Weekend With Ramesh: ದತ್ತಣ್ಣ, ವಾಯು ಸೇನೆಯಿಂದ ಚಿತ್ರರಂಗದತ್ತ ಹೊರಳಿಕೊಂಡಿದ್ದು ಹೇಗೆ?

Weekend With Ramesh: ವೀಕೆಂಡ್ ವಿತ್ ರಮೇಶ್​ ಶೋಗೆ ಅತಿಥಿಯಾಗಿ ಆಗಮಿಸಿದ್ದ ನಟ ದತ್ತಣ್ಣ, ತಮ್ಮ ಜೀವನ, ಶಿಕ್ಷಣ, ಸಿನಿಮಾ ಹಾಗೂ ನಾಟಕಗಳಿಗೆ ಪ್ರವೇಶ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದರು.

Weekend With Ramesh: ದತ್ತಣ್ಣ, ವಾಯು ಸೇನೆಯಿಂದ ಚಿತ್ರರಂಗದತ್ತ ಹೊರಳಿಕೊಂಡಿದ್ದು ಹೇಗೆ?
ವೀಕೆಂಡ್ ವಿತ್ ರಮೇಶ್​ನಲ್ಲಿ ದತ್ತಣ್ಣ
Follow us
|

Updated on: Apr 10, 2023 | 8:45 AM

ಎಚ್​ಜಿ ದತ್ತಾತ್ರೆಯ (HG Dattatreya) ಅಲಿಯಾಸ್ ದತ್ತಣ್ಣ (Dattanna) ವೀಕೆಂಡ್ ವಿತ್ ರಮೇಶ್​ (Weekend With Ramesh) ಐದನೇ ಸೀಸನ್​ನ ನಾಲ್ಕನೇ ಅತಿಥಿಯಾಗಿ ಭಾನುವಾರದ ಎಪಿಸೋಡ್​ಗೆ ಆಗಮಿಸಿ ತಮ್ಮ ಜೀವನದ ಹಲವು ಪ್ರಮುಖ ಘಟನೆಗಳನ್ನು ನೆನಪು ಮಾಡಿಕೊಂಡರು. ಚಿತ್ರದುರ್ಗದ ಸಾಮಾನ್ಯ ಹಳ್ಳಿಯಲ್ಲಿ 1942 ರಲ್ಲಿ ಜನಿಸಿದ ದತ್ತಣ್ಣ, ಎಸ್​ಎಸ್​ಎಲ್​ಸಿ, ಪಿಯುಸಿಗಳಲ್ಲಿ ರಾಜ್ಯಕ್ಕೆ ಪ್ರಥಮ. ಐಐಟಿ ಫೀಸು ಕಟ್ಟಲಾಗದೆ ವಿಶ್ವೇಶ್ವರ ವಿವಿಯಲ್ಲಿ ಎಂಜಿನಿಯರ್ ಸೇರಿಕೊಂಡು ಎಂಜಿನಿಯರ್ ಆದ ಆ ಬಳಿಕ ವಾಯುಸೇನೆಯಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ ದತ್ತಣ್ಣ ಸಿನಿಮಾದ ಕಡೆಗೆ ಹೊರಳಿಕೊಂಡಿದ್ದು ಕುತೂಹಲಕಾರಿ ಕತೆ.

ಓದಿನಲ್ಲಿ ಬಹಳ ಮುಂದಿದ್ದರೂ ಸಹ ಕಲೆ ಹಾಗೂ ಕ್ರೀಡೆಯಲ್ಲಿ, ಅದರಲ್ಲಿಯೂ ಕ್ರಿಕೆಟ್ ಬಗ್ಗೆ ದತ್ತಣ್ಣ ಅವರಿಗೆ ಅಪಾರ ಆಸಕ್ತಿ. ಎಂಜಿನಿಯರ್ ಕಲಿಯುವಾಗಲೇ ಕಾಲೇಜು, ಹಾಸ್ಟೆಲ್ ಗೆಳೆಯರೊಟ್ಟಿಗೆ ಸೇರಿ ನಾಟಕಗಳನ್ನು ಮಾಡುತ್ತಿದ್ದರು ದತ್ತಣ್ಣ. ಎಂಜಿನಿಯರ್ ಮುಗಿಸಿದ ಕೂಡಲೇ ವಾಯುಸೇನೆಗೆ ಸೇರಿ ಇಂಡೋ-ಚೀನಾ ಯುದ್ಧದಲ್ಲಿ ಭಾಗವಹಿಸಿದ ದತ್ತಣ್ಣ ಅದಾದ ಬಳಿಕ ವಾಯುಸೇನೆಯಲ್ಲಿ ಹಲವು ಉನ್ನತ, ಜವಾಬ್ದಾರಿಯುತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

