
ಬಿಗ್ಬಾಸ್ ಕನ್ನಡ ಸೀಸನ್ 13ರ ಮೊದಲ ಎಲಿಮಿನೇಷನ್ ಆಗಿದೆ. ಈ ಬಾರಿಯ ಎಲಿಮಿನೇಷನ್ ಬಿಗ್ಬಾಸ್ ಇತಿಹಾಸದಲ್ಲೇ ಬಹಳ ವಿಶೇಷವಾದುದು. ಬಿಗ್ಬಾಸ್ ಶುರುವಾಗಿ ಒಂದು ವಾರ ಆಗಿದ್ದು, ಈ ಬಾರಿ ಆರಂಭದಿಂದಲೇ ತುಸು ವಿಶೇಷವಾಗಿತ್ತು ಆಟ. ಕೆಲ ಸ್ಪರ್ಧಿಗಳನ್ನು ಬಿಗ್ಬಾಸ್ ಮನೆಯ ಒಳಗೆ ಕಳಿಸಿದರೆ ಕೆಲವರನ್ನು ಬಿಗ್ಬಾಸ್ ವಿಮಾನದಲ್ಲೇ ಇರಿಸಲಾಗಿತ್ತು. ಅವರು ಬರೋಬ್ಬರಿ ಒಂದು ವಾರದ ಕಾಲ ವಿಮಾನದಲ್ಲೇ ಇದ್ದರು. ವಿಮಾನದಲ್ಲಿದ್ದ ಎಂಟು ಮಂದಿ ನಾಮಿನೇಟ್ ಆಗಿದ್ದರು. ಅವರಲ್ಲಿ ಒಬ್ಬರು ಬಿಗ್ಬಾಸ್ ಮನೆಗೆ ಹೋಗದೇ ಬಿಗ್ಬಾಸ್ನಿಂದ ಹೊರಗೆ ಹೋಗಿದ್ದಾರೆ.
ಆಸಿಯಾ, ಓಂ ಪ್ರಕಾಶ್, ಮಹಾಕವಿ ಮಂಜು, ಅವಿನಾಶ್, ಪ್ರಥಮಾ, ಕಿರಣ್ ಇನ್ನೂ ಕೆಲವರು ಈ ವಾರ ನಾಮಿನೇಟ್ ಆಗಿದ್ದರು. ಭಾನುವಾರದ ಎಪಿಸೋಡ್ನಲ್ಲಿ ಸುದೀಪ್ ಅವರು ಒಬ್ಬೊಬ್ಬರನ್ನೇ ಎವಿಕ್ಟ್ನಿಂದ ಸೇವ್ ಮಾಡುತ್ತಾ ಬಂದರು. ಅಂತಿಮವಾಗಿ ಕಿರಣ್ ಮತ್ತು ಪ್ರಥಮಾ ಉಳಿದರು. ಇಬ್ಬರಿಗೂ ಕಣ್ಣಿಗೆ ಬಟ್ಟೆ ಕಟ್ಟಲಾಯ್ತು. ವಿಮಾನದಲ್ಲಿ ಕತ್ತಲೆ ತುಂಬಿತು, ಹೊಗೆ ಆವರಿಸಿಕೊಂಡಿತು ಕೆಲ ಕ್ಷಣಗಳ ಬಳಿಕ ಬೆಳಕು ಬಂದರೆ ಉಳಿದಿದ್ದು ಕಿರಣ್ ಮಾತ್ರ. ಪ್ರಥಮ ಅವರು ಮನೆಯಿಂದ ಎವಿಕ್ಟ್ ಆದರು. ಆ ಮೂಲಕ ಈ ಸೀಸನ್ನಿನಿಂದ ಹೊರಬಂದ ಮೊದಲ ಸ್ಪರ್ಧಿ ಎನಿಸಿಕೊಂಡರು.
ಖ್ಯಾತ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್ ಅವರು ಈ ವಾರ ಎವಿಕ್ಟ್ ಆಗಿದ್ದಾರೆ. ಪ್ರಥಮಾ ಅವರು ಗಟ್ಟಿ ಸ್ಪರ್ಧಿ ಎನಿಸಿಕೊಂಡೇ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಪ್ರಥಮಾ ಅವರು ನಟಿಯಾಗಿ, ನೃತ್ಯ ಕಲಾವಿದೆಯಾಗಿ ಜನಪ್ರಿಯರಾಗಿದ್ದರು. ಬಿಗ್ಬಾಸ್ಗೆ ಸಾಕಷ್ಟು ಆಸೆಗಳನ್ನು ಇರಿಸಿಕೊಂಡು ಬಂದಿದ್ದರು. ಇದ್ದ ಒಂದು ವಾರ ಸಾಕಷ್ಟು ಗಮನ ಸೆಳೆದಿದ್ದರು. ಆದರೂ ಸಹ ಪ್ರಥಮಾ ಅವರು ಮೊದಲ ವಾರವೇ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಗ್ಬಾಸ್ಗೆ ಹೋಗಿ ಒಂದು ವಾರ ಇದ್ದರೂ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸದೆ ಹೊರಬಂದ ಮೊಟ್ಟ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ ಪ್ರಥಮಾ.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಗೀಯ ಗಾ, ಗಾಗಿಯ ಗಾಗ: ವಿಡಿಯೋ ನೋಡಿ
ಪ್ರಥಮಾ ಅವರು ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡು ಬಿಗ್ಬಾಸ್ಗೆ ಬಂದಿದ್ದರು. ಬಿಗ್ಬಾಸ್ಗೆ ಬರುವಾಗಲೇ ಅವರು ಈ ಬಗ್ಗೆ ಹೇಳಿಕೊಂಡಿದ್ದರು. ‘ನನ್ನ ತಾಯಿಗೆ ಸಿಕ್ಕಂಥೆ ದೊಡ್ಡ ಗುರುತು ನನಗೆ ಸಿಕ್ಕಿಲ್ಲ, ವಿನಯಾ ಪ್ರಸಾದ್ ಮಗಳಾಗಿಯೇ ನನ್ನನ್ನು ಗುರುತಿಸುತ್ತಿದ್ದಾರೆ. ನನಗಾಗಿ ಒಂದು ಗುರುತು ಪಡೆದುಕೊಳ್ಳಲು ಬಂದಿದ್ಧೇನೆ ಎಂದಿದ್ದರು. ಪ್ರತಿಭೆಗೆ ತಕ್ಕ ಪಾತ್ರ ಸಿಕ್ಕಿಲ್ಲ ಎಂಬ ಬೇಸರವೂ ಇದೆ, ವೃತ್ತಿ ಜೀವನದಲ್ಲಿ ಇನ್ನಷ್ಟು ಎತ್ತರಕ್ಕೆ ಹೋಗುವ ಆಸೆಯೂ ಇದೆ ಎಂದು ಪ್ರಥಮಾ ಹೇಳಿಕೊಂಡಿದ್ದರು. ಆದರೆ ಅವರ ಬಿಗ್ಬಾಸ್ ಪಯಣ ಒಂದೇ ವಾರಕ್ಕೆ ಅಂತ್ಯವಾಗಿದೆ. ಸುದೀಪ್ ಅವರು ಶುಭಾಶಯಗಳನ್ನು ಹೇಳಿ ಅವರನ್ನು ಕಳಿಸಿಕೊಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