
ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಜೀ ಕನ್ನಡ’ ತನ್ನ ವೀಕ್ಷಕರಿಗೆ ಸಾಲು ಸಾಲು ಹೊಸ ಮನರಂಜನೆಯ ಕೊಡುಗೆ ನೀಡಲು ಮುಂದಾಗಿದೆ. ‘ಹೊಸ ಕಥೆಗಳ ಪರ್ವ’ ಹೆಸರಿನಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ 5 ಹೊಚ್ಚ ಹೊಸ ಧಾರಾವಾಹಿಗಳ ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದ್ದು, ಕಿರುತೆರೆ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಶಿವ ಶಕ್ತಿ: ಬಾಕ್ಸಿಂಗ್ ಕನಸು ಹೊತ್ತ ಶಕ್ತಿಗೆ ‘ಶಿವ’ನ ಬೆಂಬಲ ಮತ್ತು ಪ್ರೇರಣೆ ಸಿಕ್ಕರೆ ಏನಾಗಬಹುದು ಎಂಬ ರೋಚಕ ಕ್ರೀಡಾ-ಭಾವನಾತ್ಮಕ ಹಿನ್ನೆಲೆಯ ಕಥೆ ಇದು.
ಅರಸಿ: ಮನೇಲಿ ಕೆಲಸದವಳ ಮಗಳಾಗಿದ್ದರೂ, ತನ್ನ ಗುಣ ಹಾಗೂ ನಡೆಯಿಂದ ಇಡೀ ಊರೇ ಮೆಚ್ಚುವಂತೆ ಬೆಳೆಯುವ ಸ್ವಾಭಿಮಾನಿ ಹುಡುಗಿಯ ಕಥೆಯನ್ನು ‘ಅರಸಿ’ ತರಲಿದೆ.
ರಾಮ್ ಲೀಲಾ: ಒಬ್ಬ ಸೂಪರ್ಸ್ಟಾರ್ ಮತ್ತು ಆತನನ್ನೇ ಅಪಾರವಾಗಿ ಆರಾಧಿಸುವ ಅಭಿಮಾನಿ ಹುಡುಗಿಯ ನಡುವಿನ ಬಾಂಧವ್ಯ ಹಾಗೂ ಕಥಾಹಂದರ ‘ರಾಮ್ ಲೀಲಾ’.
ಮಿಲನ: ಜೀವನದ ತಿರುವುಗಳಲ್ಲಿ ಎದುರಾಗುವ ಹಾಗೂ ನವಜೋಡಿಗಳ ಕಥೆಯನ್ನು ಹೇಳುವ ಪಯಣವೇ ‘ಮಿಲನ’.
ಗೌರಿಪುತ್ರ: ‘ಅಮ್ಮನ ಆಸೆಯೇ ಉಸಿರು’ ಎಂದು ಬದುಕುವ ತಾಯಿ-ಮಗನ ಬಾಂಧವ್ಯವನ್ನು ಎತ್ತಿಹಿಡಿಯುವ ಭಾವನಾತ್ಮಕ ಧಾರಾವಾಹಿ ‘ಗೌರಿಪುತ್ರ’.
ಈ ಎಲ್ಲಾ 5 ಧಾರಾವಾಹಿಗಳು ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದ್ದು, ಶೀಘ್ರದಲ್ಲೇ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಲಿವೆ. ಇದರ ಜೊತೆಗೆ ಮೋಕ್ಷಿತಾ ಪೈ ನಟನೆಯ ‘ಜಗದ್ಧಾತ್ರಿ’ ಧಾರಾವಾಹಿ ಕೂಡ ತೆರೆಗೆ ಬರಲಿದೆ. ಹೊಸ ಐದು ಧಾರಾವಾಹಿಗಳು ಮಧ್ಯಾಹ್ನ ಪ್ರಸಾರ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆ. 2ಕ್ಕೆ ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಆಡಿಷನ್
ಧಾರಾವಾಹಿಗಳ ಹಬ್ಬದ ಜೊತೆಗೆ, ಗ್ರಾಮೀಣ ಸೊಗಡು ಹಾಗೂ ಕದನ ಕುತೂಹಲ ಮೂಡಿಸುವ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್’ ಕೂಡ ಇದೇ ಆಗಸ್ಟ್ 8ರಿಂದ ಪ್ರಸಾರವಾಗಲಿದ್ದು, ವೀಕ್ಷಕರಿಗೆ ಪಕ್ಕಾ ಮನರಂಜನೆ ನೀಡಲಿದೆ. ಅಕುಲ್ ಬಾಲಾಜಿ ಈ ಶೋ ನಡೆಸಿಕೊಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.