
ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಕಿಂಗ್ಡಮ್’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಇಂದು (ಜುಲೈ 26) ತಿರುಪತಿಯಲ್ಲಿ ಅದ್ಧೂರಿಯಾಗಿ ನಡೆಯಿತು. ತಿರುಪತಿಯ ನೆಹರು ಮೈದಾನದಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಯ್ತು. ಕಾರ್ಯಕ್ರಮಕ್ಕೆ ಯಾವುದೇ ವಿಶೇಷ ಅತಿಥಿಗಳನ್ನು ಆಹ್ವಾನಿಸದೆ, ನಾಯಕ ವಿಜಯ್ ದೇವರಕೊಂಡ, ನಾಯಕಿ ಭಾಗ್ಯಶ್ರೀ ಬೋರ್ಸೆ ಮತ್ತು ನಿರ್ಮಾಪಕ ನಾಗ ವಂಶಿ ಮೂವರು ಮಾತ್ರವೇ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಿಜಯ್ ದೇವರಕೊಂಡ ವಿಶೇಷವಾಗಿ ಈ ಬಾರಿ ರಾಯಲಸೀಮೆ ಭಾಷೆಯಲ್ಲಿ ಮಾತನಾಡಿ ಗಮನ ಸೆಳೆದರು. ‘ಈ ಒಂದು ಬಾರಿ ತಿರುಪತಿ ವೆಂಕಟರಮಣ ಸ್ವಾಮಿ ನನ್ನ ಜೊತೆಗೆ, ನನ್ನ ಸಿನಿಮಾದ ಜೊತೆಗೆ ನಿಂತು ಬಿಟ್ಟರೆ ನಂಬರ್ 1 ಆಗಿಬಿಡುತ್ತೇನೆ, ಟಾಪ್ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳುವೆ’ ಎಂದರು.
‘ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದೇನೆ. ಈ ಬಾರಿ ನನ್ನ ಸಿನಿಮಾದ ಇತರೆ ವಿಭಾಗಗಳನ್ನು ನೋಡಿಕೊಳ್ಳಲು ಬಹಳ ಒಳ್ಳೆಯ ಜನ ಇದ್ದಾರೆ. ನಿರ್ದೇಶಕ ಗೌತಮ್ ತಿನರೂರಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅನಿರುದ್ಧ್ ರವಿಚಂದ್ರನ್ ಅದ್ಭುತವಾಗಿ ಸಂಗೀತ ನೀಡಿದ್ದಾರೆ. ಎಡಿಟರ್ ನವೀನ್ ನೂಲಿ, ನಮ್ಮ ನಿರ್ಮಾಪಕ ನಾಗವಂಶಿ ಸಂದರ್ಶನಗಳಲ್ಲಿ ಸಖತ್ ಫರ್ಪಾರ್ಮೆನ್ಸ್ ಕೊಡುತ್ತಿದ್ದಾರೆ ಎಂದು ತಮಾಷೆಯಾಗಿ ಹೇಳಿದರು. ಹೊಸ ನಾಯಕಿ ಭಾಗ್ಯಶ್ರೀ ನಟನೆಯನ್ನು ಕೊಂಡಾಡಿದರು.
‘ಎಲ್ಲರೂ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಈಗಲೂ ಕೆಲಸ ಮಾಡುತ್ತಲೇ ಇದ್ದಾರೆ. ಇನ್ನು ಬೇಕಾಗಿರುವುದು ಎರಡನೇ ಆ ವೆಂಕಟರಮಣ ಸ್ವಾಮಿ ದಯೆ ಮತ್ತು ನಿಮ್ಮ ಆಶೀರ್ವಾದ. ಈ ಎರಡು ನನ್ನ ಜೊತೆಗೆ ಇದ್ದು ಬಿಟ್ಟರೆ ನಮ್ಮನ್ಯಾರು ತಡೆಯೋರು’ ಎಂದಿದ್ದಾರೆ ವಿಜಯ್ ದೇವರಕೊಂಡ. ‘ಇನ್ನು ನಾಲ್ಕು ದಿನಗಳಲ್ಲಿ ನಿಮ್ಮನ್ನೆಲ್ಲ ಚಿತ್ರಮಂದಿರಗಳಲ್ಲಿ ಭೇಟಿ ಆಗುತ್ತೇನೆ. ಆ ವರೆಗೆ ನೀವೇ ನೋಡಿಕೊಳ್ಳಬೇಕು ವೆಂಕಟರಮಣ ಸ್ವಾಮಿ’ ಎನ್ನುತ್ತಾ ಗೋವಿಂದ, ಗೋವಿಂದ ಎನ್ನುತ್ತಾ ಮಾತು ಮುಗಿಸಿದರು ವಿಜಯ್ ದೇವರಕೊಂಡ.
‘ಕಿಂಗ್ಡಮ್’ ಸಿನಿಮಾ ಸ್ಪೈ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ. ಸಿನಿಮಾದ ಕೆಲ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಮೆಚ್ಚುಗೆ ಗಳಿಸಿವೆ. ಸಿನಿಮಾದ ಟೀಸರ್ ಸಹ ಗಮನ ಸೆಳೆದಿತ್ತು. ಸಿನಿಮಾದಲ್ಲಿ ಭಿನ್ನ ಲುಕ್ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಸಿನಿಮಾ ಜುಲೈ 31ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Sat, 26 July 25