Vetrimaran: ಜೂ ಎನ್​ಟಿಆರ್ ಜೊತೆ ಸಿನಿಮಾ ಖಾತ್ರಿಗೊಳಿಸಿದ ವೆಟ್ರಿಮಾರನ್

|

Updated on: Apr 11, 2023 | 10:09 PM

Vetrimaran: ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾದ ವೆಟ್ರಿಮಾರನ್, ಸ್ಟಾರ್ ನಟ ಜೂ ಎನ್​ಟಿಆರ್ ಜೊತೆ ಸಿನಿಮಾ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Vetrimaran: ಜೂ ಎನ್​ಟಿಆರ್ ಜೊತೆ ಸಿನಿಮಾ ಖಾತ್ರಿಗೊಳಿಸಿದ ವೆಟ್ರಿಮಾರನ್
ವೆಟ್ರಿಮಾರನ್-ಜೂ ಎನ್​ಟಿಆರ್
Follow us on

ವೆಟ್ರಿಮಾರನ್ (Vetrimaran), ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ಈ ವರೆಗೆ ನಿರ್ದೇಶಿಸಿರುವುದು ಆರೇ ಸಿನಿಮಾಗಳಾದರೂ ಎಲ್ಲ ಸಿನಿಮಾಗಳು ಸಹ ಒಂದಕ್ಕಿಂತಲೂ ಒಂದು ಭಿನ್ನ ಮತ್ತು ತೀವ್ರತೆಯುಳ್ಳ ಸಿನಿಮಾಗಳು. ಶೋಷಣೆ, ದೌರ್ಜನ್ಯ, ಅಸಮಾನತೆಗಳನ್ನು ತಮ್ಮ ಸಿನಿಮಾ ವಸ್ತುಗಳನ್ನಾಗಿ ಆಯ್ದುಕೊಳ್ಳುವ ವೆಟ್ರಿಮಾರನ್ ಅದನ್ನು ಪ್ರೆಸೆಂಟ್ ಮಾಡುವ ರೀತಿ ಅತ್ಯದ್ಭುತ. ವೆಟ್ರಿಮಾರನ್, ನಟ ಜೂ ಎನ್​ಟಿಆರ್ (Jr NTR) ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಹುದಿನಗಳಿಂದಲೂ ಹರಿದಾಡುತ್ತಿದ್ದು, ಈ ಬಗ್ಗೆ ಈಗ ಸ್ವತಃ ವೆಟ್ರಿಮಾರನ್ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗಷ್ಟೆ ವೆಟ್ರಿಮಾರನ್ ನಿರ್ದೇಶನದ ವಿಡುದಲೈ (Vidudalai) ಸಿನಿಮಾ ಬಿಡುಗಡೆ ಆಗಿದ್ದು ಸಿನಿಮಾದ ಬಗ್ಗೆ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ತೀವ್ರ ಪ್ರಶಂಸೆ ವ್ಯಕ್ತವಾಗಿದೆ. ಹಾಸ್ಯನಟರಾಗಿದ್ದ ಸೂರಿ ಅವರನ್ನು ನಾಯಕನ್ನಾಗಿ ಹಾಕಿಕೊಂಡು ವೆಟ್ರಿಮಾರನ್ ಈ ಸಿನಿಮಾ ಮಾಡಿದ್ದು ಸಿನಿಮಾದಲ್ಲಿ ವಿಜಯ್ ಸೇತುಪತಿ ಸಹ ಇದ್ದಾರೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ವೆಟ್ರಿಮಾರನ್ ತೊಡಗಿಕೊಂಡಿದ್ದು, ಈ ವೇಳೆ ಜೂ ಎನ್​ಟಿಆರ್ ಜೊತೆಗಿನ ತಮ್ಮ ಸಿನಿಮಾದ ಬಗ್ಗೆ ವೆಟ್ರಿ ಮಾತನಾಡಿದ್ದಾರೆ.

