ಬಿಗ್ ಬಾಸ್ ವೇದಿಕೆಯಲ್ಲೂ ಸುದೀಪ್​ಗೆ ಕಾಡುತ್ತಿದೆ ತಾಯಿ ನೆನಪು; ಎಮೋಷನಲ್ ಆದ ಕಿಚ್ಚ

ನಟ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನರಾದ ಸುದ್ದಿ ಕೇಳಿ ಎಲ್ಲರಿಗೂ ನೋವಾಯಿತು. ಈಗ ಆ ನೋವಿನ ಜೊತೆಯಲ್ಲೇ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ಹೊಸ ಸಂಚಿಕೆಯನ್ನು ನಡೆಸಿಕೊಟ್ಟಿದ್ದಾರೆ. ಈ ವೇದಿಕೆಯಲ್ಲಿ ಅವರು ತಾಯಿಯ ಬಗ್ಗೆ ಮಾತನಾಡುತ್ತಾ ಎಮೋಷನಲ್ ಆಗಿದ್ದಾರೆ.

ಬಿಗ್ ಬಾಸ್ ವೇದಿಕೆಯಲ್ಲೂ ಸುದೀಪ್​ಗೆ ಕಾಡುತ್ತಿದೆ ತಾಯಿ ನೆನಪು; ಎಮೋಷನಲ್ ಆದ ಕಿಚ್ಚ
ಕಿಚ್ಚ ಸುದೀಪ್

Updated on: Nov 04, 2024 | 7:13 AM

ತಾಯಿ ನಿಧನದ ಬಳಿಕ ಒಂದು ವಾರ ಗ್ಯಾಪ್ ಪಡೆದುಕೊಂಡಿದ್ದ ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ವೇದಿಕೆಗೆ ಮರಳಿದ್ದಾರೆ. ಈ ವೀಕೆಂಡ್​ ಸಂಚಿಕೆಯನ್ನು ಅವರು ಲವಲವಿಕೆಯಿಂದ ನಡೆಸಿಕೊಟ್ಟಿದ್ದಾರೆ. ಹಾಗಿದ್ದರೂ ಅವರ ಮನಸ್ಸಿನಲ್ಲಿ ದೊಡ್ಡ ನೋವು ಇದೆ. ಅದರ ನಡುವೆಯೂ ಅವರು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾನುವಾರದ (ನವೆಂಬರ್​ 3) ಸಂಚಿಕೆ ಮುಗಿಯುವಾಗ ಅವರು ತಾಯಿಯ ಬಗ್ಗೆ ಮಾತನಾಡಿದರು. ಸಂತಾಪ ಸೂಚಿಸಿದ ಎಲ್ಲರಿಗೂ ಸುದೀಪ್ ಧನ್ಯವಾದ ಅರ್ಪಿಸಿದರು.

‘ಕಳೆದ ಸಂಚಿಕೆಯನ್ನು ನಡೆಸಿಕೊಡುವಾಗ ನನಗೆ ಸ್ವಲ್ಪ ಶೇಕ್ ಆಗುತ್ತಿತ್ತು. ಯಾಕೆಂದರೆ, ಎಷ್ಟೋ ವರ್ಷಗಳಿಂದ ಬಿಗ್ ಬಾಸ್​ನ ಒಂದೂ ಎಪಿಸೋಡ್​ ಮಿಸ್ ಮಾಡದೇ ನೋಡುತ್ತಿದ್ದರು ನನ್ನ ತಾಯಿ. ಅವರಿಗೆ ಈ ಕಾರ್ಯಕ್ರಮ ಬಹಳ ಹತ್ತಿರ. ಈ ವೇದಿಕೆಯಲ್ಲಿ ನಾನು ಪ್ರತಿಬಾರಿ ಏನೇ ಉಡುಪು ಹಾಕಿಕೊಂಡು ಬಂದರೂ ಮನೆಗೆ ಹೋದ ತಕ್ಷಣ ನಾನು ಅವರನ್ನು ನೋಡುತ್ತಿದ್ದೆ. ಅವರು ಏನು ಹೇಳುತ್ತಾರೋ, ಹೇಗೆ ಖುಷಿ ಪಡುತ್ತಾರೆ ಅಂತ ನೋಡುತ್ತಿದ್ದೆ’ ಎಂದಿದ್ದಾರೆ ಸುದೀಪ್.

‘ತಾಯಿ ಇಲ್ಲ ಎಂಬ ಕೊರತೆ ಇಂದು ನಾನು ವೇದಿಕೆ ಹತ್ತುವಾಗ ಮೊದಲ ಬಾರಿ ಕಾಣಿಸಿತು. ಅಯ್ಯಯ್ಯೋ.. ಇನ್ಮೇಲೆ ಅವರು ನೋಡಲ್ಲ ಅನಿಸಿತು. ಭವಿಷ್ಯ ಆ ಶಕ್ತಿಯಿಂದ ನನಗೆ ಹಿಂದಿನ ಸಂಚಿಕೆ ನಡೆಸಿಕೊಡೋಕೆ ಆಯ್ತು. ನಾನು ಅವರನ್ನು ಖಂಡಿತಾ ಮಿಸ್ ಮಾಡಿಕೊಳ್ಳುತ್ತೇನೆ. ಈ ಕಾರ್ಯಕ್ರಮವನ್ನು ನಡೆಸಿಕೊಡಲು ಅವರೇ ನನಗೆ ಸ್ಫೂರ್ತಿ’ ಎನ್ನುತ್ತಾ ಸುದೀಪ್ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಮನದಲ್ಲಿ ಬೆಟ್ಟದಷ್ಟು ನೋವು ಇದ್ದರೂ ನಗುತ್ತಾ ಬಿಗ್ ಬಾಸ್ ಶೋ ನಡೆಸಿಕೊಟ್ಟ ಸುದೀಪ್

‘ಅವರು ಇಷ್ಟಪಡುತ್ತಿದ್ದ ಹಾಗೂ ನೀವು ಇಷ್ಟಪಡುವ ಕಾರ್ಯಕ್ರಮ ಇದು. ಕಳೆದ ಸಂಚಿಕೆಯಲ್ಲಿ ಅದ್ಭುತವಾದ ಹಾಡನ್ನು ಹಾಕಿ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ್ರಿ. ನಾನು ನನ್ನ ತಂದೆ ಹಾಗೂ ಕುಟುಂಬದ ಪರವಾಗಿ ಧನ್ಯವಾದ ಹೇಳುತ್ತೇನೆ. ಪ್ರತಿಯೊಬ್ಬರು ಕೂಡ ಸಂತಾಪ ತಿಳಿಸಿದ್ದೀರಿ. ಅದು ನಮಗೆ ಹತ್ತಿರವಾಗಿದೆ. ಮತ್ತೆ ಮುಂದಿನ ಸಂಚಿಕೆಯಲ್ಲಿ ಸಿಗೋಣ’ ಎಂದು ಸುದೀಪ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us