ರೇಣುಕಾಸ್ವಾಮಿ ಕೊಲೆಯಾದಾಗ ಇರಲಿಲ್ಲ ಎಂದಿದ್ದ ದರ್ಶನ್​ ಈಗ ಪೊಲೀಸರ ಬಳಿ ಹೇಳಿದ್ದೇ ಬೇರೆ!

ರೇಣುಕಾಸ್ವಾಮಿ ಕೊಲೆಯಾದಾಗ ಆ ಜಾಗದಲ್ಲಿರಲಿಲ್ಲ ಎಂದು ನಟ ದರ್ಶನ್ ಹೇಳಿದ್ದರು. ಆದರೆ, ಇತರ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರಿಗೆ ಸತ್ಯ ವಿಷಯ ಗೊತ್ತಾಗಿದೆ. ನಂತರ ಪುನಃ ಈ ಬಗ್ಗೆ ದರ್ಶನ್​ರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ದರ್ಶನ್ ಬೇರೆಯೇ ಹೇಳಿಕೆ ನೀಡಿದ್ದಾರೆ. ಹಾಗಾದರೆ, ಅವರು ಹೇಳಿದ್ದೇನು? ತಿಳಿಯಲು ಮುಂದೆ ಓದಿ.

ರೇಣುಕಾಸ್ವಾಮಿ ಕೊಲೆಯಾದಾಗ ಇರಲಿಲ್ಲ ಎಂದಿದ್ದ ದರ್ಶನ್​ ಈಗ ಪೊಲೀಸರ ಬಳಿ ಹೇಳಿದ್ದೇ ಬೇರೆ!
ದರ್ಶನ್
Edited By:

Updated on: Jun 11, 2024 | 2:46 PM

ಬೆಂಗಳೂರು, ಜೂನ್ 11: ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಇದೀಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ರೇಣುಕಾಸ್ವಾಮಿ (Renukaswamy) ಕೊಲೆಯಾದಾಗ ಆ ಜಾಗದಲ್ಲಿ ಇರಲಿಲ್ಲ ಎಂದಿದ್ದ ದರ್ಶನ್ ಇದೀಗ ಪೊಲೀಸರ ಬಳಿ ಹೇಳಿದ್ದೇ ಬೇರೆ. ಜೊತೆಗಿದ್ದವರು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ಆದರೆ, ಅವರಿಗೆ ಬುದ್ಧಿವಾದ ಹೇಳಿ ಅಲ್ಲಿಂದ ತೆರಳಿದ್ದೆ ಎಂದು ಇದೀಗ ಪೊಲೀಸರ ಬಳಿ ದರ್ಶನ್ ಹೇಳಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸರ ವಿಚಾರಣೆ ದರ್ಶನ್ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಈವರೆಗೆ ನಟ ದರ್ಶನ್ ಸೇರಿ 13 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದಾಗ ಅಲ್ಲಿ ಇರಲಿಲ್ಲ ಎಂದು ದರ್ಶನ್​ ಹೇಳಿದ್ದರು. ಆದರೆ, ಪೊಲೀಸರ ತನಿಖೆಯಿಂದ ದರ್ಶನ್ ಅಲ್ಲಿ ಇದ್ದರು ಎಂಬುದು ತಿಳಿದುಬಂದಿತ್ತು. ಇದಾದ ನಂತರ ಈಗ ವಿಚಾರಣೆ ವೇಳೆ ಸ್ಥಳದಲ್ಲಿ ಇದ್ದಿದ್ದಾಗಿ ದರ್ಶನ್ ಹೇಳಿದ್ದಾರೆ.

ಇವನೇನಾ ಎಂದು ಕೇಳಿ ಬಂದಿದ್ದೆ: ದರ್ಶನ್

ದರ್ಶನ್​ ​ಸೇರಿದಂತೆ ಎಲ್ಲಾ ಆರೋಪಿಗಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ, ‘ಶೆಡ್ ಹತ್ತಿರ ಹೋಗಿ ಇವನೇನಾ ಅಂತ ಮಾತನಾಡಿಸಿ ವಾಪಸ್ ಬಂದೆ. ನಂತರ ಏನಾಯಿತು ಅಂತ ಗೊತ್ತಿಲ್ಲ’ ಎಂದು ನಟ ದರ್ಶನ್ ಹೇಳಿದ್ದಾರೆ.