ತಾವು ಜೂ ಎನ್​ಟಿಆರ್ ಜೊತೆಗೆ ಸಿನಿಮಾ ಮಾಡುವುದಾಗಿ ಹೇಳಿರುವ ವೆಟ್ರಿಮಾರನ್, ಅಸುರನ್ ಸಿನಿಮಾದ ಬಳಿಕ ನಾನು ಜೂ ಎನ್​ಟಿಆರ್ ಅವರನ್ನು ಭೇಟಿಯಾಗಿದ್ದೆ. ಲಾಕ್​ಡೌನ್ ಸಮಯದಲ್ಲಿ ನಾವು ಸಿನಿಮಾದ ಬಗ್ಗೆ ಚರ್ಚೆಗಳನ್ನು ಮಾಡಿದೆವು. ಸಿನಿಮಾದ ಚಿತ್ರಕತೆ ಲಾಕ್ ಆಗಿದ್ದು, ನಾವು ಒಟ್ಟಿಗೆ ಸಿನಿಮಾ ಮಾಡಲಿದ್ದೇವೆ ಎಂದಿದ್ದಾರೆ.
ವೆಟ್ರಿಮಾರನ್ ಬಹಳ ಡಾರ್ಕ್ ಆಗಿ ಸಿನಿಮಾ ಮಾಡುವ ನಿರ್ದೇಶಕ, ಜೂ ಎನ್​ಟಿಆರ್ ಯಾವುದೇ ಪಾತ್ರಕ್ಕಾದರೂ ಹೊಂದುವ ನಟ. ಹಾಗಾಗಿ ಇವರಿಬ್ಬರು ಒಟ್ಟಿಗೆ ಮಾಡುವ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಸಿನಿಮಾ ಪ್ರೇಮಿಗಳಲ್ಲಿ ಹುಟ್ಟಿಕೊಂಡಿದೆ.

ವಿಡುದಲೈ ಸಿನಿಮಾವು ಮಾರ್ಚ್ 31 ರಂದು ಬಿಡುಗಡೆ ಆಗಿದೆ. ಆದರೆ ಕೇವಲ ತಮಿಳು ಭಾಷೆಯಲ್ಲಷ್ಟೆ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಸಿನಿಮಾವನ್ನು ತೆಲುಗು ಭಾಷೆಗೂ ಡಬ್ ಮಾಡಲಾಗಿದ್ದು, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾವನ್ನು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ವಿತರಣೆ ಮಾಡುತ್ತಿದ್ದಾರೆ. ವಿಡುದಲೈ ಸಿನಿಮಾವು ತೆಲುಗಿನಲ್ಲಿ ಏಪ್ರಿಲ್ 15 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕಾಗಿ ವೆಟ್ರಿಮಾರನ್ ಹೈದರಾಬಾದ್​ನಲ್ಲಿ ಬೀಡು ಬಿಟ್ಟಿದ್ದಾರೆ.

ಇದನ್ನೂ ಓದಿ: NTR 30: ಜೂ ಎನ್​ಟಿಆರ್ ಸಿನಿಮಾಕ್ಕೆ ಹಾಲಿವುಡ್ ಆಕ್ಷನ್ ನಿರ್ದೇಶಕ

ವೆಟ್ರಿಮಾರನ್ ಈ ಹಿಂದೆ ಪೊಲ್ಲಾಧವನ್, ರಾಷ್ಟ್ರಪ್ರಶಸ್ತಿ ವಿಜೇತ ಆಡುಕುಲಂ, ಆಸ್ಕರ್​ಗೆ ಭಾರತದಿಂದ ಅಧಿಕೃತವಾಗಿ ಕಳಿಸಲ್ಪಟ್ಟಿದ್ದ ವಿಸಾರನೈ, ಸೂಪರ್ ಹಿಟ್ ಸಿನಿಮಾ ವಡಾ ಚೆನ್ನೈ, ಅಸುರನ್ ಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಇವರದ್ದೇ ನಿರ್ದೇಶನದ ವಿಡುದಲೈ ಸಿನಿಮಾ ಬಿಡುಗಡೆ ಆಗಿದ್ದು ಸಿನಿಮಾದಲ್ಲಿ ಪೊಲೀಸರು ಹಾಗೂ ಹೋರಾಟಗಾರರ ನಡುವಿನ ಸಂಘರ್ಷ, ಪೊಲೀಸರ ದೌರ್ಜನ್ಯಗಳನ್ನು ತೋರಿಸಲಾಗಿದೆ. ಇಷ್ಟು ವರ್ಷ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದ ವಾಸು ಈ ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೋರಾಟಗಾರನ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗಿದ್ದು, ಎರಡನೇ ಭಾಗ ಇದೇ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