AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಡ್ಡ ಎಂದು ಹೀಯಾಳಿಸಿದ ಜಾಹ್ನವಿ: ಡಬಲ್ ಶಾಕ್ ತಾಳಲಾಗದೇ ಬಿಕ್ಕಿ ಬಿಕ್ಕಿ ಅತ್ತ ಮಾಳು

ರಕ್ಷಿತಾ ಶೆಟ್ಟಿ, ಸ್ಪಂದನಾ, ಧ್ರುವಂತ್, ಜಾಹ್ನವಿ ಮುಂತಾದವರು ಮಾಳು ನಿಪನಾಳಗೆ ಕಳಪೆ ಪಟ್ಟ ನೀಡಿದರು. ಈ ವೇಳೆ ಜಾಹ್ನವಿ ಅವರು ಮಾಳುಗೆ ದಡ್ಡ ಎಂಬ ಪದ ಬಳಸಿದರು. ಅದಕ್ಕೆ ಸೂರಜ್ ಸಿಂಗ್ ಆಕ್ಷೇಪ ಎತ್ತಿದರು. ಮಾಳು ನಿಪನಾಳ ಅವರು ಕಳಪೆ ಆಗಿ ಜೈಲು ಸೇರಿದ್ದಾಗಲೇ ಇನ್ನೊಂದು ನೋವಿನ ಸಂಗತಿ ಕೂಡ ಎದುರಾಯಿತು.

ದಡ್ಡ ಎಂದು ಹೀಯಾಳಿಸಿದ ಜಾಹ್ನವಿ: ಡಬಲ್ ಶಾಕ್ ತಾಳಲಾಗದೇ ಬಿಕ್ಕಿ ಬಿಕ್ಕಿ ಅತ್ತ ಮಾಳು
Malu Nipanal
ಮದನ್​ ಕುಮಾರ್​
|

Updated on: Nov 14, 2025 | 11:23 PM

Share

ಉತ್ತರ ಕರ್ನಾಟಕದ ಸಿಂಗರ್ ಮಾಳು ನಿಪನಾಳ ಅವರು ಕಳೆದ ವಾರ ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಹಾಗಾಗಿ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಕ್ಕಿದ್ದವು. ತಮ್ಮ ಅಧಿಕಾರ ಬಳಸಿಕೊಂಡು 6 ಜನರನ್ನು ಅವರು ನಾಮಿನೇಟ್ ಮಾಡಿದ್ದರು. ಆದರೆ ನಾಮಿನೇಟ್ ಮಾಡುವಾಗ ಮಾಳು (Malu Nipanal) ನೀಡಿದ ಕಾರಣಗಳನ್ನು ಅವರೆಲ್ಲ ವಿರೋಧಿಸಿದ್ದರು. ಜಾಹ್ನವಿ (Jahnavi) ಅವರು ತುಸು ಹೀನಾಯವಾಗಿ ಮಾತನಾಡಿದರು. ಮಾಳು ಅವರನ್ನು ದಡ್ಡ ಎಂದು ಹಲವು ಬಾರಿ ಜರಿದರು. ಅಲ್ಲದೇ, ಕಳಪೆ ನೀಡುವಾಗಲೂ ಅವರು ದಡ್ಡ ಎಂಬ ಪದ ಪ್ರಯೋಗ ಮಾಡಿದರು. ಬಳಿಕ ಮಾಳು ಅವರಿಗೆ ಇನ್ನೊಂದು ಶಾಕ್ ಕೂಡ ಎದುರಾಯಿತು.

