ಸುದೀಪ್ ಎದುರೇ ರಿಷಾ ಎಲಿಮಿನೇಷನ್; ಸಾಲುಗಳ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಿಷಾ ಅವರು ಗಿಲ್ಲಿ ಮೇಲೆ ಹಲ್ಲೆ ನಡೆಸಿ, ಪ್ರಮುಖ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಘಟನೆಯು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಿಂದಿನ ಸೀಸನ್ನಲ್ಲಿ ಇಂತಹದ್ದೇ ಘಟನೆಗೆ ಸ್ಪರ್ಧಿಗಳನ್ನು ಹೊರಹಾಕಲಾಗಿತ್ತು. ಆದರೆ ಈ ಬಾರಿ, ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯವನ್ನು ಚರ್ಚಿಸಿ ಸೂಕ್ತ ನ್ಯಾಯ ಒದಗಿಸಲಿದ್ದಾರೆ ಎಂದು ಬಿಗ್ ಬಾಸ್ ಸೂಚನೆ ನೀಡಿದ್ದಾರೆ.

ಭಾರತದ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತದೆ. ಎಲ್ಲಾ ಬಿಗ್ ಬಾಸ್ಗಳಲ್ಲೂ ಮೂಲ ನಿಯಮ ಒಂದೇ ರೀತಿಯಲ್ಲಿ ಇದೆ. ಅದರಲ್ಲಿ ಯಾರ ಮೇಲೂ ಹಲ್ಲೆ ಮಾಡಬಾರದು ಎಂಬುದೂ ಒಂದು. ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ನಿಯಮವನ್ನು ರಿಷಾ (Risha) ಅವರು ಬ್ರೇಕ್ ಮಾಡಿದ್ದಾರೆ. ಗಿಲ್ಲಿ ಮೇಲೆ ಅವರು ಕೈ ಮಾಡಿದ್ದಾರೆ. ಆ ಬಳಿಕ ಅದನ್ನು ತಮಾಷೆಗೆ ಮಾಡಿದ್ದು ಎಂದು ಸಬೂಬು ನೀಡಿದ್ದಾರೆ. ಅವರು ಹೊರಹೋಗಬೇಕು ಎಂದು ಅನೇಕರು ಆಗ್ರಹಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಈಗ ನವೆಂಬರ್ 3ರ ಎಪಿಸೋಡ್ ಕೊನೆಯಲ್ಲಿ ಈ ಬಗ್ಗೆ ದೊಡ್ಡದಾಗಿ ಸೂಚನೆ ನೀಡಲಾಗಿದೆ.
ಕಳೆದ ಸೀಸನ್ ಅಲ್ಲಿ ರಂಜಿತ್ ಹಾಗೂ ಲಾಯರ್ ಜಗದೀಶ್ ಮಧ್ಯೆ ಕಿರಿಕ್ ಆದಾಗ ಸಾಕಷ್ಟು ಚರ್ಚೆಗಳು ನಡೆದವು. ಆ ಕ್ಷಣವೇ ಬಿಗ್ ಬಾಸ್ ಇಬ್ಬರನ್ನೂ ಮನೆಯಿಂದ ಹೊರಕ್ಕೆ ಹಾಕಿದರು. ಈ ಬಾರಿಯೂ ಹಾಗೆಯೇ ಮಾಡಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬಿಗ್ ಬಾಸ್ ಕಡೆಯಿಂದ ಯಾವುದೇ ಆದೇಶ ಬಂದಿಲ್ಲ. ಕೊನೆಯಲ್ಲಿ ಬಿಗ್ ಬಾಸ್ ಸೂಚನೆ ಒಂದನ್ನು ನೀಡಿದ್ದಾರೆ.
ನಡೆದ ಘಟನೆ ಏನು?
ರಿಷಾ ಅವರು ಬಾತ್ರೂಂನಲ್ಲಿ ಸ್ನಾನಕ್ಕೆ ಹೊರಟಿದ್ದರು. ಈ ವೇಳೆ ಬಕೆಟ್ನಲ್ಲಿ ನೀರು ತುಂಬಿಸಿ ಅದನ್ನು ನೀಡೋದಾಗಿ ಗಿಲ್ಲಿಗೆ ಹೇಳಿದ್ದರು. ಬಕೆಟ್ ತುಂಬುತ್ತಿದ್ದಂತೆ ಅವರು ಬಾಗಿಲು ಹಾಕಿಕೊಂಡರು. ಕೇಳಿದ್ದಕ್ಕೆ ಸ್ನಾನ ಆದಮೇಲೆ ಕೊಡುತ್ತೇನೆ ಎಂದರು. ಇದರಿಂದ ಸಿಟ್ಟಾದ ಗಿಲ್ಲಿ ಅವರ ಬಟ್ಟೆಗಳನ್ನು ತಂದು ಬಾತ್ರೂಂ ಹೊರಗೆ ಇಟ್ಟರು. ಇದರಿಂದ ಸಿಟ್ಟಾದ ರಿಷಾ ಅವರು ಗಿಲ್ಲಿಗೆ ಹೊಡೆದಿದ್ದಾರೆ. ಅಲ್ಲದೆ ಅವರನ್ನು ತಳ್ಳಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.
ಇದನ್ನೂ ಓದಿ: ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ; ಅರ್ಧದಲ್ಲೇ ಮನೆಯಿಂದ ಎಲಿಮಿನೇಟ್?
ಬಿಗ್ ಬಾಸ್ ಕೊಟ್ಟ ಸೂಚನೆ ಏನು?
‘ಇಂದಿನ ಸಂಚಿಕೆಯಲ್ಲಿ ಮನೆಯ ಸದಸ್ಯರು ಬಿಗ್ ಬಾಸ್ನ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಎಲ್ಲಾ ನಿಯಮ ಉಲ್ಲಂಘನೆಗಳನ್ನು, ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪರವರು ಚರ್ಚಿಸಿ, ವಿಶ್ಲೇಷಿಸಿ ನ್ಯಾಯ ಒದಗಿಸುತ್ತಾರೆ’ ಎಂದು ಬರೆಯಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




