AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಸಿನಿಮಾದಲ್ಲೂ ‘ಕಾಮನ್ ಮ್ಯಾನ್’ ಸದ್ದು

ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗಲ್ ಮುಂತಾದ ಗಾಯಕರು ‘ಕಾಮನ್ ಮ್ಯಾನ್’ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇದು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ 106ನೇ ಸಿನಿಮಾ. ಗೌರಿ ಶಂಕರ್ ನಟಿಸಿರುವ ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. 4 ಹಾಡುಗಳನ್ನು ಇತ್ತೀಚೆಗೆ ರಿಲೀಸ್ ಮಾಡಲಾಯಿತು.

ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಸಿನಿಮಾದಲ್ಲೂ ‘ಕಾಮನ್ ಮ್ಯಾನ್’ ಸದ್ದು
Common Man Movie Team Image Credit source: Tv9 Kannada
ಮದನ್​ ಕುಮಾರ್​
|

Updated on:Sep 07, 2026 | 7:34 PM

Share

ಇತ್ತೀಚೆಗಷ್ಟೇ ಶುರುವಾಗಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋಗೆ ಕಾಮನ್ ಮ್ಯಾನ್ ಎಂಟ್ರಿ ಆಗಿದೆ. ಇದು ಕಿರುತೆರೆಯ ಕಾಮನ್ ಮ್ಯಾನ್ ವಿಷಯವಾದರೆ, ಹಿರಿತೆರೆಯಲ್ಲೂ ಸದ್ದು ಮಾಡಲು ‘ಕಾಮನ್ ಮ್ಯಾನ್’ ಸಿದ್ಧನಾಗಿದ್ದಾನೆ. ಹೌದು, ಗೌರಿ ಶಂಕರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಾಮನ್ ಮ್ಯಾನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸೆಪ್ಟೆಂಬರ್ 25ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಸಾಮಾನ್ಯ ಮನುಷ್ಯನೊಬ್ಬ ರಾಜ್ಯದ ಸಿಎಂ ಆದರೆ ಹೇಗೆ ಆಡಳಿತ ನಡೆಸುತ್ತಾನೆ? ಅವನು ಎದುರಿಸುವ ಸವಾಲುಗಳೇನು ಎಂಬುದನ್ನು ‘ಕಾಮನ್ ಮ್ಯಾನ್’ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಸೋಷಿಯಲ್ ವರ್ಕರ್ ಎನ್. ನರಸಿಂಹಮೂರ್ತಿ ಅವರು ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಅಲ್ಲದೇ, ‘ಸುರಭಿ ಫಿಲ್ಮ್ಸ್’ ಮೂಲಕ ಅವರೇ ನಿರ್ಮಾಣ ಕೂಡ ಮಾಡಿದ್ದಾರೆ.

ಇತ್ತೀಚೆಗೆ ‘ಕಾಮನ್ ಮ್ಯಾನ್’ ಸಿನಿಮಾದ ನಾಲ್ಕು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಉಮಾಶ್ರೀ, ವಿನೋದ್ ಪ್ರಭಾಕರ್, ರಮೇಶ್ ಭಟ್ ಹಾಗೂ ಪ್ರಿಯಾಂಕಾ ಉಪೇಂದ್ರ ಅವರು ಈ 4 ಹಾಡುಗಳನ್ನು ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ವಿನಯ ಚಂದ್ರ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಜೆ‌.ಜಿ. ಕೃಷ್ಣ ಮತ್ತು ದೀಪಕ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಥ್ರಿಲ್ಲರ್ ಮಂಜು ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.

ನಾಯಕ ನಟ ಗೌರಿಶಂಕರ್ ಅವರು ಮಾತನಾಡಿ, ‘ಪ್ರತಿ ಮನುಷ್ಯನಲ್ಲೂ ಒಂದು ಆಸೆ ಎಂಬುದು ಇರುತ್ತದೆ. ಅದೇ ರೀತಿ ಒಬ್ಬ ಕಾಮನ್ ಮ್ಯಾನ್ ಈ ರಾಜ್ಯದ ಸಿಎಂ ಆಗಿ ಏನು ಮಾಡಬಹುದು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ’ ಎಂದರು. ಈ ಚಿತ್ರಕ್ಕೆ ಸೋನಾ ಲದ್ವಾ ಅವರು ನಾಯಕಿ ಆಗಿದ್ದಾರೆ. ಹಿರಿಯ ನಟ ಅಶೋಕ್ ಅವರು ರಾಜ್ಯಪಾಲರ ಪಾತ್ರವನ್ನು ಮಾಡಿದ್ದಾರೆ. ಗಣೇಶ ರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್

ನಟಿ ಉಮಾಶ್ರೀ ಅವರು ಮಾತನಾಡಿ, ‘ಈ ಚಿತ್ರದ ಹೆಸರು ಕಾಮನ್ ಮ್ಯಾನ್. ಇಂಗ್ಲಿಷ್ ಹೆಸರು ಏಕೆ ಅಂತ ಕೆಲವರು ಪ್ರಶ್ನಿಸಬಹುದು. ಇವತ್ತು ನಮ್ಮ ಕನ್ನಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿ ಹೆಸರು ಮಾಡುತ್ತಿವೆ. ಹಾಗಾಗಿ ಕಾಮನ್ ಟೈಟಲ್ ಇಡಲೇಬೇಕಾಗುತ್ತೆ. ಸಾಯಿ ಪ್ರಕಾಶ್ ಅವರು ನನ್ನ ಗುರುಗಳ ಥರ. ಈ ಕಾರ್ಯಕ್ರಮಕ್ಕೆ ಅವರು ಕರೆದಾಗ ಇಲ್ಲ ಎನ್ನಲಾಗಲಿಲ್ಲ’ ಎಂದರು.

‘ನಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ‌. ಅದನ್ನು ಮಟ್ಟ ಹಾಕುವುದನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ’ ಎಂದು ರಮೇಶ್ ಭಟ್ ಹೇಳಿದರು. ವಿನೋದ್ ಪ್ರಭಾಕರ್ ಮಾತನಾಡಿ, ‘ನನ್ನ ತಂದೆಯ ಜತೆ ಕೆಲಸ ಮಾಡಿದ ಎಲ್ಲರನ್ನೂ ಈ ವೇದಿಕೆಯಲ್ಲಿ ನೋಡಿ ಸಂತೋಷವಾಯಿತು’ ಎಂದರು. ಚಿತ್ರದ ಹಾಡುಗಳನ್ನು ಪ್ರಿಯಾಂಕಾ ಉಪೇಂದ್ರ ಮೆಚ್ಚಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:22 pm, Mon, 7 September 26

Follow Us