ಊಟಕ್ಕೆ ಬಂದವರನ್ನು ಜೈಲಿಗೆ ಕಳಿಸುವ ಟಾಲಿವುಡ್ ನಟ ಧರ್ಮ ಮಹೇಶ್: ಏನಿದು ಕಥೆ?
ತೆಲುಗಿನ ನಟ ಧರ್ಮ ಮಹೇಶ್ ಅವರು ಬೆಂಗಳೂರಿನ ಜನರಿಗೆ ಜೈಲೂಟ ತಿನಿಸುತ್ತಿದ್ದಾರೆ. ಇಷ್ಟು ದಿನ ಗುಂಟೂರು, ಹೈದರಾಬಾದ್ನಲ್ಲಿ ಈ ಕೆಲಸ ಮಾಡುತ್ತಿದ್ದ ಅವರೀಗ ಬೆಂಗಳೂರಿಗೆ ಕಾಲಿಟ್ಟಿದ್ದಾರೆ. ಹಾಗಾದರೆ ಏನಿದು ಜೈಲೂಟ? ಅದಕ್ಕೂ ಧರ್ಮ ಮಹೇಶ್ ಅವರಿಗೆ ಏನು ಸಂಬಂಧ? ಇಲ್ಲಿದೆ ವಿವರ..

ತೆಲುಗು ಚಿತ್ರರಂಗದ ನಟ ಧರ್ಮ ಮಹೇಶ್ (Dharma Mahesh) ಅವರು ‘ಸಿಂಧೂರಂ’, ‘ಡ್ರಿಂಕರ್ ಸಾಯಿ’ ಮುಂತಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಿನಿಮಾದ ಜೊತೆಗೆ ಉದ್ಯಮದಲ್ಲೂ ಅವರು ಆಸಕ್ತಿ ಹೊಂದಿದ್ದಾರೆ. ‘ಜಿಸ್ಮತ್’ ಹೆಸರಿನ ರೆಸ್ಟೋರೆಂಟ್ (Restaurant) ನಡೆಸುವ ಅವರು ಹೊಸ ರೀತಿಯ ಪ್ರಯೋಗದ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿ ಕೂಡ ಧರ್ಮ ಮಹೇಶ್ ಒಡೆತನದ ‘ಜಿಸ್ಮತ್ ಜೈಲ್ ಮಂಡಿ’ (Jismat Jail Mandi) ರೆಸ್ಟೋರೆಂಟ್ ಇದೆ. ಇಲ್ಲಿಗೆ ಬಂದವರು ಜೈಲಿಗೆ ಹೋಗುವುದು ಗ್ಯಾರಂಟಿ!
ಅಸಲಿ ವಿಷಯ ಏನೆಂದರೆ, ಧರ್ಮ ಮಹೇಶ್ ಅವರು ನಡೆಸುತ್ತಿರುವ ಈ ರೆಸ್ಟೋರೆಂಟ್ ಥೀಮ್ ಈ ರೀತಿ ಆಗಿದೆ. ಸಂಪೂರ್ಣ ಜೈಲಿನ ರೀತಿಯಲ್ಲಿ ಈ ರೆಸ್ಟೋರೆಂಟ್ ವಿನ್ಯಾಸಗೊಂಡಿದೆ. ಇಲ್ಲಿಗೆ ಊಟಕ್ಕೆ ಬಂದವರನ್ನು ಜೈಲಿನ ಸೆಲ್ನಲ್ಲಿ ಕೂರಿಸಿ ಬಗೆಬಗೆಯ ನಾನ್-ವೆಜ್ ಊಟ ಬಡಿಸಲಾಗುತ್ತದೆ. ರೆಸ್ಟೋರೆಂಟ್ ಸಿಬ್ಬಂದಿ ಕೂಡ ಕೈದಿಗಳ ರೀತಿಯಲ್ಲಿ ಡ್ರೆಸ್ ಮಾಡಿಕೊಂಡಿರುತ್ತಾರೆ!
ಇಂಥ ವಿಭಿನ್ನ ಥೀಮ್ ಪರಿಚಯಿಸಿದ ಕಾರಣಕ್ಕೆ ನಟ ಧರ್ಮ ಮಹೇಶ್ ಅವರ ‘ಜಿಸ್ಮತ್ ಜೈಲ್ ಮಂಡಿ’ ಬೆಂಗಳೂರಿಗರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ‘ಜಿಸ್ಮತ್ ಜೈಲ್ ಮಂಡಿ’ ಹೊಸ ಖಾತೆ ಇತ್ತೀಚೆಗೆ ಆರಂಭ ಆಯಿತು. ಈ ಸಂಭ್ರಮದಲ್ಲಿ ಧರ್ಮ ಮಹೇಶ್ ಭಾಗಿ ಆಗಿದ್ದರು.
ಈ ಮೊದಲು ಗುಂಟೂರು ಮತ್ತು ಹೈದರಾಬಾದ್ನಲ್ಲಿ ಮಾತ್ರ ‘ಜಿಸ್ಮತ್ ಜೈಲ್ ಮಂಡಿ’ ಇತ್ತು. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮಾತ್ರವಲ್ಲದೇ ಬೇರೆ ರಾಜ್ಯಗಳ ಜನರಿಗೆ ಜೈಲೂಟದ ರುಚಿ ತೋರಿಸುವ ಸಲುವಾಗಿ ಧರ್ಮ ಮಹೇಶ್ ಅವರು ಬೇರೆ ಬೇರೆ ನಗರಗಳಲ್ಲಿ ಖಾತೆ ಆರಂಭಿಸುತ್ತಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಬೆಂಗಳೂರಿನಲ್ಲಿ ಶುರು ಮಾಡಿದ್ದಾರೆ.
ಇದನ್ನೂ ಓದಿ: ಈ ರೆಸ್ಟೋರೆಂಟ್ಗೆ ಹೋದರೆ ನಿಮ್ಮ ಮೊಬೈಲ್ ಬುಟ್ಟಿಗೆ ಹಾಕಬೇಕು!
ಧರ್ಮ ಮಹೇಶ್ ಅವರಿಗೆ ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಇದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ನನ್ನ ಹೃದಯದಲ್ಲಿ ಈ ಊರಿಗೆ ವಿಶೇಷ ಸ್ಥಾನ ಇದೆ. 8ನೇ ತರಗತಿಯಲ್ಲಿ ಓದುತ್ತಿದ್ದಾಗ ನಾನು ನೋಡಿದ ಮೊದಲ ಮೆಟ್ರೋಪಾಲಿಟನ್ ಸಿಟಿ ಎಂದರೆ ಅದು ಬೆಂಗಳೂರು. ಆ ನೆನಪು ನನ್ನ ಮನಸ್ಸಿನಲ್ಲಿ ಹಸಿರಾಗಿದೆ’ ಎಂದು ಧರ್ಮ ಮಹೇಶ್ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




