ಹರಕೆ ಕುರಿಯಂತಾಗಿದ್ದ ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ ಸುದೀಪ್, ಕ್ಷಮೆ ಕೇಳಿದ ಸಂತೋಶ್

|

Updated on: Oct 14, 2023 | 11:35 PM

Bigg Boss 10: ಬಿಗ್​ಬಾಸ್ ಮನೆಯಲ್ಲಿ ಈಸಿ ಟಾರ್ಗೆಟ್ ಆದಂತಾಗಿ, ಹಲವರ ಕೈಯಿಂದ ವ್ಯಂಗ್ಯ, ಮೂದಲಿಕೆ, ಟೀಕೆಗಳಿಗೆ ಗುರಿಯಾಗಿದ್ದ ಡ್ರೋನ್ ಪ್ರತಾಪ್ ಪರವಾಗಿ ಸುದೀಪ್ ನಿಂತಿದ್ದಾರೆ. ವಾರದ ಪಂಚಾಯಿತಿಯ ಶನಿವಾರದ ಎಪಿಸೋಡ್​ನಲ್ಲಿ ಏನೆಲ್ಲ ಆಯ್ತು? ಇಲ್ಲಿ ಓದಿ...

ಹರಕೆ ಕುರಿಯಂತಾಗಿದ್ದ ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ ಸುದೀಪ್, ಕ್ಷಮೆ ಕೇಳಿದ ಸಂತೋಶ್
ಸುದೀಪ್
Follow us on

ಬಿಗ್​ಬಾಸ್ (Bigg Boss) ಮನೆಯಲ್ಲಿ ಡ್ರೋನ್ ಪ್ರತಾಪ್ (Drone Prathap) ಸುಲಭದ ಟಾರ್ಗೆಟ್ ಆಗಿದ್ದಾರೆ. ತುಕಾಲಿ ಸಂತೋಶ್, ಸ್ನೇಹಿತ್, ವಿನಯ್, ಹಳ್ಳಿಕಾರ್ ಸಂತೋಶ್, ವಿನಯ್, ಭಾಗ್ಯಶ್ರೀ ಇನ್ನೂ ಹಲವರು ಡ್ರೋನ್ ಪ್ರತಾಪ್ ಅನ್ನು ಆಡಿಕೊಳ್ಳುವುದು, ಟೀಕೆ ಮಾಡುವುದು, ವ್ಯಂಗ್ಯ ಮಾಡುವುದು, ಪ್ರತಾಪ್ ವಿರುದ್ಧ ಜಗಳ ಮಾಡುವುದು ಮಾಡುತ್ತಿದ್ದರು. ಸತತ ದಾಳಿಯಿಂದ ಬೇಸರಗೊಂಡು ಪ್ರತಾಪ್ ಕಣ್ಣೀರು ಹಾಕಿದರು ಸಹ. ಆದರೆ ವಾರಾಂತ್ಯದಲ್ಲಿ ಪ್ರತಾಪ್​ಗೆ ತುಸು ನೆಮ್ಮದಿ ದೊರೆತಿದೆ.

ಬಿಗ್​ಬಾಸ್ ಕನ್ನಡ ಸೀಸನ್ 10 ರ ಮೊದಲ ವಾರದ ಪಂಚಾಯಿತಿಗೆ ಹಾಜರಾದ ಸುದೀಪ್, ಎಂದಿನಂತೆ ಸ್ಪರ್ಧಿಗಳನ್ನು ತುಸು ನಗಿಸಿ, ಯೋಗಕ್ಷೇಮ ವಿಚಾರಿಸಿದ ಜೊತೆಗೆ, ವಾರದ ಅವಧಿಯಲ್ಲಿ ಆದ ಸಮಸ್ಯೆಗಳು, ಗಲಾಟೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡಿದರು. ಹೊಟ್ಟೆಹಸಿಯುತ್ತಿದೆ ಎಂದ ಭಾಗ್ಯಶ್ರೀ ಅವರಿಗೆ ರೊಟ್ಟಿ ಹಾಕಿಕೊಟ್ಟು ಕೊನೆಗೆ ಅವರಿಂದಲೇ ಟೀಕೆಗೆ ಗುರಿಯಾದ, ಆರೋಪಿಯಂತಾಗಿದ್ದರು ಪ್ರತಾಪ್, ಆ ವಿಷಯವನ್ನು ಮೊದಲು ವಿಚಾರಣೆಗೆ ಎತ್ತಿಕೊಂಡ ಸುದೀಪ್, ”ಹೊಟ್ಟೆ ಹಸಿಯುತ್ತಿದ್ದ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ರೊಟ್ಟಿ ಹಾಕಿಕೊಡುವ ಕ್ರಿಯೆಯೆನ್ನು ಏನೆನ್ನಬಹುದು ಎಂದು ಭಾಗ್ಯಶ್ರೀ ಅವರ ಬಳಿಯೇ ಕೇಳಿದರು.

