೆ ಬಿಗ್ ಬಾಸ್ ಮನೆಯ ಇತರ ಸದಸ್ಯರಿಗೆ ಬೇಸರ ಆಗಿದೆ. ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್, ಶಿಶಿರ್ ಮುಂತಾದವರು ಕಣ್ಣೀರು ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರಂತೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಎಲಿಮಿನೇಟ್ ಆದ ಬಳಿಕ ಯಾರಿಗೂ ಗುಡ್​ಬೈ ಹೇಳಲು ಅನುಷಾ ರೈ ಅವರಿಗೆ ಅವಕಾಶ ಸಿಗಲಿಲ್ಲ. ಹಾಗಾಗಿ ಎಲ್ಲರಿಗೂ ತುಂಬ ಬೇಸರ ಆಯಿತು. ಅನುಷಾ ಜೊತೆ ಜಾಸ್ತಿ ನಂಟು ಹೊಂದಿದ್ದ ಭವ್ಯಾ ಅವರು ಕಣ್ಣೀರು ಹಾಕಿದ್ದಾರೆ.

ಬಿಗ್ ಬಾಸ್ ಶೋಗೆ ಬರುವುದಕ್ಕೂ ಮುನ್ನ ಧರ್ಮ ಕೀರ್ತಿರಾಜ್​ ಮತ್ತು ಅನುಷಾ ರೈ ಅವರು ಪರಿಚಿತರಾಗಿದ್ದರು. ಒಟ್ಟಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಬಿಗ್ ಬಾಸ್ ಶೋಗೆ ಬರುವಾಗ ಅವರು ಜೋಡಿಯಾಗಿ ಬಂದಿದ್ದರು. ಮನೆಯ ಒಳಗೆ ಕೂಡ ಒಟ್ಟಿಗೆ ಇರುತ್ತಿದ್ದರು. ಕಾಕತಾಳೀಯ ಎಂದರೆ ಎಲಿಮಿನೇಷನ್​ ಪ್ರಕ್ರಿಯೆಯಲ್ಲೂ ಅವರು ಜೊತೆಯಲ್ಲಿ ಕೊನೇ ಹಂತ ತಲುಪಿದ್ದರು.

ಧರ್ಮ ಮತ್ತು ಅನುಷಾ ಇಬ್ಬರೂ ಎಲಿಮಿನೇಟ್ ಆಗಬಹುದು ಅಥವಾ ಒಬ್ಬರೇ ಎಲಿಮಿನೇಟ್ ಆಗಬಹುದು ಎಂದು ಸುದೀಪ್ ಹೇಳಿದಾಗ ಅವರಿಬ್ಬರನ್ನು ಇಷ್ಟಪಡುವ ಪ್ರೇಕ್ಷಕರ ಎದೆಯಲ್ಲಿ ಢವ ಢವ ಶುರುವಾಗಿತ್ತು. ಅಂತಿಮವಾಗಿ ಅನುಷಾ ರೈ ಅವರು ಔಟ್ ಆಗಬೇಕಾಯಿತು. ಧರ್ಮ ಕೀರ್ತಿರಾಜ್ ಅವರು ಅಳುತ್ತಾ ವಾಪಸ್ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ.

ಇದನ್ನೂ ಓದಿ: ಅರ್ಧ ಜನ ತಿಕ್ಕಲು, ಇನ್ನರ್ಧ ಜನ ಪುಕ್ಕಲು: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ

ಎಲಿಮಿನೇಟ್ ಆದ ಬಳಿಕ ವೇದಿಕೆಗೆ ಬಂದ ಅನುಷಾ ರೈ ಅವರಿಗೆ ಸುದೀಪ್ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮ್ಮ ಪ್ರಕಾರ ಟಾಪ್ 5 ಯಾರು ಆಗಿರುತ್ತಾರೆ ಎಂದು ಕೇಳಿದ್ದಕ್ಕೆ ತ್ರಿವಿಕ್ರಮ್, ಧರ್ಮ ಕೀರ್ತಿರಾಜ್, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಅವರ ಹೆಸರುಗಳನ್ನು ಅನುಷಾ ಹೇಳಿದ್ದಾರೆ. ‘ಇಷ್ಟು ಬೇಗ ನಾನು ಹೊರಗೆ ಬಂದಿದ್ದಕ್ಕೆ ಬೇಜಾರು ಆಗಿದೆ. ನಾನು ಎಮೋಷನಲ್. ಅದರಿಂದ ನಾನು ಆಟದಲ್ಲಿ ಹಿಂದೇಟು ಹಾಕಿದೆ. ಬೇರೆಯವರ ಮನಸ್ಸಿಗೆ ನೋವಾಯಿತು ಅಂತ ನಾನು ಸುಮ್ಮನಾಗಿದ್ದು ನನಗೆ ಹಿನ್ನಡೆ ಆಯಿತು’ ಎಂದು ಅನುಷಾ ರೈ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us