ಬಿಗ್ ಬಾಸ್ ಮನೆಯ ಹಲವರು ಕಳಪೆ ಪಟ್ಟಕ್ಕೆ ಮಾಳು ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಅವರಿಗೆ ಜೈಲು ವಾಸ ನೀಡಲಾಯಿತು. ಕ್ಯಾಪ್ಟನ್ ಆದ ಬೆನ್ನಲ್ಲೇ ಮಾಳು ಅವರು ಜೈಲು ಸೇರುವಂತಾಗಿದ್ದು ಬೇಸರ ಉಂಟುಮಾಡಿತು. ಮಾಳು ಜೈಲು ಸೇರಿದ್ದು ಒಂದು ಶಾಕ್ ಆದರೆ, ಜೈಲಿನಲ್ಲಿ ಇದ್ದಾಗಲೇ 2ನೇ ಶಾಕ್ ಎದುರಾಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಿಗಳ ಮಕ್ಕಳ ವಿಡಿಯೋಗಳನ್ನು ಬಿಗ್ ಬಾಸ್ ಮನೆಯೊಳಗಿನ ಟಿವಿಯಲ್ಲಿ ಹಾಕಲಾಯಿತು. ಆದರೆ ಮಾಳು ಅವರು ಜೈಲಿನಲ್ಲಿ ಇದ್ದ ಕಾರಣದಿಂದ ಅವರಿಗೆ ಈ ವಿಡಿಯೋ ನೋಡಲು ಸಾಧ್ಯವಾಗಲೇ ಇಲ್ಲ.

ವಿಡಿಯೋ ಪ್ಲೇ ಆಗುವುದರೊಳಗೆ ಅವರನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರಲು ರಘು ಅವರು ಪ್ರಯತ್ನಿಸಿದರು. ಅಷ್ಟರಲ್ಲಾಗಲೇ ವಿಡಿಯೋ ಮುಗಿದು ಹೋಗಿತ್ತು. ಮತ್ತೊಮ್ಮೆ ಪ್ಲೇ ಮಾಡಿ ಎಂದು ಎಲ್ಲರೂ ಮನವಿ ಮಾಡಿಕೊಂಡರೂ ಕೂಡ ಬಿಗ್ ಬಾಸ್ ಅದಕ್ಕೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಮಾಳು ಅವರಿಗೆ ಸಿಕ್ಕಾಪಟ್ಟೆ ಬೇಸರ ಆಯಿತು.

ನಿರಾಸೆಯಿಂದ ಪುನಃ ಜೈಲಿನ ಒಳಗೆ ಹೋದ ಮಾಳು ನಿಪನಾಳ ಅವರಿಗೆ ತುಂಬಾ ಅಳು ಬಂತು. ಮಕ್ಕಳನ್ನು ಮಿಸ್ ಮಾಡಿಕೊಂಡು ಅವರು ಬಿಕ್ಕಿ ಬಿಕ್ಕಿ ಅತ್ತರು. ಮಾಳು ಅವರ ಪರಿಸ್ಥಿತಿ ಕಂಡು ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರಿಗೂ ಬೇಸರ ಆಯಿತು. ಒಂದು ವೇಳೆ ಮಾಳು ಅವರಿಗೆ ಕಳಪೆ ಪಟ್ಟ ಸಿಗದೇ ಹೋಗಿದ್ದರೆ ಅವರು ತಮ್ಮ ಮಕ್ಕಳ ವಿಡಿಯೋವನ್ನು ನೋಡಬಹುದಿತ್ತು.

ಇದನ್ನೂ ಓದಿ: ಕಣ್ಣೀರು ಸುರಿಸುತ್ತ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಒಂದಾಗ ಅಶ್ವಿನಿ ಗೌಡ, ಜಾಹ್ನವಿ

ಮಾಳುಗೆ ಕಳಪೆ ನೀಡುವಾಗ ಜಾಹ್ನವಿ ಅವರು ‘ಒಬ್ಬ ಕ್ಯಾಪ್ಟನ್ ಆದವನಿಗೆ ಬುದ್ಧಿ ಇರಬೇಕು. ಅಹಂಕಾರಿ ಆದರೂ ಒಪ್ಪಿಕೊಳ್ಳಬಹುದು, ಆದರೆ ಆತ ದಡ್ಡನಾದರೆ ಅದರಿಂದ ಸಮರ್ಥರ ಆಟಕ್ಕೂ ತೊಂದರೆ ಆಗುತ್ತದೆ’ ಎಂದು ಹೇಳಿದರು. ಅವರು ದಡ್ಡ ಎಂಬ ಪದ ಬಳಸಿದ್ದನ್ನು ಸೂರಜ್ ಸಿಂಗ್ ವಿರೋಧಿಸಿದರು. ಈ ಬಗ್ಗೆ ವಾರಂತ್ಯದ ಸಂಚಿಕೆಯಲ್ಲಿ ಸುದೀಪ್ ಅವರು ಮಾತನಾಡುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.