ಸುದೀಪ್​ರ ಪ್ರಶ್ನೆಗೆ ಮಾನವೀಯತೆ ಎಂದು ಉತ್ತರಿಸಿದರು ಭಾಗ್ಯಶ್ರೀ. ನಿಮ್ಮ ಮೇಲೆ ಮಾನವೀಯತೆ ತೋರಿದ ವ್ಯಕ್ತಿಯ ಪರವಾಗಿ ಆದರೂ ನೀವು ನಿಲ್ಲಬೇಕಿತ್ತಲ್ಲವೆ? ನಿಯಮ ಮತ್ತೊಂದನ್ನು ಪಕ್ಕಕ್ಕೆ ಇಡಿ, ಒಂದೊಮ್ಮೆ ಪ್ರತಾಪ್ ಹಾಕಿಕೊಟ್ಟ ರೊಟ್ಟಿ ತಿನ್ನುವಾಗ ತನಿಷಾ, ಸಂಗೀತಾ ಅವರುಗಳು ಬಾರದೇ ಇದ್ದಿದ್ದರೆ ಏನು ಮಾಡಿರುತ್ತಿದ್ದಿರಿ ಎಂಬ ಸುದೀಪ್ ಪ್ರಶ್ನೆಗೆ ಥ್ಯಾಂಕ್ಸ್ ಹೇಳುತ್ತಿದ್ದೆ ಎಂದರು ಭಾಗ್ಯಶ್ರೀ. ನೀವು ಮಾಡಬೇಕಾಗಿದ್ದಿದ್ದು ಅಷ್ಟೆ ಎಂದರು ಸುದೀಪ್. ತಪ್ಪಿನ ಅರಿವಾದ ಭಾಗ್ಯಶ್ರೀ ಪ್ರತಾಪ್​ಗೆ ಥ್ಯಾಂಕ್ಸ್ ಹೇಳಿದರು.

ಇದನ್ನೂ ಓದಿ:ರಕ್ಷಕ್ ಸೈಲೆಂಟ್-ಡ್ರೋನ್ ಪ್ರತಾಪ್ ವೈಲೆಂಟ್: ಪ್ರತಾಪ್ ಮೇಲೆ ಹಲವರ ಪ್ರತಾಪ

ಇನ್ನು ತುಕಾಲಿ ಸಂತೋಶ್, ಸ್ನೇಹಿತ್ ಇನ್ನಿತರರು ಡ್ರೋನ್ ಪ್ರತಾಪ್ ಬಗ್ಗೆ ಮನೆಯ ಇತರ ಸದಸ್ಯರ ಬಳಿ ದೂರು ಹೇಳಿದ್ದು, ಪ್ರತಾಪ್ ಅನ್ನು ಗೋಳು ಹೊಯ್ದುಕೊಂಡ ವಿಷಯದ ಬಗ್ಗೆ ಮಾತನಾಡಿ, ತುಕಾಲಿ ಸಂತೋಶ್ ಕುರಿತು ‘ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಕೊಲೆ ಮಾಡುವ ಅಧಿಕಾರ ನಿಮಗೆ ಧಕ್ಕಿದ್ದು ಹೇಗೆ?’ ಎಂದು ಸುದೀಪ್ ತುಸು ಖಾರವಾಗಿಯೇ ಪ್ರಶ್ನೆ ಮಾಡಿದರು. ಒಬ್ಬ ವ್ಯಕ್ತಿಯ ಕಣ್ಣೀರು ಮತ್ತೊಬ್ಬನಿಗೆ ನಗು ಹೇಗೆ ಆಗುತ್ತದೆ ಎಂದು ಪ್ರಶ್ನೆ ಮಾಡಿದರು. ವ್ಯಂಗ್ಯ ಮಾಡಿದ ತುಕಾಲಿ ಸಂತೋಶ್ ಮಾತ್ರವೇ ಅಲ್ಲದೆ ಅವನೊಟ್ಟಿಗೆ ಸೇರಿ ನಕ್ಕ ಇತರರಿಗೂ ಮಾತಿನ ಛಾಟಿ ಬೀಸಿದರು ಸುದೀಪ್. ನಾನು ತಮಾಷೆಗಾಗಿ ಹಾಗೆ ಮಾಡಿದ ಎಂದ ತುಕಾಲಿ ಸಂತೋಶ್, ಸುದೀಪ್ ಎದುರಲ್ಲಿಯೇ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದರು.

ಡ್ರೊನ್ ಪ್ರತಾಪ್​ಗೆ ಕೆಲ ಸಲಹೆಯನ್ನು ನೀಡಿದ ಸುದೀಪ್, ಮಾಡಿದ ತಪ್ಪು ನಿಮಗೆ ಮಾತ್ರವೇ ಗೊತ್ತಿರುತ್ತದೆ. ಒಂದೊಮ್ಮೆ ಅವನ್ನು ಒಪ್ಪಿಕೊಂಡು ಹೊರಗೆ ಹಾಕಿ ಬಿಟ್ಟರೆ ಹೊಸ ವ್ಯಕ್ತಿಯಾಗುವ ಅವಕಾಶ ನಿಮಗೆ ಧಕ್ಕುತ್ತದೆ ಎಂದರು. ಪ್ರತಾಪ್ ಸಹ ಸುದೀಪ್ ಮಾತಿಗೆ ಧನಾತ್ಮಕವಾಗಿ ಸ್ಪಂದಿಸಿದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ  ಹಾಗೂ ಜಿಯೋ ಸಿನಿಮಾಸ್​ನಲ್ಲಿ ದಿನದ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 pm, Sat, 14 October 23