ನಡೆಯಲೇ ಇಲ್ಲ ಬಿಗ್ ಬಾಸ್ ಎಲಿಮಿನೇಷನ್: ಅನಿರೀಕ್ಷಿತ ಟ್ವಿಸ್ಟ್ ನೀಡಿದ ಕಿಚ್ಚ ಸುದೀಪ್

ಮುಂದಿನ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಮೊದಲ ಫಿನಾಲೆ ನಡೆಯಲಿದೆ. ಮಾಸ್ ಎಲಿಮಿನೇಷನ್ ನಡೆಯುತ್ತದೆ ಎಂದು ಸುದೀಪ್ ಅವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಯಾರು ಮನೆಯಿಂದ ಹೊರಗೆ ಹೋಗುತ್ತಾರೆ, ಯಾರು ಉಳಿಯುತ್ತಾರೆ ಎಂಬುದು 3ನೇ ವಾರ ತಿಳಿಯಲಿದೆ.

ನಡೆಯಲೇ ಇಲ್ಲ ಬಿಗ್ ಬಾಸ್ ಎಲಿಮಿನೇಷನ್: ಅನಿರೀಕ್ಷಿತ ಟ್ವಿಸ್ಟ್ ನೀಡಿದ ಕಿಚ್ಚ ಸುದೀಪ್
Spandana Somanna, Malu Nipanal

Updated on: Oct 12, 2025 | 10:56 PM

ಪ್ರತಿ ಭಾನುವಾರ ಬಂದರೆ ಬಿಗ್ ಬಾಸ್ (Bigg Boss Kannada) ಸ್ಪರ್ಧಿಗಳಿಗೆ ಢವ ಢವ ಶುರುವಾಗುತ್ತಿದೆ. ನಾಮಿನೇಟ್ ಆದ ಸ್ಪರ್ಧಿಗಳ ಪೈಕಿ ಯಾರು ದೊಡ್ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ದಿನ ಇದು. ಮೊದಲ ವಾರದ ಎಲಿಮಿನೇಷನ್​​ನಲ್ಲಿ ಬಾಡಿ ಬಿಲ್ಡರ್ ಕರಿಬಸಪ್ಪ ಮತ್ತು ಆರ್​ಜೆ ಅಮಿತ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು. ಆದರೆ 2ನೇ ವಾರ ದೊಡ್ಡ ಟ್ವಿಸ್ಟ್ ಎದುರಾಯಿತು. ಯಾರೂ ಕೂಡ ಈ ವಾರ ಎಲಿಮಿನೇಟ್ ಆಗುವುದಿಲ್ಲ ಎಂಬುದನ್ನು ಸಂಚಿಕೆಯ ಕೊನೆಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ತಿಳಿಸಿದರು. ಅಲ್ಲದೇ, ಮೊದಲ ಫಿನಾಲೆಯಲ್ಲಿ ಸ್ಪರ್ಧಿಸಲು ಮಾಳು ನಿಪನಾಳ (Malu Nipanal) ಮತ್ತು ಸ್ಪಂದನಾ ಅವರು ಅರ್ಹತೆ ಪಡೆದಿದ್ದಾರೆ ಎಂಬುದನ್ನು ಘೋಷಿಸಿದರು.

ಈ ವಾರ ಅಶ್ವಿನಿ ಎಸ್​ಎನ್​, ಅಭಿಷೇಕ್, ಜಾಹ್ನವಿ, ಸ್ಪಂದನಾ, ಮಾಳು ನಿಪನಾಳ, ರಾಶಿಕಾ ಶೆಟ್ಟಿ, ಮಂಜು ಭಾಷಿಣಿ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧನುಶ್ ಅವರು ನಾಮಿನೇಟ್ ಆಗಿದ್ದರು. ಇಷ್ಟು ಜನರ ಪೈಕಿ ಒಬ್ಬರು ಅಥವಾ ಇಬ್ಬರು ಎಲಿಮಿನೇಟ್ ಆಗುತ್ತಾರೆ ಎಂದು ಮೊದಲು ಹೇಳಲಾಗಿತ್ತು. ಒಬ್ಬೊಬ್ಬರನ್ನಾಗಿಯೇ ಕಿಚ್ಚ ಸುದೀಪ್ ಅವರು ಸೇವ್ ಮಾಡುತ್ತಾ ಬಂದರು.

