ಬಿಗ್ ಬಾಸ್ ಮನೆಯಿಂದ ಭವ್ಯಾ ಗೌಡ ಎಲಿಮಿನೇಟ್ ಆಗಿದ್ದಕ್ಕೆ ಕಾರಣಗಳು ಏನು?

ಬಿಗ್ ಬಾಸ್ ಟ್ರೋಫಿ ಗೆಲ್ಲುವ ಆಸೆ ಇಟ್ಟುಕೊಂಡಿದ್ದ ಕಿರುತೆರೆ ನಟಿ ಭವ್ಯಾ ಗೌಡ ಅವರು ಕೊನೇ ಹಂತದಲ್ಲಿ ಎಲಿಮಿನೇಟ್ ಆಗಿದ್ದಾರೆ. ಅವರು ಎಡವಿದ್ದಕ್ಕೆ ಒಂದಷ್ಟು ಕಾರಣಗಳು ಇವೆ. ಆಟದ ಭರದಲ್ಲಿ ಭವ್ಯಾ ಗೌಡ ಅವರು ಕೆಲವು ತಪ್ಪುಗಳನ್ನು ಮಾಡಿದ್ದರು. ಎಷ್ಟೋ ಬಾರಿ ಅವರು ಆ ತಪ್ಪುಗಳನ್ನು ಸಮರ್ಥಿಸಿಕೊಂಡಿದ್ದರು.

ಬಿಗ್ ಬಾಸ್ ಮನೆಯಿಂದ ಭವ್ಯಾ ಗೌಡ ಎಲಿಮಿನೇಟ್ ಆಗಿದ್ದಕ್ಕೆ ಕಾರಣಗಳು ಏನು?
Bhavya Gowda

Updated on: Jan 25, 2025 | 11:01 PM

ನಟಿ ಭವ್ಯಾ ಗೌಡ ಅವರಿಗೆ ಬಿಗ್ ಬಾಸ್ ಟ್ರೋಫಿ ಪಡೆಯುವ ಕನಸು ಭಗ್ನವಾಗಿದೆ. ಮೊದಲ ದಿನದಿಂದಲೂ ಪೈಪೋಟಿ ನೀಡುತ್ತಾ ಬಂದಿದ್ದ ಅವರು ಫಿನಾಲೆಯಲ್ಲಿ ಔಟ್ ಆಗಿದ್ದಾರೆ. ಟಾಪ್ 6 ಸ್ಪರ್ಧಿಗಳಲ್ಲಿ ಭವ್ಯಾ ಗೌಡ ಕೂಡ ಒಬ್ಬರಾಗಿದ್ದರು. 6ನೇ ಸ್ಥಾನಕ್ಕೆ ಅವರು ತೃಪ್ತಿಪಟ್ಟುಕೊಳ್ಳುವಂತೆ ಆಗಿದೆ. ಹಾಗಾದರೆ ಭವ್ಯಾ ಗೌಡ ಅವರಿಗೆ ಟ್ರೋಫಿ ಯಾಕೆ ಮಿಸ್ ಆಯಿತು? ಅವರಿಂದ ಆದ ತಪ್ಪುಗಳು ಏನು? ಜನರು ಭವ್ಯಾಗೆ ಹೆಚ್ಚು ವೋಟ್ ಯಾಕೆ ನೀಡಲಿಲ್ಲ? ಅದಕ್ಕೆಲ್ಲ ಉತ್ತರ ಇಲ್ಲಿದೆ..

ಭವ್ಯಾ ಗೌಡ ಅವರು ಯಾವಾಗಲೂ ಗೆಲುವಿನ ಮೇಲೆ ಕಣ್ಣು ಇಟ್ಟಿದ್ದರು. ಆದರೆ ಗೆಲುವಿಗಾಗಿ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ದಾರಿಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಒಂದು ಆಟದಲ್ಲಿ ಮೋಸದಿಂದ ಚಂಡು ಎತ್ತಿಕೊಂಡಿದ್ದರು. ಅವರ ಮೋಸದ ಆಟ ಬಿಗ್ ಬಾಸ್ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಭವ್ಯಾ ಗೌಡ ಈ ರೀತಿ ವರ್ತನೆ ತೋರಿದ್ದಕ್ಕೆ ವೀಕ್ಷಕರಿಗೆ ಬೇಸರ ಆಗಿತ್ತು.