ಇದೀಗ ಉಳಿದ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ದರ್ಶನ್​ ಶೆಡ್​ಗೆ ಬಂದು ಹೋದ ಬಗ್ಗೆ, ಸಿಕ್ಕ ವಸ್ತುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ದರ್ಶನ್​​ಗೆ ಸಂಬಂಧಿಸಿದ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ.

ಕೊಲೆ ಕೇಸ್​ನಲ್ಲಿ ಬಂಧಿತ ಆರೋಪಿಗಳ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಇದರಿಂದ, ಘಟನೆ ವೇಳೆ ನಟ ದರ್ಶನ್​ ಇದ್ದುದು ಗೊತ್ತಾಗಿತ್ತು. ಸದ್ಯ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿತರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೇಳಿಕೆಗಳ ಫೈಲ್​​ಗಳನ್ನು ಅನ್ನಪೂರ್ಣೇಶ್ವರಿನಗರ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ದರ್ಶನ್ ಬಂಧನ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಹೇಳಿದ್ದೇನು? ವಿಡಿಯೋ ನೋಡಿ

ಪೊಲೀಸರು, ದರ್ಶನ್​ ಹಾಗೂ ಉಳಿದ ಆರೋಪಿಗಳನ್ನು ಮುಖಾಮುಖಿಯಾಗಿ ಕುಳ್ಳಿರಿಸಿ ಪ್ರಶ್ನೆಗಳನ್ನು ಕೇಳಿ, ವಿಚಾರಣೆಗೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.

ಈವರೆಗೆ 13 ಮಂದಿಯ ಬಂಧನ; ಬಂಧಿತರು ಯಾರೆಲ್ಲ?

ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್​, ಪವಿತ್ರಾಗೌಡ ಸೇರಿ ಈವರೆಗೆ 13 ಆರೋಪಿಗಳ ಬಂಧನವಾಗಿದೆ. ವಿ.ವಿನಯ್, ಆರ್.ನಾಗರಾಜು, ಎಂ.ಲಕ್ಷ್ಮಣ್​, ಎಸ್​.ಪ್ರದೋಶ್​, ಕೆ.ಪವನ್, ದೀಪಕ್​ಕುಮಾರ್, ನಂದೀಶ್​, ಕಾರ್ತಿಕ್​, ನಿಖಿಲ್ ನಾಯಕ್​, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್​ ರಾಘುನನ್ನು ಬಂಧಿಸಲಾಗಿದೆ. ಸಂಜೆ 4.30ಕ್ಕೆ ಕೋರ್ಟ್​ಗೆ ಹಾಜರುಪಡಿಸಲಾಗುತ್ತದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆ

ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೇಸೆಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿ (33) ಎಂಬವರನ್ನು ಹತ್ಯೆ ಮಾಡಲಾಗಿತ್ತು. ಪ್ರಾಥಮಿಕ ತನಿಖೆಗಳಲ್ಲಿ ಈ ವಿಚಾರ ತಿಳಿದುಬಂದಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.

ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದು. ದರ್ಶನ್ ಆಪ್ತೆ ಪವಿತ್ರಾ ಗೌಡರಿಂದಾಗಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಕಾರಣಕ್ಕೆ ಪವಿತ್ರಾ ಮೇಲಿನ ಸಿಟ್ಟಿನಿಂದ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದ.

ಇದನ್ನೂ ಓದಿ: ಮೋರಿಯಲ್ಲಿದ್ದ ಶವ ಎಳೆದಾಡಿದ್ದ ನಾಯಿಗಳು: ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದೇ ಹೀಗೆ!

ಇದರಿಂದಾಗಿ ದರ್ಶನ್, ರೇಣುಕಾ ಸ್ವಾಮಿ ಮೇಲೆ ಸಿಟ್ಟುಕೊಂಡು ಬುದ್ಧಿಕಲಿಸಲು ನಿಶ್ಚಯಿಸಿದ್ದರು. ನಂತರ ಅಭಿಮಾನಿ ಬಳಗದ ನೆರವಿನಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ನಂತರ ಶವವನ್ನು ಮೋರಿಗೆ ಎಸೆಯಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:25 pm, Tue, 11 June 24

Loading...
Unable to load recommendations.
Follow Us