
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಆರಂಭದಲ್ಲೇ ಕೆಲವು ಸ್ಪರ್ಧಿಗಳಿಗೆ ಢವಢವ ಶುರುವಾಗಿದೆ. ಮೊದಲ ದಿನವೇ ಹಲವರನ್ನು ನಾಮಿನೇಟ್ ಮಾಡಲಾಗಿದೆ. ಮಂಜ, ಅವಿನಾಶ್, ಲಿಖಿತ್, ಧನುಷ್, ಕಿರಣ್ ಶಾಸ್ತ್ರಿ, ವೈಷ್ಣವಿ, ಸೌಂದರ್ಯಾ ಶೆಟ್ಟಿ, ಪ್ರಥಮಾ ಪ್ರಸಾದ್ ಅವರು ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಒಬ್ಬರು ಬಿಗ್ ಬಾಸ್ ಮನೆಯೊಳಗೆ ಕಾಲಿಡದೆಯೇ ಎಲಿಮಿನೇಟ್ ಆಗಲಿದ್ದಾರೆ ಎಂದು ಸೂಚನೆ ನೀಡಲಾಗಿದೆ. ಆದ್ದರಿಂದ ವೀಕ್ಷಕರಿಗೂ ಈ ಬಗ್ಗೆ ಭಾರಿ ಕುತೂಹಲ ನಿರ್ಮಾಣ ಆಗಿದೆ.
ಮೊದಲು ಎಲ್ಲರನ್ನೂ ವಿಮಾನದಲ್ಲಿ ಇರಿಸಲಾಗಿತ್ತು. ಬಳಿಕ ಒಂದು ಚಟುವಟಿಕೆ ನೀಡಿ ಕೆಲವರನ್ನು ಬಿಗ್ ಬಾಸ್ ಮನೆಯ ಒಳಗೆ ಕಳಿಸಲಾಯಿತು. ಕಾವ್ಯಾ, ಸಂಗೀತಾ ಭಟ್, ಓಂ ಪ್ರಕಾಶ್ ರಾವ್, ಜಗ್ಗ ಮಮ್ಮಿ, ಗಗನ ಚಿನ್ನಪ್ಪ, ಆಸಿಯಾ, ತಾಂಡವ್ ರಾಮ್, ಯಶಸ್ ಕೃಷ್ಣ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ. ಆದರೆ ಅದರಲ್ಲೂ ಒಂದು ಟ್ವಿಸ್ಟ್ ಇದೆ.
ಒಂದು ವೇಳೆ, ಬಿಗ್ ಬಾಸ್ ಮನೆಗೆ ಈಗಾಗಲೇ ಎಂಟ್ರಿ ಪಡೆದಿರುವ ಸ್ಪರ್ಧಿಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ವಿಫಲವಾದರೆ ಅಂಥವರನ್ನು ಮತ್ತೆ ವಿಮಾನದ ಒಳಗೆ ಕಳಿಸಲಾಗುತ್ತದೆ. ಆಗ ಅವರು ಕೂಡ ನಾಮಿನೇಟ್ ಆಗುತ್ತಾರೆ. ಅದೇ ರೀತಿ, ವಿಮಾನದಲ್ಲಿ ಇರುವವರು ಚೆನ್ನಾಗಿ ಆಟ ಆಡಿದರೆ ಬಿಗ್ ಬಾಸ್ ಮನೆಯ ಒಳಗೆ ಬರುವ ಅವಕಾಶ ಪಡೆಯುತ್ತಾರೆ.
ಅಗ್ನಿಪರೀಕ್ಷೆ ಮೂಲಕ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿರುವ ಮಂಜ, ಕಿರಣ್ ಶಾಸ್ತ್ರಿ, ಲಿಖಿತ್, ಧನುಷ್ ಅವರು ಇನ್ನೂ ಸರಿಯಾಗಿ ದೊಡ್ಮನೆ ಒಳಗೆ ಕಾಲಿಟ್ಟಿಲ್ಲ. ತಮ್ಮ ಸಾಮರ್ಥ್ಯ ಏನು ಎಂಬುದನ್ನು ನಿರ್ಧರಿಸುವ ಮೊದಲೇ ನಾಮಿನೇಟ್ ಮಾಡಿರುವುದಕ್ಕೆ ಅವರ ಪೈಕಿ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಪ್ರಥಮಾ ಪ್ರಸಾದ್ಗೆ ಬಾಡಿ ಶೇಮಿಂಗ್ ಮಾಡಿ ವಿವಾದಕ್ಕೆ ಸಿಲುಕಿದ ಕಿರಣ್ ಶಾಸ್ತ್ರಿ
ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಎಲ್ಲ ಸ್ಪರ್ಧಿಗಳು ಕಷ್ಟಪಡಬೇಕಿದೆ. ಅದರಲ್ಲೂ ವಿಮಾನದಲ್ಲೇ ಉಳಿದಿರುವ ಸ್ಪರ್ಧಿಗಳು ಹೆಚ್ಚು ಶ್ರಮ ಹಾಕಬೇಕಿದೆ. ಕೆಲವು ಸ್ಪರ್ಧಿಗಳು ಇನ್ನೂ ಮಾತನಾಡಲು ಆರಂಭಿಸಿಲ್ಲ. ಆದರೆ ಬಿಗ್ ಬಾಸ್ ಮನೆಯಲ್ಲಿ ವಿಳಂಬಕ್ಕೆ ಅವಕಾಶ ಇಲ್ಲ. ನೋಡನೋಡುತ್ತಿದ್ದಂತೆಯೇ ಮೊದಲ ವೀಕೆಂಡ್ ಬಂದೇ ಬರುತ್ತದೆ. ಎಲಿಮಿನೇಷನ್ ಖಂಡಿತವಾಗಿ ನಡೆಯುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.