‘ನಾವು ಮಾನವೀಯತೆ ಅಂತ ಹೋದರೆ ನಮ್ಮ ಮುಂದೆಯೇ ಹಳ್ಳ ತೋಡುತ್ತಾರೆ’: ವರ್ತೂರು ಸಂತೋಷ್​

ಇಷ್ಟು ದಿನಗಳ ಕಾಲ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್​ ಅವರ ನಡುವೆ ಆಪ್ತತೆ ಬೆಳೆದಿತ್ತು. ಆದರೆ ಈಗ ಅವರಿಬ್ಬರ ನಡುವೆ ಬಿರುಕು ಮೂಡಿದೆ. ತನಿಷಾಗೆ ತಾವು ಮಾನವೀಯತೆ ತೋರಿಸಲು ಸಾಧ್ಯವಿಲ್ಲ ಎಂದು ವರ್ತೂರು ಸಂತೋಷ್​ ಅವರು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..

‘ನಾವು ಮಾನವೀಯತೆ ಅಂತ ಹೋದರೆ ನಮ್ಮ ಮುಂದೆಯೇ ಹಳ್ಳ ತೋಡುತ್ತಾರೆ’: ವರ್ತೂರು ಸಂತೋಷ್​
ವರ್ತೂರು ಸಂತೋಷ್​, ತನಿಷಾ ಕುಪ್ಪಂಡ

Updated on: Dec 04, 2023 | 2:43 PM

ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ (Varthur Santhosh) ಅವರ ಆಟದ ವೈಖರಿ ಈಗ ಬದಲಾಗಿದೆ. ಆರಂಭದಲ್ಲಿ ಸುಮ್ಮನೆ ಇರುತ್ತಿದ್ದ ಅವರು ಈಗ ಸಖತ್​ ಜೋರಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ‘ಕಲರ್ಸ್ ಕನ್ನಡ’ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಡಿಸೆಂಬರ್​ 4ರ ಸಂಚಿಕೆಯಲ್ಲಿ ವರ್ತೂರು ಸಂತೋಷ್​ ಅವರು ಸಿಕ್ಕಾಪಟ್ಟೆ ನೇರವಾಗಿ ಮಾತನಾಡುತ್ತಾರೆ. ನಾಮಿನೇಷನ್​ ವಿಚಾರ ಬಂದಾಗ ತನಿಷಾ ಕುಪ್ಪಂಡ (Tanisha Kuppanda) ಅವರಿಗೂ ವರ್ತೂರು ಸಂತೋಷ್​ ಮುಲಾಜು ತೋರಿಸಿಲ್ಲ. ಅವರ ಈ ವರ್ತನೆ ನೋಡಿ ತನಿಷಾಗೆ ಶಾಕ್​ ಆಗಿದೆ. ಅಷ್ಟೇ ಅಲ್ಲ, ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಇರುವ ಇತರೆ ಸ್ಪರ್ಧಿಗಳೂ ಅಚ್ಚರಿಪಟ್ಟಿದ್ದಾರೆ. ಅಷ್ಟಕ್ಕೂ ವರ್ತೂರು ಸಂತೋಷ್​ ಹೇಳಿದ್ದೇನು? ಇಲ್ಲಿದೆ ವಿವರ..

ಸೋಮವಾರ ಬಂತೆಂದರೆ ನಾಮಿಷನ್​ ಪ್ರಕ್ರಿಯೆ ಶುರುವಾಗುತ್ತದೆ. ಯಾರು ಎಲಿಮಿನೇಟ್​ ಆಗಬೇಕು ಎಂಬುದಕ್ಕೆ ಸ್ಪರ್ಧಿಗಳ ಹೆಸರನ್ನು ನಾಮಿನೇಟ್​ ಮಾಡುವ ಸಂದರ್ಭ ಬಂದಾಗ ಎಲ್ಲರೂ ನಿಷ್ಠುರವಾಗಿ ನಡೆದುಕೊಳ್ಳುತ್ತಾರೆ. 9ನೇ ವಾರದಲ್ಲೂ ಹಾಗೆಯೇ ಆಗಿದೆ. ಅದರಲ್ಲೂ ವರ್ತೂರು ಸಂತೋಷ್​ ಅವರು ತನಿಷಾ ಕುಪ್ಪಂಡ ವಿರುದ್ಧವೇ ತಿರುಗಿ ಬಿದ್ದಿರುವುದು ಅಚ್ಚರಿಗೆ ಕಾರಣ ಆಗಿದೆ. 8ನೇ ವಾರದಲ್ಲಿ ತನಿಷಾಗೆ ಪೆಟ್ಟಾಗಿತ್ತು. ಆದರೂ ಕೂಡ ನಾಮಿನೇಷನ್​ ವಿಚಾರದಲ್ಲಿ ತಾವು ಮಾನವೀಯತೆ ತೋರಿಸಲು ಸಾಧ್ಯವಿಲ್ಲ ಎಂದು ವರ್ತೂರು ಸಂತೋಷ್​ ಅವರು ಹೇಳಿದ್ದಾರೆ.