ದತ್ತಣ್ಣ ಅವರಿಗೆ ನಾಟಕ, ಸಿನಿಮಾಗಳತ್ತ ಅತಿಯಾದ ಗಮನ ಹರಿದಿದ್ದು ಅವರು ದೆಹಲಿಯಲ್ಲಿದ್ದಾಗಲಂತೆ. ಈಗಿನ ಕರ್ತವ್ಯ ಪಥ್, ಆಗಿನ ರಾಜ್ ಪಥ್​ಗೆ ಸನಿಹದಲ್ಲೇ ಮನೆ ಮಾಡಿಕೊಂಡಿದ್ದ ದತ್ತಣ್ಣಗೆ ಅವರ ಮನೆಯಿಂದ ಕನ್ನಡ ಭವನ, ಎನ್​ಎಸ್​ಡಿ, ರಂಗಮಂಚ, ಸಂಸ್ಕೃತಿ ವೇದಿಕೆ, ಚಿತ್ರಮಂದಿರ ಎಲ್ಲವೂ ಕೂಗಳತೆ ದೂರದಲ್ಲಿದ್ದವಂತೆ. ಪ್ರತಿದಿನ ಒಂದಾದರೂ ನಾಟಕ ನೋಡುತ್ತಿದ್ದ ದತ್ತಣ್ಣ ವಿವಿಧ ದೇಶಗಳ, ಭಾರತದ ವಿವಿಧ ರಾಜ್ಯಗಳ ನಾಟಕಗಳನ್ನು ನೋಡಿ ಅದರಿಂದ ಆಕರ್ಷಿತರಾದರು. ಬಳಿಕ ಅವರೇ ತಂಡ ಕಟ್ಟಿಕೊಂಡು ಬಿಜ್ಜಳ ನಾಟಕ ಮಾಡಿದರು. ಆ ನಾಟಕ ಆಗಿನ ಕಾಲಕ್ಕೆ ವಿವಾದ ಹುಟ್ಟುಹಾಕಿತ್ತು ಆದರೆ ಅದರಿಂದ ದತ್ತಣ್ಣ ಹಾಗೂ ತಂಡ ಜನಪ್ರಿಯವೂ ಆಯಿತು.

ಅದೇ ಸಮಯದಲ್ಲಿ ನಿವೃತ್ತಿಯೂ ಆದ ದತ್ತಣ್ಣ ಅವರು ಬಿಜ್ಜಳ ನಾಟಕವನ್ನು ಬೆಂಗಳೂರಿನಲ್ಲಿ ಹಲವೆಡೆ ಪ್ರದರ್ಶನ ಮಾಡಿದರು. ಅದನ್ನು ಕಂಡ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಮೊದಲ ಬಾರಿಗೆ 1988 ರಲ್ಲಿ ತಮ್ಮ ನಿರ್ದೇಶನದ ಆಸ್ಪೋಟ ಸಿನಿಮಾದಲ್ಲಿ ಅವಕಾಶ ನೀಡಿದರು. ಆ ಸಿನಿಮಾದಲ್ಲಿ ಅವರದ್ದು ವಿಲನ್ ಮಾತ್ರ. ತಮ್ಮ ಮೊದಲ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಪಡೆದ ದತ್ತಣ್ಣ ಆ ಸಿನಿಮಾದ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. 200 ಕ್ಕೂ ಹೆಚ್ಚು ಸಿನಿಮಾಗಳು, 400 ಕ್ಕೂ ಹೆಚ್ಚು ಟಿವಿ ಎಪಿಸೋಡ್​ಗಳಲ್ಲಿ ದತ್ತಣ್ಣ ನಟಿಸಿದ್ದಾರೆ.

ಮೂರು ಬಾರಿ ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿದ್ದಾರೆ ದತ್ತಣ್ಣ. ಅವರ ನಟನೆಯ ಮೌನಿ, ಭಾರತ್ ಸ್ಟೋರ್ಸ್ ಹಾಗೂ ಮುನ್ನುಡಿ ಸಿನಿಮಾಗಳಲ್ಲಿನ ನಟನೆಗೆ ದತ್ತಣ್ಣಗೆ ರಾಷ್ಟ್ರಪ್ರಶಸ್ತಿ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