‘ರೇವ್​ ಪಾರ್ಟಿಯಲ್ಲಿ ನಾನು ಇರಲಿಲ್ಲ’: ಸ್ಪಷ್ಟನೆ ನೀಡಿದ ‘ಜೇಮ್ಸ್​’ ಸಿನಿಮಾ ನಟ ಶ್ರೀಕಾಂತ್

ತೆಲುಗಿನ ಖ್ಯಾತ ನಟ ಶ್ರೀಕಾಂತ್​ ಅವರು ಒಂದು ಗಂಭೀರವಾದ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯಲ್ಲಿ ನಡೆದ ರೇವ್​ ಪಾರ್ಟಿಯಲ್ಲಿ ಟಾಲಿವುಡ್​ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ ಎನ್ನಲಾಗಿದೆ. ಆದರೆ ಇದರಲ್ಲಿ ತಾವು ಪಾಲ್ಗೊಂಡಿಲ್ಲ ಎಂದು ಶ್ರೀಕಾಂತ್​ ಅವರು ಹೇಳಿದ್ದಾರೆ. ಕನ್ನಡದ ‘ಜೇಮ್ಸ್​’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಶ್ರೀಕಾಂತ್​ ಫೇಮಸ್​ ಆಗಿದ್ದಾರೆ.

‘ರೇವ್​ ಪಾರ್ಟಿಯಲ್ಲಿ ನಾನು ಇರಲಿಲ್ಲ’: ಸ್ಪಷ್ಟನೆ ನೀಡಿದ ‘ಜೇಮ್ಸ್​’ ಸಿನಿಮಾ ನಟ ಶ್ರೀಕಾಂತ್
ಶ್ರೀಕಾಂತ್​

Updated on: May 20, 2024 | 5:26 PM

ತೆಲುಗು ಚಿತ್ರರಂಗದಲ್ಲಿ ಆಗಾಗ ಮಾದಕ ದ್ರವ್ಯದ ವಾಸನೆ ಬಡಿಯುತ್ತದೆ. ಈಗ ಮತ್ತೆ ಟಾಲಿವುಡ್​ (Tollywood) ಸೆಲೆಬ್ರಿಟಿಗಳ ಹೆಸರು ನಶೆ ವ್ಯವಹಾರದ ಜೊತೆ ತಳುಕು ಹಾಕಿಕೊಂಡಿದೆ. ಬೆಂಗಳೂರಿನಲ್ಲಿ (Rave Party) ರೇವ್​ ಪಾರ್ಟಿ ನಡೆದಿದ್ದು, ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದೆ. ನಟಿ ಹೇಮಾ ಅವರು ರೇವ್​ ಪಾರ್ಟಿಯಲ್ಲಿದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ನಡುವೆ ಟಾಲಿವುಡ್​ ನಟ ಶ್ರೀಕಾಂತ್​ (Telugu Actor Srikanth) ಹೆಸರು ಕೂಡ ಕೇಳಿಬಂದಿತ್ತು. ಆದರೆ ಅದಕ್ಕೆ ಶ್ರೀಕಾಂತ್​ ಅವರು ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ಮೂಲಕ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

‘ನಾನು ನನ್ನ ಮನೆಯ ಮುಂದೆಯೇ ನಿಂತಿದ್ದೇನೆ. ಜನರು ಇದನ್ನು ಪರಿಶೀಲಿಸಬಹುದು. ಬೆಂಗಳೂರಿನಲ್ಲಿ ಪೊಲೀಸರು ದಾಳಿ ನಡೆಸಿದ ರೇವ್​ ಪಾರ್ಟಿಯಲ್ಲಿ ನನ್ನ ಹೆಸರು ಕೇಳಿಬಂದಿದ್ದು ನೋಡಿ ನನಗೆ ಅಚ್ಚರಿ ಆಯಿತು. ಈ ಸುದ್ದಿ ಕೇಳಿ ಮೊದಲಿಗೆ ನನ್ನ ಕುಟುಂಬದರು ನಕ್ಕರು. ಆದರೆ ಯೂಟ್ಯೂಬ್​ನಲ್ಲಿ ಈ ಬಗ್ಗೆ ಅನೇಕ ಸುದ್ದಿಗಳು ಹರಿದಾಡಲು ಆರಂಭಿಸಿದಾದ ನಾನು ಸ್ಪಷ್ಟನೆ ನೀಡಲು ನಿರ್ಧರಿಸಿದೆ’ ಎಂದು ಶ್ರೀಕಾಂತ್​ ಹೇಳಿದ್ದಾರೆ.

‘ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ ಮಾಧ್ಯಮದ ಅನೇಕ ಸ್ನೇಹಿತರು ನನಗೆ ಕರೆ ಮಾಡಿ ವಿಷಯವನ್ನು ಸ್ಪಷ್ಟಪಡಿಸಿಕೊಂಡರು. ಆದರೆ ಕೆಲವು ವಾಹಿನಿಯವರು ಖಚಿತತೆ ಇಲ್ಲದೇ ಸುದ್ದಿ ಪ್ರಸಾರ ಮಾಡಿದರು. ಅದು ಅವರ ತಪ್ಪಲ್ಲ. ಯಾಕೆಂದರೆ, ಮೊದಲ ಬಾರಿಗೆ ನಾನು ವಿಡಿಯೋಗಳಲ್ಲಿ ಗಡ್ಡ ಇರುವ ವ್ಯಕ್ತಿಯನ್ನು ನೋಡಿದಾಗ ನನ್ನ ರೀತಿ ಕಾಣಿಸಿದ್ದಾನೆ’ ಎಂದಿದ್ದಾರೆ ಶ್ರೀಕಾಂತ್​.

ಇದನ್ನೂ ಓದಿ: ರೇವ್​ ಪಾರ್ಟಿ ಸ್ಥಳದಲ್ಲೇ ವಿಡಿಯೋ ಮಾಡಿ ‘ಹೈದರಾಬಾದ್​ನಲ್ಲಿ ಇದೀನಿ’ ಅಂತ ಸುಳ್ಳು ಹೇಳಿದ ನಟಿ ಹೇಮಾ

‘ಮತ್ತೊಮ್ಮೆ ನಾನು ಸ್ಪಷ್ಟನೆ ನೀಡುತ್ತೇನೆ. ರೇವ್​ ಪಾರ್ಟಿಗಳಿಗೆ ತೆರಳುವ ಅಭ್ಯಾಸ ನನಗೆ ಇಲ್ಲ. ಅದರ ಅರ್ಥ ಏನು ಎಂಬುದೇ ನನಗೆ ತಿಳಿದಿಲ್ಲ. ಕೆಲವೊಮ್ಮೆ ನಾನು ಬರ್ತ್​ಡೇ ಪಾರ್ಟಿಗಳಿಗೆ ಹೋಗುತ್ತೇನೆ. ಆದರೆ ಒಂದು ಗಂಟೆಯೊಳಗೆ ವಾಪಸ್​ ಬರುತ್ತೇನೆ. ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ ಅದರ ಸತ್ಯಾಸತ್ಯತೆಯನ್ನು ಖಚಿತ ಮಾಡಿಕೊಳ್ಳಿ ಎಂದು ಮಾಧ್ಯಮದವರಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಯಾಕೆಂದರೆ, ಈ ಮೊದಲು ಕೂಡ ನಾನು ವಿಚ್ಛೇದನ ಪಡೆಯುತ್ತೇನೆ ಅಂತ ಗಾಳಿಸುದ್ದಿ ಹಬ್ಬಿಸಿದ್ದರು’ ಎಂದು ಶ್ರೀಕಾಂತ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us