ಬಿಡುಗಡೆಗೂ ಮುನ್ನ ‘ಜನ ನಾಯಗನ್’ ಚಿತ್ರದಲ್ಲಿ ಬದಲಾವಣೆ: ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಹೆಸರು ಹೇಗಿದೆ?

‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಿಸಿರುವ ‘ಜನ ನಾಯಗನ್’ ಸಿನಿಮಾ ಜುಲೈ 23ರಂದು ವಿಶ್ವಾದ್ಯಂತ ಸುಮಾರು 8 ಸಾವಿರ ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದ ಬಳಿಕ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಆದ್ದರಿಂದ ನಿರೀಕ್ಷೆ ಜಾಸ್ತಿ ಇದೆ.

ಬಿಡುಗಡೆಗೂ ಮುನ್ನ ‘ಜನ ನಾಯಗನ್’ ಚಿತ್ರದಲ್ಲಿ ಬದಲಾವಣೆ: ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಹೆಸರು ಹೇಗಿದೆ?
Thalapathy Vijay
Edited By:

Updated on: Jul 22, 2026 | 12:19 PM

ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸುಮಾರು ಏಳು ತಿಂಗಳ ಸುದೀರ್ಘ ವಿಳಂಬದ ನಂತರ ಜುಲೈ 23ರಂದು ಅದ್ದೂರಿಯಾಗಿ ತೆರೆಕಾಣುತ್ತಿರುವ ಈ ಚಿತ್ರದಲ್ಲಿ ವಿಜಯ್ (Thalapathy Vijay) ಅವರ ರಾಜಕೀಯ ಯಶಸ್ಸು ಹಾಗೂ ಪ್ರಸ್ತುತ ಸಿಎಂ ಹುದ್ದೆಗೆ ತಕ್ಕಂತೆ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಚಿತ್ರದ ಬಿಡುಗಡೆಗೆ ಸಿಬಿಎಫ್‌ಸಿ ಹಸಿರು ನಿಶಾನೆ ತೋರಿದ್ದು, ಈ 7 ತಿಂಗಳ ವಿಳಂಬದ ಅವಧಿಯಲ್ಲಿ ಚಿತ್ರಕ್ಕೆ ಹೊಸ ದೃಶ್ಯಗಳನ್ನು ಸೇರ್ಪಡೆಗೊಳಿಸಿ ಅಗತ್ಯ ಬದಲಾವಣೆ ಮಾಡಲಾಗಿದೆ.

ಎಚ್. ವಿನೋದ್ ನಿರ್ದೇಶನದ ಈ ರಾಜಕೀಯ ಕಥಾಹಂದರದ ಆ್ಯಕ್ಷನ್ ಸಿನಿಮಾ ಆರಂಭದಲ್ಲಿ ಜನವರಿಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗದ ಕಾರಣ ಚಿತ್ರ ಮುಂದೂಡಲ್ಪಟ್ಟಿತ್ತು. ಈ ಮಧ್ಯೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಭರ್ಜರಿ ಜಯಗಳಿಸಿ, ವಿಜಯ್ ಅವರು ರಾಜ್ಯದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.

ಕಳೆದ ಒಂದು ದಶಕದಿಂದ ವಿಜಯ್ ಸಿನಿಮಾಗಳಲ್ಲಿ ‘ದಳಪತಿ ವಿಜಯ್’ ಎಂದು ಟೈಟಲ್ ಕಾರ್ಡ್‌ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಟೈಟಲ್ ಕಾರ್ಡ್‌ನಲ್ಲಿ ‘ಮಾನ್ಯ ತಮಿಳುನಾಡು ಮುಖ್ಯಮಂತ್ರಿ’ ಎಂದು ಸೇರಿಸಲಾಗಿದೆ. ಪಿಟಿಐ ವರದಿಯ ಪ್ರಕಾರ, ವಿಜಯ್ ಅವರು ಸಿಗ್ನೇಚರ್ ಶೈಲಿಯಲ್ಲಿ ಕೈಬೀಸುವ ದೃಶ್ಯವನ್ನು ಚಿತ್ರದ ‘ರಾವಣ ಮಾವಂದಾ’ ಗೀತೆಯಲ್ಲಿ ಸೇರಿಸಲಾಗಿದೆ. ವಿಜಯ್ ಅವರ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಹಲವು ನೇರ ಉಲ್ಲೇಖಗಳು ಹಾಗೂ ಸೂಚನೆಗಳನ್ನು ಸಿನಿಮಾದ ಅಂತಿಮ ಕಟ್‌ನಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ಹೊಸ ಟೀಸರ್ ನೋಡಿ ವಾವ್ ಎಂದ ವಿಜಯ್ ಅಭಿಮಾನಿಗಳು

ಸಿಬಿಎಫ್‌ಸಿ ಸೂಚನೆಯಂತೆ ಚಿತ್ರದ ಸುಮಾರು 20 ಸೆಕೆಂಡ್‌ಗಳ ದೃಶ್ಯಗಳನ್ನು ಕಟ್ ಮಾಡಲಾಗಿದ್ದು, 10 ಸೆಕೆಂಡ್‌ಗಳ ಬದಲೀ ದೃಶ್ಯಗಳನ್ನು ಸೇರಿಸಲಾಗಿದೆ. ಜೊತೆಗೆ ಧಾರ್ಮಿಕ ಉಲ್ಲೇಖಗಳಿರುವ ಶಬ್ದಗಳನ್ನು ಮ್ಯೂಟ್ ಮಾಡಲಾಗಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ನರೇನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣ ಹಾಗೂ ಪ್ರದೀಪ್ ಇ. ರಾಘವ್ ಅವರ ಸಂಕಲನ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:35 pm, Tue, 21 July 26

Loading...
Unable to load recommendations.
Follow Us