ಟಾಸ್ಕ್ ಆಡುವ ಭರದಲ್ಲಿ ಭವ್ಯಾ ಗೌಡ ಅವರು ಹನುಮಂತನ ಮೇಲೆ ಕೈ ಮಾಡಿದ್ದರು. ಯಾವುದೇ ಕಾರಣಕ್ಕೂ ಅವರು ಇಂಥ ವರ್ತನೆ ತೋರಬಾರದಿತ್ತು. ಟಾಸ್ಕ್ ನಡುವೆ ಈ ರೀತಿ ಆಗಿದೆ ಎಂಬ ಒಂದೇ ಕಾರಣಕ್ಕೆ ಅವರು ಬಚಾವ್ ಆಗಿದ್ದರು. ಹಾಗಿದ್ದರೂ ಕೂಡ ಸುದೀಪ್ ಅವರು ಭವ್ಯಾಗೆ ಶಿಕ್ಷೆ ನೀಡಿ ಜೈಲಿಗೆ ಕಳಿಸಿದ್ದರು. ನಂತರದ ದಿನಗಳಲ್ಲಿ ಅದೇ ವಿಚಾರ ಚರ್ಚೆಗೆ ಬಂದಾಗ ‘ಹೌದು, ಏನಿವಾಗ’ ಎಂಬ ರೀತಿಯಲ್ಲಿ ಭವ್ಯಾ ಗೌಡ ಉದ್ಧಟತನ ತೋರಿಸಿದ್ದರು.

ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಹೆಚ್ಚು ಬೆರೆತಿದ್ದು ತ್ರಿವಿಕ್ರಮ್ ಜೊತೆಯಲ್ಲಿ ಮಾತ್ರ. ಅದನ್ನು ಹೊರತುಪಡಿಸಿ ಬೇರೆ ಯಾರ ಜೊತೆಗೂ ಅವರು ಬೆರೆಯುತ್ತಿರಲಿಲ್ಲ. ಎಷ್ಟೋ ಸಂದರ್ಭದಲ್ಲಿ ಅವರು ತ್ರಿವಿಕ್ರಮ್​ನ ಬೆಂಬಲ ಪಡೆದಿದ್ದರು. ಆದರೆ ಆಟದ ಕೊನೇ ಹಂತದಲ್ಲಿ ತ್ರಿವಿಕ್ರಮ್ ವಿರುದ್ಧವೇ ಭವ್ಯಾ ಗೌಡ ತಂತ್ರಗಾರಿಕೆ ಮಾಡಿದ್ದರು. ಅದು ಕೂಡ ವೀಕ್ಷಕರಿಗೆ ಸರಿ ಎನಿಸಿರಲಿಲ್ಲ. ‘ಎದುರಾಳಿ ಯಾರೇ ಆದರೂ ಅವರನ್ನು ತುಳಿದುಕೊಂಡೇ ಹೋಗಬೇಕು’ ಎಂದು ಒಮ್ಮೆ ಭವ್ಯಾ ಗೌಡ ಹೇಳಿದ್ದರು. ಅದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯ ರೀತಿ ಇತ್ತು. ‘ಸ್ವಾರ್ಥಕ್ಕೆ ಅಂತ ಒಬ್ಬ ಮನುಷ್ಯನನ್ನು ಇಷ್ಟು ದಿನ ಉಪಯೋಗಿಸಿಕೊಳ್ಳವ ಅವಶ್ಯಕತೆ ಇರಲಿಲ್ಲ’ ಎಂದು ತ್ರಿವಿಕ್ರಮ್ ಅವರು ತಿರುಗೇಟು ನೀಡಿದ್ದರು.

ಇದನ್ನೂ ಓದಿ: ಸುದೀಪ್ ಇಲ್ಲದ ಬಿಗ್​ ಬಾಸ್ ಊಹಿಸೋಕೆ ಆಗಲ್ಲ; ಮುಂದಿನ ಆಯ್ಕೆ ಏನು?

ಭವ್ಯಾ ಗೌಡ ಅವರು ಎಷ್ಟೋ ಸಂದರ್ಭದಲ್ಲಿ ಅಳುವುದನ್ನು ತಮ್ಮ ಅಸ್ತ್ರವಾಗಿ ಬಳಸಿಕೊಂಡಿದ್ದರು. ವೀಕೆಂಡ್​ನಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳಲು ಮುಂದಾದಾಗ ಕೂಡ ಭವ್ಯಾ ಗೌಡ ಅವರು ಕಣ್ಣೀರು ಹಾಕಿ ಎಸ್ಕೇಪ್ ಆಗಲು ಪ್ರಯತ್ನಿಸುತ್ತಿದ್ದರು. ಇನ್ನು, ಅನೇಕ ಸಂದರ್ಭದಲ್ಲಿ ಭವ್ಯಾ ಅವರು ಮಾಡೋದೊಂದು ಹೇಳೋದು ಇನ್ನೊಂದು ಎಂಬಂತೆ ಇರುತ್ತಿತ್ತು. ಇದನ್ನೆಲ್ಲ ವೀಕ್ಷಕರು ಖಂಡಿತವಾಗಿ ಗಮನಿಸಿದ್ದಾರೆ. ಹಾಗಾಗಿ ಜನರು ಈ ತೀರ್ಪು ನೀಡಿದ್ದಾರೆ. ‘ನನ್ನಿಂದ ಒಂದಷ್ಟು ತಪ್ಪುಗಳು ಆಗಿವೆ. ಅದನ್ನು ನಾನು ಸರಿ ಮಾಡಿಕೊಂಡಿಲ್ಲ’ ಎಂಬುದನ್ನು ಭವ್ಯಾ ಗೌಡ ಅವರು ಸುದೀಪ್ ಎದುರಿನಲ್ಲೇ ಒಪ್ಪಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us