ಜೀ ಕನ್ನಡದಲ್ಲಿ ದೈವಿಕ ಸಂಭ್ರಮ: ‘ಶ್ರೀ ರಾಘವೇಂದ್ರ ಮಹಾತ್ಮೆ’ಯಲ್ಲಿ ವೆಂಕಟನಾಥರ ಸನ್ಯಾಸ ದೀಕ್ಷೆ ಸಂಭ್ರಮ
ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿ ರಾಯರ ಪವಿತ್ರ ಜೀವನ ಚರಿತ್ರೆಯನ್ನು ತೆರೆಮೇಲೆ ತರುತ್ತಿದೆ. ಶಂಕುಕರ್ಣನಿಂದ ವೆಂಕಟನಾಥರಾಗಿ ಸನ್ಯಾಸತ್ವ ಸ್ವೀಕರಿಸಿ 'ಶ್ರೀ ರಾಘವೇಂದ್ರ ತೀರ್ಥರು' ಆಗುವ ರೋಚಕ ಕಥೆ ಪ್ರೇಕ್ಷಕರ ಮನ ಗೆದ್ದಿದೆ. ಇತ್ತೀಚೆಗೆ, ಭತ್ತ ಶುದ್ಧೀಕರಣ ಪವಾಡ ಮತ್ತು ವೆಂಕಟನಾಥರ ಸನ್ಯಾಸ ದೀಕ್ಷೆಯ ಭಾವುಕ ಕ್ಷಣಗಳು ಪ್ರಸಾರವಾಗಿ ವೀಕ್ಷಕರ ಮೆಚ್ಚುಗೆ ಗಳಿಸಿವೆ.

ಜೀ ಕನ್ನಡ ವಾಹಿನಿಯಲ್ಲಿ (Zee Kannada) ವಿವಿಧ ರೀತಿಯ ಧಾರಾವಾಹಿಗಳು ಪ್ರಸಾರ ಕಾಣುತ್ತಿರುವುದು ಗೊತ್ತೇ ಇದೆ. ಪಕ್ಕಾ ಫ್ಯಾಮಿಲಿ ಡ್ರಾಮಾಗಳು ಒಂದು ಕಡೆ ಆದರೆ, ಮಾಟ-ಮಂತ್ರದ ಕಥೆ ಮತ್ತೊಂದು ಕಡೆ. ಇದರ ಜೊತೆಗೆ ದೇವರ ಕುರಿತಾದ ಧಾರಾವಾಹಿಗಳು ಕೂಡ ಪ್ರಸಾರ ಕಾಣುತ್ತಿವೆ. ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿ ಎಲ್ಲರ ಮನ ಗೆದ್ದಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಯರ ಪವಿತ್ರ ಜೀವನ ಚರಿತ್ರೆಯನ್ನು ತೆರೆಮೇಲೆ ತಂದಿರುವ ಈ ಸರಣಿಗೆ ಕಿರುತೆರೆ ವೀಕ್ಷಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಯರ ಕಥೆಯು ಶಂಕುಕರ್ಣನ ಜನ್ಮ ರಹಸ್ಯದಿಂದ ಆರಂಭವಾಗಿ ಪ್ರಹ್ಲಾದ, ಬಾಹ್ಲೀಕ ಹಾಗೂ ವ್ಯಾಸರಾಯರ ಅವತಾರಗಳ ನಂತರ, ನಾಲ್ಕನೇ ಜನ್ಮದಲ್ಲಿ ವೆಂಕಟನಾಥರಾಗಿ ರಾಯರು ಧರೆಗೆ ಬಂದ ರೋಚಕ ಕಥಾಹಂದರ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಇತ್ತೀಚೆಗಷ್ಟೇ ಪ್ರಸಾರವಾದ, ರೈತರ ಬಳಿಯಿದ್ದ ಹುಳು ಹಿಡಿದ ಭತ್ತದ ಮೂಟೆಗಳನ್ನು ಮಂತ್ರಾಕ್ಷತೆಯ ಮಹಿಮೆಯಿಂದ ರಾಯರು ಶುದ್ಧೀಕರಿಸಿದ ಪವಾಡದ ದೃಶ್ಯಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದ್ದವು. ಇದರ ಬೆನ್ನಲ್ಲೇ, ಸಂಸಾರದ ಬಂಧನದಲ್ಲಿದ್ದ ವೆಂಕಟನಾಥರು ಸನ್ಯಾಸತ್ವದ ಹಾದಿ ಹಿಡಿಯುವಾಗ ಪತ್ನಿ ಸರಸ್ವತಿ ಅನುಭವಿಸುವ ತಳಮಳ ಮತ್ತು ಭಾವುಕ ಕ್ಷಣಗಳು ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸಿವೆ.
ಇದನ್ನೂ ಓದಿ: ಜೀ ಕನ್ನಡದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್ ಚಾಂಪ್ಸ್’; ಈ ಬಾರಿಯ ವಿಶೇಷತೆ ಏನು?
ತಂಜಾವೂರಿನ ರಾಜ ರಘುನಾಥ ಭೂಪಾಲನ ಸಮ್ಮುಖದಲ್ಲಿ, ಪರಮಪೂಜ್ಯ ಗುರು ಸುಧೀಂದ್ರ ತೀರ್ಥರು ವೆಂಕಟನಾಥರಿಗೆ ಸನ್ಯಾಸ ದೀಕ್ಷೆ ಕರುಣಿಸಿ, ‘ಶ್ರೀ ರಾಘವೇಂದ್ರ ತೀರ್ಥರು’ ಎಂದು ನಾಮಕರಣ ಮಾಡುವ ಆ ದಿವ್ಯ ಪೀಠಾರೋಹಣದ ಕ್ಷಣಗಳು ಈ ವಾರಾಂತ್ಯದಲ್ಲಿ ಪ್ರಸಾರವಾಗಲಿವೆ. ಭಕ್ತಿ ಮತ್ತು ವೈರಾಗ್ಯದ ಮೂರ್ತಿರೂಪದಂತಿರುವ ರಾಯರ ಈ ಪಾತ್ರದಲ್ಲಿ ನಟ ಪರೀಕ್ಷಿತ್ ಅದ್ಭುತವಾಗಿ ನಟಿಸಿದ್ದಾರೆ.
View this post on Instagram
‘ಶ್ರೀ ರಾಘವೇಂದ್ರ ಮಹಾತ್ಮೆ’ ಈಗಾಗಲೇ ಕಿರುತೆರೆ ವೀಕ್ಷಕರನ್ನು ಸಾಕಷ್ಟು ಗಮನ ಸೆಳೆದಿದೆ. ಈಗ ಈ ಸಂಚಿಕೆಯನ್ನು ನೋಡಲು ಕಿರುತೆರೆ ವೀಕ್ಷಕರು ಕಾದಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:22 am, Sat, 13 June 26