ಅಂತಿಮ ಹಂತದಲ್ಲಿ ಮಾಳು ನಿಪನಾಳ ಮತ್ತು ಸ್ಪಂದನಾ ಅವರು ಉಳಿದುಕೊಂಡರು. ಅವರೇ ಎಲಿಮಿನೇಟ್ ಆಗುವುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯಲ್ಲಿ ಸುದೀಪ್ ಅವರು ಟ್ವಿಸ್ಟ್ ನೀಡಿದರು. ಅಸಲಿಗೆ, ಮಾಳು ನಿಪನಾಳ ಹಾಗೂ ಸ್ಪಂದನಾ ಎಲಿಮಿನೇಟ್ ಆಗುತ್ತಿಲ್ಲ. ಬದಲಿಗೆ, ಮೊದಲ ಫಿನಾಲೆಯ ಫೈನಲಿಸ್ಟ್ ಆಗಿದ್ದಾರೆ ಎಂದು ಸುದೀಪ್ ತಿಳಿಸಿದರು.

ಈ ವಾರ ವೋಟಿಂಗ್ ಆಗಿರುವುದು ನಿಜ. ನಾಮಿನೇಷನ್​​ನಗೆ ವೋಟಿಂಗ್ ನಡೆದಿದೆ ಎಂದು ಸ್ಪರ್ಧಿಗಳು ಭಾವಿಸಿದ್ದರು. ಆದರೆ ಅಸಲಿಗೆ ಆಗಿದ್ದೇ ಬೇರೆ. ಶೋನಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂಬುದಕ್ಕೆ ಓಟಿಂಗ್ ನಡೆದಿತ್ತು. ಹೆಚ್ಚು ವೋಟ್ ಪಡೆದ ಮಾಳು ನಿಪನಾಳ ಮತ್ತು ಸ್ಪಂದನಾ ಅವರು ಫೈನಲಿಸ್ಟ್ ಆಗಿದ್ದಾರೆ. ಇನ್ನುಳಿದವರು ತಮ್ಮ ಅಸ್ತಿತ್ವಕ್ಕಾಗಿ ಮುಂದಿನ ವಾರ ತುಂಬಾ ಕಷ್ಟಪಡಬೇಕಿದೆ.

ಇದನ್ನೂ ಓದಿ: ಸುದೀಪ್ ಎದುರಲ್ಲಿ ಅಶ್ವಿನಿ ಗೌಡಗೆ ಡವ್ ರಾಣಿ ಎಂದ ಬಿಗ್ ಬಾಸ್ ಸ್ಪರ್ಧಿಗಳು

ಕಳೆದ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ದೊಡ್ಡ ಸವಾಲು ಎದುರಾಗಿತ್ತು. ಶೋ ನಡೆಯುತ್ತಿರುವ ಜಾಲಿವುಡ್ ಸ್ಡುಡಿಯೋಸ್ ಜಾಗದಲ್ಲಿ ಕೆಲವು ನಿಯಮ ಉಲ್ಲಂಘನೆ ಆಗಿದೆ ಎಂಬ ಆರೋಪ ಎದುರಾಗಿತ್ತು. ಹಾಗಾಗಿ ಜಾಲಿವುಡ್ ಸ್ಟುಡಿಯೋಸ್​​ಗೆ ಬೀಗ ಜಡಿಯಲಾಗಿತ್ತು. ಹಾಗಾಗಿ ಎರಡು ದಿನಗಳ ಕಾಲ ಎಲ್ಲ ಬಿಗ್ ಬಾಸ್ ಸ್ಪರ್ಧಿಗಳು ದೊಡ್ಮನೆಯಿಂದ ಹೊರಗೆ ಉಳಿಯಬೇಕಿತ್ತು. ಆದ್ದರಿಂದ ಈ ವಾರ ಸ್ಪರ್ಧಿಗಳಿಗೆ ತಮ್ಮ ಪರ್ಫಾರ್ಮೆನ್ಸ್ ತೋರಿಸಲು ಸರಿಯಾಗಿ ಸಮಯ ಸಿಗಲಿಲ್ಲ. ಆ ಕಾರಣದಿಂದ ಈ ವಾರ ಎಲಿಮಿನೇಷನ್​​ನಿಂದ ರಿಲೀಫ್ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us