
ಕನ್ನಡ ಕಿರುತೆರೆಯ ಟ್ರೆಂಡ್ ಸೆಟ್ಟರ್, ಖ್ಯಾತ ನಿರ್ದೇಶಕ ಹಾಗೂ ನಟ ಟಿ. ಎನ್. ಸೀತಾರಾಮ್ (TN Seetharam) ತಮ್ಮ ನೆಚ್ಚಿನ ವೀಕ್ಷಕರಿಗಾಗಿ ‘ಮುಂದಿನ ಅಧ್ಯಾಯ’ ಎಂಬ ನೂತನ ವೆಬ್ ಸರಣಿಯೊಂದಿಗೆ ಬರಲು ಸಜ್ಜಾಗಿದ್ದಾರೆ. ಇದು ಯಾವ ಒಟಿಟಿಯಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಒಂದು ಖುಷಿ ಸುದ್ದಿ ಇದೆ. ಇದು ಯೂಟ್ಯೂಬ್ನಲ್ಲಿ ಉಚಿತವಾಗಿ ಸಿಗಲಿದೆ. ‘ಮಾಯಾಮೃಗ’, ‘ಮುಕ್ತ’, ‘ಮನ್ವಂತರ’, ‘ಮಹಾ ಪರ್ವ’ ಹಾಗೂ ‘ಮಗಳು ಜಾನಕಿ’ಯಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಅವರ ‘ಸಿಎಸ್ಪಿ’ ಪಾತ್ರ ಈ ಹೊಸ ವೆಬ್ ಸರಣಿಯ ಪ್ರಮುಖ ಆಕರ್ಷಣೆಯಾಗಿದೆ.
ಈ ವೆಬ್ ಸರಣಿಗೆ ನಿರ್ದೇಶನವನ್ನು ಚಂದನ್ ಶಂಕರ್ ಮಾಡುತ್ತಿದ್ದು, ಟಿ.ಎನ್. ಸೀತಾರಾಮ್ ಅವರೇ ಪ್ರಧಾನ ನಿರ್ದೇಶಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ‘ಮಗಳು ಜಾನಕಿ’ ಧಾರಾವಾಹಿ ಅರ್ಧಕ್ಕೆ ನಿಂತುಹೋಗಿದ್ದರಿಂದ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಅದೇ ಅಭಿಮಾನಿಗಳ ಒತ್ತಾಯ ಹಾಗೂ ಬೇಡಿಕೆಯನ್ನು ಪರಿಗಣಿಸಿ, ಸೀತಾರಾಮ್ ಅವರು ಸಿಎಸ್ಪಿ ಪಾತ್ರದ ಜೊತೆಗೆ ಹಲವು ಹೊಸ ಹಾಗೂ ಹಳೆಯ ಪಾತ್ರಗಳನ್ನು ಜೋಡಿಸಿಕೊಂಡು ಈ ಹೊಸ ಪ್ರಯತ್ನ ಮಾಡುತ್ತಿದ್ದಾರೆ.
‘ಮುಂದಿನ ಅಧ್ಯಾಯ’ ಸರಣಿಯು ಕಿರುತೆರೆಯ ಧಾರಾವಾಹಿಗಳಂತೆಯೇ ದಿನನಿತ್ಯ ನಿಗದಿತ ಸಮಯಕ್ಕೆ ಯೂಟ್ಯೂಬ್ನಲ್ಲಿ ಪ್ರಸಾರವಾಗಲಿದೆ. ಪ್ರತಿ ಸೀಸನ್ ಮುಗಿದ ನಂತರ ವೀಕ್ಷಕರು ಎಲ್ಲಾ ಸಂಚಿಕೆಗಳನ್ನು ಒಟ್ಟಿಗೇ ವೀಕ್ಷಿಸಬಹುದಾಗಿದೆ. ಈ ಹೊಸ ಅಧ್ಯಾಯದಲ್ಲಿ ಶ್ಯಾಮಲತ್ತೆ, ಭಾರ್ಗಿ, ಶಂಕರ್ ಮೂರ್ತಿ, ಶಾರ್ದೂಲ್ ಹಾಗೂ ಗುರುದಾಸ್ ಅಂತಹ ಪಾತ್ರ ಇರಲಿದೆ.
ಭಾರ್ಗಿ ಪಾತ್ರ ಮಾಡುತ್ತಿದ್ದ ಹಿರಿಯ ನಟ ಮಂಡ್ಯ ರವಿ ನಿಧನ ಹೊಂದಿದ್ದು ಅವರ ಜಾಗದಲ್ಲಿ ಹನುಮಂತೇಗೌಡ ಅವರು ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಶೂಟಿಂಗ್ ಕಾರ್ಯಗಳು ಆರಂಭವಾಗಿದ್ದು, ಶೀಘ್ರದಲ್ಲೇ ಪ್ರಸಾರ ದಿನಾಂಕ ಹೊರಬೀಳಲಿದೆ.
ಇದನ್ನೂ ಓದಿ: ‘ದಿ ಡೈಲಿ ಡ್ರಾಪ್’ ಕೋರ್ಟ್ ರೂಮ್ ಸೀರೀಸ್ಗೆ ಟಿಎನ್ ಸೀತಾರಾಮ್ ಪುತ್ರಿ ಅಶ್ವಿನಿ ನಿರ್ದೇಶನ
ಒಂದು ಸೀಸನ್ನಿಂದ ಮತ್ತೊಂದು ಸೀಸನ್ಗೆ ಕನೆಕ್ಷನ್ ಇರಲಿದೆ. ಕಥೆಯಲ್ಲಿ ಹೆಚ್ಚು ಬದಲಾವಣೆ ಇರೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪಾತ್ರಗಳು ವಾಸ್ತವಕ್ಕೆ ಹತ್ತಿರವಾಗಿರುತ್ತವೆ. ಸದ್ಯಕ್ಕೆ ಶೂಟಿಂಗ್ ಆರಂಭ ಆಗಿದ್ದು, ಮೊದಲ ಸೀಸನ್ ಪ್ರಸಾರ ಕಾಣಲಿದೆ. ಆ ಬಳಿಕ ಎರಡನೇ ಸೀಸನ್ ಪ್ರಸಾರ ಆಗಲಿದೆ.
ಮತ್ತಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Mon, 10 August 26