‘ತನಿಷಾಗೆ ಇನ್ನೂ ಕಾಲು ನೋವು ಇದೆ. ಹಾಗಾಗಿ ಅವಳನ್ನೇ ಸೇವ್​ ಮಾಡಿ’ ಎಂದು ಕಾರ್ತಿಕ್ ಮಹೇಶ್​ ಅವರು ಕ್ಯಾಪ್ಟನ್​ ಆದ ಸ್ನೇಹಿತ್​ ಬಳಿ ಕೇಳಿಕೊಂಡರು. ಅದಕ್ಕೆ ವರ್ತೂರು ಸಂತೋಷ್​ ಒಪ್ಪಿಕೊಳ್ಳಲಿಲ್ಲ. ‘ತ್ಯಾಗಮೂರ್ತಿಗಳಾಗಲು ನಾವು ಇಲ್ಲಿಗೆ ಬಂದಿಲ್ಲ. ತನಿಷಾ ಅವರನ್ನು ನಾನು ಬೇಕಂತಲೇ ಹೋಗಿ ತಳ್ಳಿಲ್ಲ. ಅದಕ್ಕಾಗಿ ತನಿಷಾಗೆ ಇನ್ನೊಂದು ಚಾನ್ಸ್​ ಸಿಗಲಿ ಅಂತ ನಾನು ಕೇಳಲ್ಲ. ನಾವು ಮಾನವೀಯತೆ ಅಂತ ಹೋದರೆ ನಮ್ಮ ಹಿಂದೆ ಅಲ್ಲ.. ಮುಂದೆಯೇ ಹಳ್ಳ ತೋಡಿರುತ್ತಾರೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್​ ಜೈಲಿನಿಂದ ಎಸ್ಕೇಪ್​ ಆಗಿದ್ದು ಹೇಗೆ? ಇಲ್ಲಿದೆ ವಿಡಿಯೋ

ವರ್ತೂರು ಸಂತೋಷ್​ ಅವರ ಈ ಮಾತಿನಿಂದ ನಮ್ರತಾ ಗೌಡ ಅವರಿಗೆ ಸಖತ್​ ಖುಷಿ ಆಗಿದೆ. ಅವರು ಚಪ್ಪಾಳೆ ಹೊಡೆದು ಬೆಂಬಲ ಸೂಚಿಸಿದ್ದಾರೆ. ಆದರೆ ತನಿಷಾ ಕುಪ್ಪಂಡ ಅವರಿಗೆ ತೀವ್ರ ಅಸಮಾಧಾನ ಆಗಿದೆ. ಅದಕ್ಕೆ ಅವರು ಕೂಡಲೇ ತಿರುಗೇಟು ನೀಡಿದ್ದಾರೆ. ‘ಈಗ ಒಂದು ವಾರದಿಂದ ಮಾತನಾಡುತ್ತಿರುವ ವರ್ತೂರು ಸಂತೋಷ್​ ಅವರು ಮೊದಲ ದಿನದಿಂದಲೇ ಮಾತನಾಡಿದ್ದರೆ ನಾನು ಈ ಮಾತನ್ನು ಮೆಚ್ಚಿಕೊಳ್ಳುತ್ತಿದ್ದೆ’ ಎಂದು ತನಿಷಾ ಹೇಳಿದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಡಿಸೆಂಬರ್​ 4ರಂದು ರಾತ್ರಿ 9.30ಕ್ಕೆ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ’ ಸಿನಿಮಾದಲ್ಲಿ ಫ್ರೀ ಆಗಿ ಲೈವ್​ ನೋಡಲು ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us