‘ನಾನಿನ್ನ ಬಿಡಲಾರೆ’: ಅತ್ತೆ ಮಾಳವಿಕಾಳ ನಿಜರೂಪ ಕಂಡು ಬೆಚ್ಚಿಬಿದ್ದ ದುರ್ಗಾ
ಜೀ ಕನ್ನಡದ 'ನಾನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಮಹಾ ತಿರುವು ಎದುರಾಗಿದೆ. ದುರ್ಗಾ ತನ್ನ ಅತ್ತೆ ಮಾಳವಿಕಾಳ ಅಸಲಿ, ದುಷ್ಟ ಮುಖವಾಡ ಬಯಲಿಗೆಳೆದಿದ್ದಾಳೆ. ಕುಟುಂಬದ ಸರ್ವನಾಶಕ್ಕೆ ಹೊಂಚು ಹಾಕಿದ್ದ ಮಾಳವಿಕಾಳ ನಿಜಬಣ್ಣ ಗೊತ್ತಾಗುತ್ತಿದ್ದಂತೆ, ದುರ್ಗಾ ತನ್ನವರ ರಕ್ಷಣೆಗಾಗಿ ಕೈಯಲ್ಲಿ ತ್ರಿಶೂಲ ಹಿಡಿದು ಭದ್ರಕಾಳಿ ಅವತಾರ ತಾಳಿದ್ದಾಳೆ. ಜೂನ್ ತಿಂಗಳ ಸಂಚಿಕೆಗಳಲ್ಲಿ ಈ ರೋಮಾಂಚಕ ಹೋರಾಟ ಪ್ರಸಾರವಾಗಲಿದೆ.

ಜೀ ಕನ್ನಡ ವಾಹಿನಿಯ ಪ್ರೇಕ್ಷಕರ ನೆಚ್ಚಿನ ‘ನಾನಿನ್ನ ಬಿಡಲಾರೆ’ ಧಾರಾವಾಹಿಯು ಈಗ ಅತ್ಯಂತ ರೋಮಾಂಚನಕಾರಿ ತಿರುವು ಪಡೆದುಕೊಂಡಿದೆ. ಇದುವರೆಗೆ ಯಾರನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ್ದಳೋ, ಯಾರನ್ನು ಮನೆಯ ನಂದಾದೀಪ ಎಂದುಕೊಂಡಿದ್ದಳೋ, ಆ ಅತ್ತೆ ಮಾಳವಿಕಾಳ ಅಸಲಿ ಮುಖವಾಡ ಈಗ ದುರ್ಗಾಳ ಎದುರು ಕಳಚಿ ಬಿದ್ದಿದೆ. ಸದಾ ಒಳ್ಳೆಯವಳಂತೆ ನಟಿಸುತ್ತಿದ್ದ ಅತ್ತೆಯ ನಿಜವಾದ ಬಣ್ಣ ಬಯಲಾಗುತ್ತಿದ್ದಂತೆ ದುರ್ಗಾ ತೀವ್ರ ಆಘಾತಕ್ಕೊಳಗಾಗಿದ್ದಾಳೆ.
ದುರ್ಗಾ ತನ್ನ ಇಡೀ ಬದುಕು, ತನ್ನ ಅಪ್ಪ, ಅಕ್ಕನ ಸಾವು ಎಲ್ಲವೂ ನಿಗೂಢತೆಯಿಂದ ಕೂಡಿದೆ ಎಂದುಕೊಂಡಿರುತ್ತಾಳೆ. ಆದರೆ, ತಾನು ಹೆಜ್ಜೆ ಇಟ್ಟಿರುವ ಈ ಮನೆಯಲ್ಲೂ ಇಷ್ಟೊಂದು ನಿಗೂಢತೆ ಅಡಗಿದೆ ಎಂಬ ಸತ್ಯ ಅವಳಿಗೆ ತಡವಾಗಿ ಅರಿವಾಗಿದೆ. ಈ ಮನೆಯ ಸರ್ವನಾಶಕ್ಕೆ ಹೊಂಚು ಹಾಕುತ್ತಿರುವ ಮುಖ್ಯ ಸೂತ್ರಧಾರಿಯೇ ಅತ್ತೆ ಮಾಳವಿಕಾ ಎಂಬ ಕಹಿ ಸತ್ಯ ಈಗ ಅವಳಿಗೆ ಗೊತ್ತಾಗಿದೆ. ಅತ್ತೆಯ ರೂಪದಲ್ಲಿರುವ ಮಾಳವಿಕಾ, ಕುರಿ ಚರ್ಮ ಹೊದ್ದಿರುವ ನರಿ ಎಂಬುದನ್ನು ದುರ್ಗಾ ಪತ್ತೆಹಚ್ಚಿದ್ದಾಳೆ.
ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿ: ಮಗಳು ಮಿಂಚು ಕಿಡ್ನ್ಯಾಪ್, ಭದ್ರಕಾಳಿ ಅವತಾರ ತಾಳಿದ ಭೂಮಿಕಾ
ತನ್ನ ಅತ್ತೆಯ ದುಷ್ಟ ಶಕ್ತಿಯ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ದುರ್ಗಾ, ಈಗ ಸತ್ಯ ದರ್ಶನದ ಬೆನ್ನಲ್ಲೇ ಉಗ್ರ ರೂಪ ತಾಳಿದ್ದಾಳೆ. ‘ನಿನ್ನ ದುಷ್ಟ ಶಕ್ತಿಯನ್ನು ನಾಶ ಮಾಡಿ ನನ್ನ ಇಡೀ ವಂಶವನ್ನು ನಾನು ಕಾಪಾಡಿಕೊಳ್ಳುತ್ತೇನೆ, ಇದು ನಿನ್ನ ಅಂತ್ಯದ ಆರಂಭ’ ಎಂದು ಮಾಳವಿಕಾಗೆ ಸವಾಲು ಹಾಕಿದ್ದಾಳೆ.
View this post on Instagram
ತನ್ನವರ ರಕ್ಷಣೆಗಾಗಿ ಕೈಯಲ್ಲಿ ತ್ರಿಶೂಲ ಹಿಡಿದು ಭದ್ರಕಾಳಿಯಂತೆ ನಿಂತಿರುವ ದುರ್ಗಾಳ ಈ ಹೊಸ ಅವತಾರ ಜಬರ್ದಸ್ತ್ ಜೂನ್ ಸಂಚಿಕೆಗಳಲ್ಲಿ ಪ್ರಸಾರವಾಗಲಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮಹಾ ತಿರುವಿನೊಂದಿಗೆ ಮೂಡಿಬರುತ್ತಿರುವ ಈ ಸಂಚಿಕೆಗಳು ದುಷ್ಟ ಸಂಹಾರಕ್ಕೆ ಹೊಸ ಮುನ್ನುಡಿ ಬರೆಯಲಿವೆ. ಇತ್ತ, ಮಾಳವಿಕಾ ಹಲವು ದುಷ್ಟ ಶಕ್ತಿಗಳನ್ನು ಕರಗತ ಮಾಡಿಕೊಂಡಿದ್ದು, ಆಕೆ ಇದಕ್ಕೆ ಯಾವ ರೀತಿಯಲ್ಲಿ ತಿರುಮಂತ್ರ ಹಾಕುತ್ತಾಳೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




